ಪೆಟ್ರೋಲ್ ಡೀಸೆಲ್ ಬೆಲೆಯೇರಿಕೆ ಖಂಡಿಸಿ ರಾಜ್ಯ ಸರ್ಕಾರದ ವಿರುದ್ಧ ಬಿ.ಜೆ.ಪಿ. ಮೂಡಿಗೆರೆ ಮಂಡಲದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಪಕ್ಷದ ಮುಖಂಡರು ಮೂಡಿಗೆರೆ ತಾಲ್ಲೂಕು ಕಛೇರಿಗೆ ತೆರಳಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ತಮ್ಮ ಪ್ರತಿಭಟನೆ ವ್ಯಕ್ತಪಡಿಸಿದರು ನಂತರ ತಹಸೀಲ್ದಾರ್ ಮೂಲಕ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮೂಡಿಗೆರೆ ಬಿ.ಜೆ.ಪಿ. ಮಂಡಲ ಅಧ್ಯಕ್ಷ ಟಿ.ಎಂ. ಗಜೇಂದ್ರ ಮಾತನಾಡಿ ರಾಜ್ಯದ ಕಾಂಗ್ರೇಸ್ ಸರ್ಕಾರವು ಕಳೆದ 13 ತಿಂಗಳಿಂದ ಜನವಿರೋಧಿ ನಿಲುವುಗಳನ್ನು ತೋರ್ಪಡಿಸುತ್ತಿದೆ. ಅಧಿಕಾರಕ್ಕೆ ಬರಬೇಕೆಂದು ಬೇಕಾಬಿಟ್ಟಿ ಯೋಜನೆಗಳನ್ನು ಘೋಷಣೆ ಮಾಡಿ ಇದೀಗ ಆ ಯೋಜನೆಗಳನ್ನು ಜಾರಿಗೆ ತರಲು ದಿನಬಳಕೆ ವಸ್ತುಗಳ ಬೆಲೆಯನ್ನು ಏರಿಸುತ್ತಿದೆ. ಜನರಿಗೆ ಗ್ಯಾರಂಟಿ ಯೋಜನೆಗಳ ಆಸೆ ತೋರಿಸಿ ಅಧಿಕಾರ ಪಡೆದ ಕಾಂಗ್ರೇಸ್ ಇದೀಗ ಜನರ ಮೇಲೆ ಪರೋಕ್ಷವಾಗಿ ಬರೆ ಎಳೆಯುತ್ತಿದೆ. ಈ ಹಿಂದೆ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆಯ ವಿರುದ್ಧ ಮಾತನಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇದೀಗ ತಮ್ಮ ಸರ್ಕಾರ ಕೈಗೊಂಡಿರುವ ಬೆಲೆಯೇರಿಕೆ ನಿರ್ಧಾರವನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿ ಎಲ್ಲಾ ದಿನಬಳಕೆ ವಸ್ತುಗಳ ಬೆಲೆ ಗಗಕ್ಕೇರಿದೆ. ಜನಸಾಮಾನ್ಯರು ನಿತ್ಯದ ಜೀವನ ನಡೆಸಲು ಪರದಾಡುವಂತಹ ಸ್ಥಿತಿ ತಂದಿಟ್ಟಿದೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಪಕ್ಷದ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಕೆ.ಆರ್. ಧನಿಕ್, ಪ್ರಶಾಂತ್ ಬಿಳಗುಳ, ಮುಖಂಡರಾದ ಎಂ.ಆರ್. ಜಗದೀಶ್, ಜೆ.ಎಸ್.ರಘು, ಬಿ.ಎನ್. ಜಯಂತ್, ಡಿ.ಎಸ್. ಸುರೇಂದ್ರ, ಕೆ.ಸಿ.ರತನ್, ಸರೋಜ ಸುರೇಂದ್ರ, ಸುಜಿತ್ ಮುಂತಾದವರು ಇದ್ದರು.