2023-24ನೇ ಸಾಲಿನ ಎಸ್ಎಸ್ಎಲ್ಸಿ ಮರು ಮೌಲ್ಯಮಾಪನ ಫಲಿತಾಂಶವನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಪ್ರಕಟಿಸಿದ್ದು, ಬೆಂಗಳೂರಿನ ಟಿ.ದಾಸರಹಳ್ಳಿ ಬಿಎನ್ಆರ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿನಿ ಭಾವನಾ ರಾಜ್ಯಕ್ಕೆ ಜಂಟಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಈ ಹಿಂದೆ ಪರೀಕ್ಷೆಯಲ್ಲಿ ಬಾಗಲಕೋಟೆಯ ಅಂಕಿತಾ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದ್ದರು.
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಈ ಹಿಂದೆ ಪ್ರಕಟಿಸಿದ ಫಲಿತಾಂಶದಲ್ಲಿ ಭಾವನಾ 620 ಅಂಕ ಪಡೆದಿದ್ದರು. ಆದರೆ ಮರುಮೌಲ್ಯ ಮಾಪನದ ಬಳಿಕ 625 ಕ್ಕೆ 625 ಅಂಕ ಪಡೆದುಕೊಂಡಿದ್ದಾರೆ.
ಇನ್ನು ಮರು ಮೌಲ್ಯಮಾಪನದಲ್ಲಿ ಮೈಸೂರಿನ ವಿಜಯ ವಿಠ್ಠಲ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿ ಸುದೀಕ್ಷ ಎಂ.ಡಿ ರಾಜ್ಯಕ್ಕೆ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ. ಮೌಲ್ಯಮಾಪಕರ ಎಡವಟ್ಟಿನಿಂದ ಮೊದಲ ಫಲಿತಾಂಶದಲ್ಲಿ 620 ಅಂಕ ಪಡೆಕೊಂಡಿದ್ದರು. ಬಳಿಕ ಮರು ಮೌಲ್ಯಮಾಪನದಲ್ಲಿ 620 ರಿಂದ 624 ಅಂಕ ಪಡೆದುಕೊಂಡಿದ್ದಾರೆ.
ಸುದೀಕ್ಷ ಕನ್ನಡ ಸೇರಿ 5 ವಿಷಯದಲ್ಲಿ ಶೇ 100ರಷ್ಟು ಅಂಕ ಗಳಿಸಿದ್ದಾರೆ. ಸಂಸ್ಕೃತ-125, ಇಂಗ್ಲಿಷ್-100, ಕನ್ನಡ-100, ವಿಜ್ಞಾನ-100, ಸಮಾಜ-100, ಗಣಿತದಲ್ಲಿ 95 ಅಂಕ ಬಂದಿತ್ತು.
ನಂತರ ಮರುಮೌಲ್ಯ ಮಾಪನಕ್ಕೆ ಮನವಿ ಸಲ್ಲಿಸಲಾಗಿತ್ತು. ಇಂದು ಮರು ಮೌಲ್ಯ ಮಾಪನದ ಫಲಿತಾಂಶದಲ್ಲಿ ಗಣಿತದಲ್ಲಿ 99 ಅಂಕ ಪಡೆದುಕೊಂಡಿದ್ದಾರೆ. ಆ ಮೂಲಕ ಒಟ್ಟು 625ಕ್ಕೆ 624 ಅಂಕ ಗಳಿಸುವ ಮೂಲಕ ಮೈಸೂರು ಜಿಲ್ಲೆಗೆ ಟಾಪರ್ ಹಾಗೂ ರಾಜ್ಯಕ್ಕೆ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ.