ಮುಳ್ಳಯ್ಯನಗಿರಿಗೆ ಸಾಮರ್ಥ್ಯಕ್ಕಿಂತ ಹೆಚ್ಚು ಮಂದಿ ಪ್ರವಾಸಿಗರು ಆಗಮಿಸುತ್ತಿದ್ದು, ಜಿಲ್ಲೆಯ ಪ್ರವಾಸೋದ್ಯಮ ನೀತಿಯಲ್ಲಿ ಅಮೂಲಾಗ್ರ ಬದಲಾವಣೆ ತರಲು ಚಿಂತನೆ ನಡೆಸಲಾಗಿದೆ ಎಂದು ಜಿಲ್ಲಾಧಿಕಾರಿ ಸಿ.ಎನ್.ಮೀನಾನಾಗರಾಜ್ ಹೇಳಿದರು.
ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿ, ಮುಂದಿನ ದಿನಗಳಲ್ಲಿ ಜಿಲ್ಲಾಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿಗಳು, ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿಗಳ ಸಮ್ಮುಖದಲ್ಲಿ ಮಾಹಿತಿ ನೀಡಲಾಗುವುದು. ಸಿಇಓ ಅವರಲ್ಲಿ ಅಪಾರ ಮಾಹಿತಿ ಇದೆ ಎಂದರು.
ಕಳೆದವಾರ ಸಾವಿರಾರು ಮಂದಿ ಪ್ರವಾಸಿಗರು ಮುಳ್ಳಯ್ಯನಗಿರಿಗೆ ಸೇರಿದಂತೆ ಗಿರಿಪ್ರದೇಶಕ್ಕೆ ಭೇಟಿ ನೀಡಿದ್ದಾರೆ. ಟ್ರಾಫಿಕ್ ಜಾಮ್ ಆಗಿದ್ದರಿಂದ ಸ್ವಲ್ಪ ತೊಂದರೆಯಾಗಿದೆ. ಯಾವ ಪ್ರವಾಸಿಗರ ವಾಹನವನ್ನು ವಾಪಸ್ ಕಳುಹಿಸಿಲ್ಲ, ಸ್ವಲ್ಪವಾಹನಗಳು ಗಿರಿಯಿಂದ ಹಿಂದಿರುಗಿದ ಬಳಿಕ ಕೈಮರದಲ್ಲಿ ನಿಂತಿದ್ದ ವಾಹನಗಳಿಗೆ ಗಿರಿಗೆ ತೆರಳಲು ಅವಕಾಶ ಕಲ್ಪಿಸಲಾಗಿತ್ತು ಎಂದು ತಿಳಿಸಿದರು.
ಈಗ ಮುಜರಾಯಿ ಇಲಾಖೆ ಆನ್ಲೈನ್ ಮೂಲಕ ಪ್ರವೇಶ ಪಡೆದುಕೊಳ್ಳಬೇಕಿದೆ. ಮುಂದಿನ ದಿನಗಳಲ್ಲಿ ಮುಳ್ಳಯ್ಯನಗಿರಿಗೆ ಭೇಟಿನೀಡಲು ಆನ್ಲೈನ್ನಲ್ಲಿ ಅವಕಾಶ ಪಡೆದುಕೊಳ್ಳುವ ವ್ಯವಸ್ಥೆ ಜಾರಿಗೆ ತರಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ಎತ್ತಿನಭುಜಕ್ಕೆ ಹೆಚ್ಚಿನ ಜನರು ಭೇಟಿ ನೀಡಿರುವ ಕುರಿತು ಕೇಳಿದಾಗ ಸಂಪೂರ್ಣ ಬಂದ್ ಮಾಡುವುದು ಅನಿವಾರ್ಯವಲ್ಲ ಎಂದು ಹೇಳಿದ ಜಿಲ್ಲಾಧಿಕಾರಿಗಳು, ಈಗಾಗಲೇ ಇಲಾಖೆ ಹಿರಿಯ ಅಧಿಕಾರಿಗಳು ಇಬ್ಬರು ಅರಣ್ಯ ಸಿಬ್ಬಂದಿಗೆ ನೋಟೀಸ್ ನೀಡಿದ್ದು, ಅದಕ್ಕೆ ಸಮಜಾಯಿಸಿ ನೀಡಲಿದ್ದಾರೆಂದು ಉತ್ತರಿಸಿದರು.
ಅಕ್ರಮ ಭೂ ಮಂಜೂರಾತಿಗೆ ಸಂಬಂಧಿಸಿದಂತೆ ಯಾವ ಅಧಿಕಾರಿಗಳು ನೇರವಾಗಿ ಭಾಗಿಯಾಗಿದ್ದಾರೆ ಅವರ ಮೇಲೆ ಸರ್ಕಾರವೇ ಕ್ರಮ ಕೈಗೊಳ್ಳಲಿದೆ. ಪ್ರಕರಣ ತನಿಖೆಗೆ ಆಗಮಿಸಿದ್ದ ತಂಡ ಸೀಮಿತ ಅವಧಿಯಲ್ಲಿ ಆಳವಾಗಿ ತನಿಖೆ ನಡೆಸಲು ಸಾಧ್ಯವಾಗಿಲ್ಲ. ಈಗಾಗಲೇ ಒಂದು ತಂಡ ಬೆಂಗಳೂರಿಗೆ ತೆರಳಿದೆ. ಪ್ರಕರಣವನ್ನು ಮೂರು ಭಾಗವಾಗಿ ವಿಂಗಡಿಸಲಾಗಿದೆ. ಮಂಜೂರಾತಿ ಮಾಡಿರುವ ಭೂಮಿ ಅರಣ್ಯ ಇಲಾಖೆಗೆ ಸೇರಿದೆಯೋ ಅಥವಾ ಕಂದಾಯ ಭೂಮಿಯೇ ಎಂಬುದನ್ನು ಸರ್ವೆ ಮೂಲಕ ತಿಳಿದುಕೊಳ್ಳಬೇಕಾಗಿದೆ ಎಂದು ತಿಳಿಸಿದರು.
ಕಳಪೆ ಬಿತ್ತನೆಬೀಜ ವಿತರಣೆ ಕುರಿತು ಗಮನ ಸೆಳೆದಾಗ,ಈ ವಿಷಯವನ್ನು ರೈತಸಂಘದ ಮುಖಂಡರು ನನ್ನ ಗಮನಕ್ಕೆ ತಂದಿದ್ದಾರೆ. ಬಿತ್ತನೆಬೀಜ ಮಾರಾಟಗಾರರು ಮತ್ತು ಬೀಜವನ್ನು ಸಸಿಮಾಡಿ ಮಾರಾಟಮಾಡುತ್ತಿರು ವ ನರ್ಸರಿಯವರೊಂದಿಗೆ ಸಭೆ ನಡೆಸಲಾಗಿದೆ.ಮೂರು ಕಂಪನಿಗಳು ಬಿತ್ತನೆ ಬೀಜಗಳನ್ನು ಮಾರಾಟ ಮಾಡುತ್ತಿವೆ. ಯಾರ ರೈತರು ತರಕಾರಿ ಬಿತ್ತನೆ ಬೀಜ ಖರೀಸುತ್ತಾರೋ ಅವರುಗಳಿಗೆ ಬಿಲ್ ನೀಡಬೇಕೆಂದು ತಿಳಿಸಲಾಗಿದೆ ಎಂದು ಹೇಳಿದರು.
ಕೃಷಿ ಇಲಾಖೆ ವಿಜ್ಞಾನಿಗಳು ಈಗಾಗಲೇ ಪರಿಶೀಲನೆ ನಡೆಸಿದ್ದಾರೆ. ಉತ್ತರ ಭಾಗದಲ್ಲಿ ಬೆಳೆಯುವ ತರಕಾರಿ ಬಿತ್ತನೆಬೀಜಗಳನ್ನು ದಕ್ಷಿಣದಲ್ಲಿ ಬೆಳೆದರ ಅಧಿಕ ತೇವಾಂಶದಿಂದ ಬೆಳೆಬರಲು ಸಾಧ್ಯವಿಲ್ಲವೆಂದು ತಿಳಿಸಿದ್ದಾರೆ. ಬೀಜೋಪಚಾರವನ್ನು ಸರಿಯಾದ ರೀತಿಯಲ್ಲಿ ಕೈಗೊಳ್ಳದಿದ್ದರೆ ಕೆಲವೊಮ್ಮೆ ಬೆಳೆ ಬರುವುದಿಲ್ಲ ಅದಕ್ಕೆ ನಾವು ಹೊಣೆಗಾರರಲ್ಲ ಎಂದು ಬಿತ್ತನೆಜೀಜ ಮಾರಾಟಗಾರರು ತಿಳಿಸಿದ್ದಾರೆಂದರು.
ಬೆಳೆ ಬೆಳೆಯುವ ಮೊದಲು ಮಣ್ಣನ್ನು ಪರೀಕ್ಷೆ ಮಾಡಿಸುವುದು ಮುಖ್ಯವಾಗಿರುತ್ತದೆ. ಈ ಕುರಿತು ಗಮನ ಹರಿಸಲು ಸಂಬಂಧಿಸಿದಂತೆ ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಪ್ರಕರ ಣ ಕುರಿತು ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಳ್ಳಲಾಗಿದೆ. ಈ ವಿಷಯ ರಾಜ್ಯಮಟ್ಟದಲ್ಲಿ ಚರ್ಚೆಯಾಗಿ ಅಂತಿಮ ನಿರ್ಣಯವಾಗಬೇಕು ಎಂದರು.
ಉಪವಿಭಾಗಾಧಿಕಾರಿ ದಲ್ಚಿತ್ಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕ ಡಾ.ರಮೇಶ್ ಇದ್ದರು.