ಮೂಡಿಗೆರೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಇಬ್ಬರು ಯುವಕರು ನೀರಿನಲ್ಲಿ ಮುಳುಗಿ ಸಾವಪ್ಪಿರುವ ಘಟನೆ ನಡೆದಿದೆ.
ಕಳಸ ಪಟ್ಟಣ ಸಮೀಪದ ಭದ್ರಾ ನದಿಯ ಅಂಬಾತೀರ್ಥದ ಕೂಲಿ ಕಾರ್ಮಿಕರೊಬ್ಬರು ಮುಳುಗಿ ಮೃತಪಟ್ಟಿದ್ದಾರೆ. ಸುಂದರಿ ಎಸ್ಟೇಟಿನಲ್ಲಿ ಕೆಲಸ ಮಾಡುತ್ತಿದ್ದ ಮಧ್ಯಪ್ರದೇಶ ಮೂಲದ ಸಾಗರ (19) ತಮ್ಮ ಸ್ನೇಹಿತನ ಜೊತೆ ನದಿಯಲ್ಲಿ ಸ್ನಾನ ಮಾಡಲು ಇಳಿದಾಗ ಅವಘಡ ಸಂಭವಿಸಿದೆ. ಆಳವಾದ ಪ್ರದೇಶದಲ್ಲಿ ಮುಳುಗಿದ್ದ ಅವರ ಮೃತದೇಹ ಪತ್ತೆ ಆಗಿರಲಿಲ್ಲ. ನಂತರ ಮುಳುಗು ತಜ್ಞ ಈಶ್ವರ್ ಮಲ್ಪೆ ಶವವನ್ನು ಪತ್ತೆ ಮಾಡಿದರು. ಶೌರ್ಯ ವಿಪತ್ತು ತಂಡದ ಸದಸ್ಯರು ಮೃತದೇಹವನ್ನು ನೀರಿನಿಂದ ಮೇಲೆತ್ತಲು ಸಹಕಾರ ನೀಡಿದರು.
ಮತ್ತೊಂದು ಪ್ರಕರಣದಲ್ಲಿ ಆಲ್ದೂರು ಸಮೀಪದ ದೋಣಗುಡಿಗೆ ಗ್ರಾಮದ ಬಾಬು ಅಕ್ಕಮ್ಮ ದಂಪತಿ ಪುತ್ರ ಪೂರ್ಣೇಶ್ (18) ಮನೆಯ ಸಮೀಪದ ಕೃಷಿಹೊಂಡದಲ್ಲಿ ಈಜಲು ಹೋಗಿ ಮೃತಪಟ್ಟಿದ್ದಾನೆ.
ಮೂಡಿಗೆರೆ ತಾಲ್ಲೂಕು ಹೆಸಗಲ್ ವಲಯ ಶೌರ್ಯ ವಿಪತ್ತು ನಿರ್ವಹಣಾ ತಂಡದ ಈಜು ತಜ್ಞರಾದ ಹಾಂದಿ ರಾಕೇಶ್, ಪ್ರಶಾಂತ್, ಅಭಿಲಾಶ್ ಯುವಕನ ಮೃತದೇಹವನ್ನು ಕೃಷಿ ಹೊಂಡದಿಂದ ಹೊರತೆಗೆಯಲು ಸಹಕರಿಸಿದರು. ಆಲ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೂರ್ಣೇಶ್ ಮಂಗಳೂರಿನ ಗೋಕರ್ಣನಾಥೇಶ್ವರ ಕಾಲೇಜಿನಲ್ಲಿ ಪಿಯುಸಿ ಶಿಕ್ಷಣ ಮುಗಿಸಿ ಮೂಡಿಗೆರೆ ಯಲ್ಲಿ ಕಂಪ್ಯೂಟರ್ ತರಬೇತಿ ಪಡೆಯುತ್ತಿದ್ದ. ಈ ಬಾರಿ ನರ್ಸಿಂಗ್ ಕೋರ್ಸ್ಗೆ ಸೇರಲು ಸಿದ್ಧತೆ ನಡೆಸಿದ್ದ ಎನ್ನಲಾಗಿದೆ.