ಚಿಕ್ಕಮಗಳೂರಿನಲ್ಲಿ ಒತ್ತುವರಿಯಾಗಿರುವ ರಾಜಕಾಲುವೆ ತೆರವುಗೊಳಿಸಿ ಸುಗಮವಾಗಿ ನೀರು ಹರಿಯುವಂತೆ ಮಾಡಲು ಈಗಾಗಲೇ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಶಾಸಕ ಹೆಚ್.ಡಿ ತಮ್ಮಯ್ಯ ತಿಳಿಸಿದರು.
ಅವರು ಶನಿವಾರ ನಗರದ ಹೌಸಿಂಗ್ಬೋರ್ಡ್ನ ಟೀಚರ್ ಕಾಲೋನಿಯಲ್ಲಿ ಮೊನ್ನೆ ಬಿದ್ದ ಭಾರಿ ಮಳೆ ನೀರು ವಸತಿ ಬಡಾವಣೆಗೆ ನುಗ್ಗಿ ಸಾರ್ವಜನಿಕರಿಗೆ ತೊಂದರೆ ಆಗಿದ್ದು, ಸ್ಥಳ ಪರಿಶೀಲಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಮಲೆನಾಡು-ಬಯಲು ಸೀಮೆ ಹೊಂದಿರುವ ಚಿಕ್ಕಮಗಳೂರು ನಗರದಲ್ಲಿ ಹೆಚ್ಚು ಮಳೆ ಬಂದಾಗ ತಗ್ಗು ಪ್ರದೇಶಗಳಿಗೆ ಮಳೆನೀರು ಬರುವುದು ಸಹಜವಾಗಿದ್ದು, ನೀರು ಸರಾಗವಾಗಿ ಹರಿದು ಹೋಗುವಂತೆ, ರಾಜಕಾಲುವೇ ನಿರ್ಮಾಣ ಮಾಡಿದ್ದು, ಅವುಗಳ ಒತ್ತುವರಿಯಾಗಿರುವುದರಿಂದ ಸಮಸ್ಯೆ ತಲೆದೋರಿದೆ ಎಂದು ಹೇಳಿದರು.
ಈ ಸಂಬಂಧ ಸಣ್ಣ ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳನ್ನು ಸ್ಥಳಕ್ಕೆ ಬರುವಂತೆ ಸೂಚಿಸಿದ್ದು, ಸ್ಥಳ ಪರಿಶೀಲಿಸಿ ರಾಜಕಾಲುವೆ ಒತ್ತುವರಿಯಾಗಿದ್ದರೆ ತೆರವು ಮಾಡುವಂತೆ ಸೂಚನೆ ನೀಡಿದರು.
ಕಂದಾಯ ಭೂಮಿಯಲ್ಲಿ ನಿವೇಶನಗಳಾಗಿ ಪರಿವರ್ತಿಸಿ ಮನೆಗಳನ್ನು ನಿರ್ಮಾಣ ಮಾಡಿದ್ದಾರೆ, ಅವರಿಗೆ ಮೂಲಭೂತ ಸೌಕರ್ಯ ಕಲ್ಪಿಸುವುದು ಈ ಭಾಗದ ನಗರಸಭೆ ಸದಸ್ಯರು ಹಾಗೂ ಶಾಸಕರ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.
ರಾಜಕಾಲುವೆಯನ್ನು ದುರಸ್ಥಿ ಮಾಡಿ ಸೇತುವೆ ಹಾಗೂ ಚಾನೆಲ್ ನಿರ್ಮಾಣ ಮಾಡಿ, ನೀರು ಸುಗಮವಾಗಿ ಹರಿಯುವಂತೆ ಮಾಡಲು ಆದೇಶಿಸಲಾಗಿದೆ ಎಂದ ಅವರು ತಹಸೀಲ್ದಾರ್ ಜೊತೆ ಸಹಾಯಕ ಸರ್ವೇಯರ್ ಆಗಮಿಸಿ ರಾಜಕಾಲುವೆ ಸರ್ವೇ ಮಾಡಿ ಮಾರ್ಕ್ ಮಾಡುತ್ತಾರೆ, ನಂತರ ರಾಜ್ಯಕಾಲುವೆಯಲ್ಲಿ ಶೌಚಾಲಯ, ಪೈಪ್ಲೈನ್ ಅಳವಡಿಸಿಕೊಂಡಿರುವವರಿಗೆ ನೋಟೀಸ್ ನೀಡಿ ತೆರವುಗೊಳಿಸುವಂತೆ ತಿಳಿಸಲಾಗುವುದು ಎಂದರು.
ಮುಂದಿನ ದಿನಗಳಲ್ಲಿ ನಗರದ ಅಭಿವೃದ್ಧಿಗೆ ಮುಖ್ಯಮಂತ್ರಿಗಳ ಬಳಿಗೆ ಹೋಗಿ ವಿಶೇಷ ಅನುದಾನ ಬಿಡುಗಡೆ ಮಾಡುವಂತೆ ಕೋರಲಾಗುವುದು. ರಾಜಕಾಲುವೆ ಕಿರಿದಾಗಿ ನಿರ್ಮಾಣ ಮಾಡಲಾಗಿದ್ದು, ಈಗಿನ ಜನಸಂಖ್ಯೆಗೆ ಅನುಗುಣವಾಗಿ ಅಧಿಕಾರಿಗಳೊಂದಿಗೆ ಚರ್ಚಿಸಿ ನಿರ್ಮಾಣ ಮಾಡುವುದಾಗಿ ಭರವಸೆ ನೀಡಿದರು.
ನಗರದ ಬಸವನಹಳ್ಳಿ ಕೆರೆ ತೂಬು ದುರಸ್ತಿ ಮಾಡಿ, ನೀರು ಸಂಗ್ರಹಣೆಗೆ ಮುಂದಾಗಿದ್ದು ಈ ಬಾರಿ ಮಳೆಗಾಲ ಮುಕ್ತಾಯವಾಗುವುದರೊಳಗೆ ಅಚ್ಚುಕಟ್ಟುದಾರರಿಗೆ ಅನುಕೂಲವಾಗುವಂತೆ ನೀರು ತುಂಬಿಸಲಾಗುವುದೆಂದು ಹೇಳಿದರು.
ನಗರಸಭೆ ಸದಸ್ಯೆ ಕವಿತಾಶೇಖರ್ ಮಾತನಾಡಿ, ಕಳೆದ ಎರಡು ವ?ದಿಂದ ಈ ರೀತಿ ನೀರು ವಸತಿ ಬಡಾವಣೆಗೆ ಹರಿದುಬರುತ್ತಿದೆ, ಮೊದಲು ಇಷ್ಟೊಂದು ಸಮಸ್ಯೆ ಇರಲಿಲ್ಲ, ರಾಜಕಾಲುವೆ ಪಕ್ಕದಲ್ಲಿ ಮತ್ತೊಂದು ಕಾಲುವೆ ನಿರ್ಮಾಣ ಮಾಡಿ ಗುಡ್ಡದಿಂದ ಹರಿದು ಬರುವ ನೀರು ಸುಗಮವಾಗಿ ಹೋಗುವಂತೆ ಮಾಡಲು ಒತ್ತಾಯಿಸಿದರು.
ಕಳೆದ ಬಾರಿ ನಗರೋತ್ಥಾನದಡಿ 65 ಲಕ್ಷ ರೂ. ಮಂಜೂರಾಗಿದ್ದು ಕಾಲುವೆಯನ್ನು ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಸೂಚಿಸಲಾಗುತ್ತಿದ್ದು ದೊಡ್ಡ ಪ್ರಮಾಣದಲ್ಲಿ ನೀರು ಬರುತ್ತಿರುವುದರಿಂದ ಕಾಲುವೆಯನ್ನು ಅಗಲವಾಗಿ ತೆಗೆಯಲು ಕೋರಲಾಗಿದೆ ಎಂದರು.
ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತ ಬಿ.ಸಿ ಬಸವರಾಜ್, ಪರಿಸರ ಅಭ್ಯಂತರರಾದ ತೇಜಸ್ವಿನಿ, ಇಂಜಿನಿಯರ್ ಲೋಕೇಶ್, ರಶ್ಮಿ, ಸಣ್ಣ ನೀರಾವರಿ ಇಲಾಖೆ ಅಧಿಕಾರಿ ವಿಕಾಸ್ ಸಿಬ್ಬಂದಿ ಹಾಗೂ ಸ್ಥಳೀಯ ನಿವಾಸಿಗಳು ಉಪಸ್ಥಿತರಿದ್ದರು.