ಚಿಕ್ಕಮಗಳೂರು ತಾಲೂಕಿನ ಗ್ರಾಮೀಣ ಪ್ರದೇಶದ ಹಲವು ದೇವಸ್ಥಾನಗಳಲ್ಲಿ ಕಳ್ಳತನವಾಗಿರುವ ಪ್ರಕರಣ ನಡೆದಿದೆ.
ಚಿಕ್ಕಮಗಳೂರು ಸಮೀಪದ ಜೋಳದಾಳು ಹಾಗೂ ಸುತ್ತಮುತ್ತಲ ಪ್ರದೇಶಗಳ ದೇವಸ್ಥಾನಗಳಲ್ಲಿ ಒಂದೇ ದಿನ ರಾತ್ರಿ ಖದೀಮರು ಹಲವು ದೇವಸ್ಥಾನಗಳಿಗೆ ಕನ್ನ ಹಾಕಿದ್ದಾರೆ.
ಜೋಳದಾಳು ಮತ್ತು ಸಮೀಪದ ಮೈಲಿಮನೆ ಎರಡು ದೇವಸ್ಥಾನಗಳಲ್ಲಿ ಕಳ್ಳರು ದೇವರ ಗುಡಿಯನ್ನು ಒಡೆದಿದ್ದು ಜೊತೆಗೆ ದೇವರ ವಿಗ್ರಹದ ಕಿವಿಯ ಭಾಗವನ್ನೇ ಕತ್ತರಿಸಿ ಕೊಂಡು ಹೋಗಿದ್ದಾರೆ.
ಜೋಳದಾಳು ಗ್ರಾಮದ ದೇವಸ್ಥಾನದ ಬಾಗಿಲು ಒಡೆಯಲು ಪ್ರಯತ್ನಿಸಿದ್ದು ಅದರಲ್ಲಿ ವಿಫಲರಾದ ಕಳ್ಳರು ಹೊರಗಡೆಯ ಕಾಣಿಕೆ ಡಬ್ಬದಿಂದ ಹಣವನ್ನು ಕದ್ದೊಯ್ದಿದ್ದಾರೆ ಎನ್ನಲಾಗಿದೆ ಹಾಗೆ ಮೈಲಿಮನೆ ದೇವಸ್ಥಾನದಲ್ಲಿ ತೋಳೂರಮ್ಮ ಮತ್ತು ಬಿಲ್ಲೆಶ್ವರ ದೇವಸ್ಥಾನಗಳಿಗೆ ಕಳ್ಳರು ಕನ್ನ ಹಾಕಿದ್ದಾರೆ.
ಮೈಲಿಮನೆ ದೇವಸ್ಥಾನದಲ್ಲಿ ವಿಗ್ರಹದ ಕಿವಿಯ ಭಾಗವನ್ನು ಕಳ್ಳರು ಕತ್ತರಿಸಿ ಕೊಂಡೊಯ್ದಿದ್ದಾರೆ.
ಪಂಚಲೋಹದಿಂದ ಮಾಡಿದ್ದ ವಿಗ್ರಹದ ಕಿವಿಯ ಭಾಗದಲ್ಲಿ ಚಿನ್ನ ಇರಬಹುದೆಂದು ಭಾವಿಸಿ ಕಳ್ಳರು ಕಿವಿಯನ್ನೇ ತುಂಡರಿಸಿ ಕೊಂಡೊಯ್ದಿದ್ದಾರೆ ಎಂದು ಹೇಳಲಾಗುತ್ತಿದೆ. ಈ ವಿಗ್ರಹ ಸುಮಾರು 15 ಲಕ್ಷ ವೆಚ್ಚದಲ್ಲಿ ನಿರ್ಮಾಣ ಮಾಡಿದ್ದು ಎನ್ನಲಾಗಿದ್ದು, ಇದೀಗ ಕಿವಿ ಭಾಗ ವಿಘ್ನವಾಗಿರುವುದರಿಂದ ಹೊಸ ವಿಗ್ರಹ ಮಾಡಿಸಬೇಕಾದ ಅನಿವಾರ್ಯತೆ ಗ್ರಾಮಸ್ಥರಿಗೆ ಎದುರಾಗಿದೆ.
ಈ ಬಗ್ಗೆ ಮಲ್ಲಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಕಳ್ಳರ ಪತ್ತೆಗಾಗಿ ಬಲೆ ಬೀಸಿದ್ದಾರೆ ಈ ರೀತಿ ಗ್ರಾಮೀಣ ಪ್ರದೇಶಗಳಲ್ಲಿ ದೇವಸ್ಥಾನಗಳಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದ್ದು ಆಯಾ ಗ್ರಾಮದ ಗ್ರಾಮಸ್ಥರು ದೇವಸ್ಥಾನ ಸಮಿತಿಯವರು ಈ ಬಗ್ಗೆ ಮುನ್ನೆಚ್ಚರಿಕೆ ಕ್ರಮವಹಿಸಬೇಕಾಗಿದೆ. ಪೊಲೀಸರು ಆದಷ್ಟು ಬೇಗ ಕಳ್ಳರ ಪತ್ತೆಹಚ್ಚಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.