ಮೂಡಿಗೆರೆ ತಾಲ್ಲೂಕಿನ ತರುವೆ ಗ್ರಾ.ಪಂ.ಯಲ್ಲಿ ಲ್ಯಾಪ್ ಟಾಪ್ ಕಳ್ಳತನ ಮಾಡಿದ್ದ ಪ್ರಕರಣವನ್ನು ಎರಡು ವರ್ಷಗಳ ನಂತರ ಪತ್ತೆಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ತರುವೆ ಗ್ರಾಮ ಪಂಚಾಯಿತಿ ಹಾಗೂ ಅಂಗನವಾಡಿಯಲ್ಲಿ 2022ರಲ್ಲಿ ಬೀಗ ಮುರಿದು ಲ್ಯಾಪ್ ಟಾಪ್ ಕಳ್ಳತನ ಮಾಡಿದ್ದ ಆರೋಪಿಯನ್ನು ಬಣಕಲ್ ಪೊಲೀಸರು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.ಶರತ್ ಬಂಧಿತ ಆರೋಪಿ.
ಮೂಲತಃ ಮಂಗಳೂರು ಮೂಲದ ನಲ್ಕೆ ಗ್ರಾಮದ ಶರತ್ ಎರಡು ವರ್ಷದ ಹಿಂದೆ ತರುವೆ ಗ್ರಾ.ಪಂ.ಬೀಗ ಮುರಿದು ಲ್ಯಾಪ್ ಟಾಪ್ ಕಳ್ಳತನ ಮಾಡಿ ಪರಾರಿಯಾಗಿ ಪೊಲೀಸರಿಗೆ ಚಳ್ಳೇಹಣ್ಣು ತಿಳಿಸಿದ್ದ. ನಂತರ ಕಳಸ ಸಮೀಪದ ಹೆಮ್ಮಕ್ಕಿಯಲ್ಲಿ ತೋಟವೊಂದರಲ್ಲಿ ಕೆಲಸ ಮಾಡಿಕೊಂಡು ಇದ್ದ. ಯಾವುದೇ ಮೊಬೈಲ್ ಬಳಸುತ್ತಿರಲಿಲ್ಲ. ಈಚೆಗೆ ಒಂದು ಸಿಮ್ ಖರೀದಿಸಿ ಮೊಬೈಲ್ ಬಳಕೆ ಮಾಡಿದಾಗ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಕಾರ್ಯಾಚರಣೆಯಲ್ಲಿ ಬಣಕಲ್ ಸಬ್ ಇನ್ ಸ್ಪೆಕ್ಟರ್ ಕೌಶಿಕ್ ನೇತೃತ್ವದಲ್ಲಿ ಸಿಬ್ಬಂದಿಗಳಾದ ಎಚ್.ಸಿ.ರಮೇಶ್ ಕುಮಾರ್,ಸಚಿನ್,ಮೆಹಬೂಬ್, ಮಾಲತೇಶ್, ಚಾಲಕ ಅಶೋಕ್ ಭಾಗವಹಿಸಿದ್ದರು. ಕಳ್ಳನನ್ನು ಸೆರೆಹಿಡಿದ ಪೊಲೀಸರನ್ನು ಗ್ರಾಮಸ್ಥರು ಶ್ಲಾಘಿಸಿದ್ದಾರೆ.