ಚಾರ್ಮಾಡಿ ಘಾಟ್ ನಲ್ಲಿ ಶುಕ್ರವಾರ ಬೆಳ್ಳಂಬೆಳಗ್ಗೆ ಒಂಟಿ ಸಲಗ ಪ್ರತ್ಯಕ್ಷವಾಗಿದೆ.
ಬುಧವಾರ ರಾತ್ರಿಯೂ ಸಹ ಈ ಆನೆ ಚಲಿಸುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ಗೆ ಏಕಾಏಕಿ ಅಡ್ಡ ಬಂದಿತ್ತು.
ನಿದ್ರೆಯ ಮಂಪರಿನಲ್ಲಿದ್ದವರೆಲ್ಲಾ ಗಾಬರಿಯಿಂದ ಎದ್ದು ಕಾಡಾನೆ ನೋಡುತ್ತಾ ಭಯದಲ್ಲೇ ಕಾಲ ಕಳೆಯುವಂತಾಗಿತ್ತು, ಸರ್ಕಾರಿ ಬಸ್ಸಿನ ಪಕ್ಕದಲ್ಲೇ ಕಾಡಾನೆ ರಾತ್ರಿ ಓಡಾಡಿದೆ.
ಕಾಡಾನೆ ಕಂಡು ಬಸ್ ನ ಒಳಗೆ ಇದ್ದ ಪ್ರಯಾಣಿಕರು ಗಾಬರಿಯಾಗಿದ್ದಾರೆ.ಚಾರ್ಮಾಡಿ ಘಾಟಿಯ 7 ಮತ್ತು 8ನೇ ತಿರುವಿನಲ್ಲಿ ಘಟನೆ ನಡೆದಿದೆ ಸುಮಾರು ಅರ್ಧ ಗಂಟೆ ರಸ್ತೆಯಲ್ಲೇ ಒಂಟಿ ಸಲಗ ನಿಂತಲ್ಲೇ ನಿಂತಿದ್ದು ಆನೆಯನ್ನ ಕಂಡು ತಕ್ಷಣ ಬಸ್ ಅನ್ನು ಚಾಲಕ ನಿಲ್ಲಿಸಿದ್ದಾರೆ.
ಆನೆ ಸಂಚಾರ ಹಿನ್ನೆಲೆಯಲ್ಲಿ ಘಾಟಿಯಲ್ಲಿ ಎರಡು ಕಿ.ಮೀ. ನಷ್ಟು ಟ್ರಾಫಿಕ್ ಜಾಮ್ ಉಂಟಾಗಿತ್ತು ಚಿಕ್ಕಮಗಳೂರು ಮಂಗಳೂರು ಎರಡೂ ಕಡೆಯಲ್ಲೂ ಟ್ರಾಫಿಕ್ ಜಾಮ್ ಆಗಿದ್ದು ಅರ್ಧ ಗಂಟೆ ಬಳಿಕ ಅರಣ್ಯಕ್ಕೆ ಇಳಿದು ಹೋಗಿದೆ.
ಅದಾಗಿ ಇಂದು ಶುಕ್ರವಾರ ಮುಂಜಾನೆ ಮತ್ತೆ ಒಂಟಿಸಲಗ ಚಾರ್ಮಾಡಿ ಘಾಟ್ ನ ರಸ್ತೆಯಂಚಿಗೆ ಬಂದು ನಿಂತಿದೆ. ರಸ್ತೆ ಪಕ್ಕದಲ್ಲಿಯೇ ಆನೆ ನಿಂತಿರುವುದರಿಂದ ವಾಹನ ಸವಾರರು ಅದರಲ್ಲೂ ಮುಖ್ಯವಾಗಿ ದ್ವಿಚಕ್ರ ವಾಹನ ಸವಾರರು ರಸ್ತೆಯಲ್ಲಿ ಸಂಚರಿಸಲು ಭಯಪಡುವಂತಾಗಿತ್ತು. ಈ ಆನೆ ಇದುವರೆಗೂ ಮಾನವರ ಮತ್ತು ವಾಹನಗಳ ಮೇಲೆ ಎರಗಿ ಬಂದಿಲ್ಲವಾದರೂ, ಆನೆ ರಸ್ತೆ ಮಧ್ಯದಲ್ಲಿ ನಿಂತಿದ್ದಾಗ ವಾಹನ ಸವಾರ ಮಾಡುವವರಿಗೆ ತುಂಬಾ ಭಯ ಉಂಟಾಗುತ್ತಿದೆ.
ಈ ಕಾಡಾನೆ ಕಳೆದ ಎರಡು ತಿಂಗಳಿಂದಲೂ ಚಾರ್ಮಾಡಿ ಘಾಟ್ ನಲ್ಲೇ ಇದೆ. ಹಗಲಿರುಳೆನ್ನದೇ ಚಾರ್ಮಾಡಿ ರಸ್ತೆಯಲ್ಲಿ ಸಂಚಾರ ಮಾಡುತ್ತಾ ಚಾರ್ಮಾಡಿ ಘಾಟ್ ತಪ್ಪಲಿನ ಗ್ರಾಮದೊಳಕ್ಕೂ ಬಂದು ಉಪಟಳ ನೀಡುತ್ತಿದೆ, ಹೆಚ್ಚಿನ ಅನಾಹುತ ಆಗುವ ಮುನ್ನ ಅರಣ್ಯ ಇಲಾಖೆ ಸೂಕ್ತ ಕ್ರಮ ವಹಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.