ಮೂಡಿಗೆರೆ ಪಟ್ಟಣದ ವಿವಿಧ ಶಾಲೆಗಳಿಗೆ ಮಾಜಿ ಸಚಿವ ಬಿ.ಬಿ.ನಿಂಗಯ್ಯ, ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ಹಾಗೂ ಕಾಂಗ್ರೆಸ್ ಮುಖಂಡರು ತೆರಳಿ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಕೆ.ಕೆ.ಮಂಜುನಾಥ್ ಕುಮಾರ್ ಮತ್ತು ಪದವೀದರ ಕ್ಷೇತ್ರದ ಅಭ್ಯರ್ಥಿ ಆಯನೂರ್ಮಂಜುನಾಥ್ ಪರವಾಗಿ ಮತಯಾಚನೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬಿ.ಬಿ.ನಿಂಗಯ್ಯ ಜೂನ್ 3ರಂದು ನಡೆಯಲಿರುವ ವಿಧಾನಪರಿಷತ್ ಚುನಾವಣೆಯಲ್ಲಿ ಶಿಕ್ಷಕರ ಮತ್ತು ಪದವೀಧರರ ಕ್ಷೇತ್ರದಲ್ಲಿ ಕಾಂಗ್ರೇಸ್ ಪರವಾಗಿ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ರಾಜ್ಯದ ಕಾಂಗ್ರೇಸ್ ಸರ್ಕಾರದ ಜನಪರ ನಿಲುವುಗಳು ಪಕ್ಷದ ಅಭ್ಯರ್ಥಿಗಳಿಗೆ ಶ್ರೀರಕ್ಷೆಯಾಗಿದೆ. ಶಿಕ್ಷಕರು ಮತ್ತು ಪದವೀಧರರು ಪ್ರಜ್ಞಾವಂತ ಮತದಾರರಾಗಿದ್ದು, ಕಾಂಗ್ರೇಸ್ ಪರವಾಗಿ ತಮ್ಮ ನಿಲುವು ವ್ಯಕ್ತಪಡಿಸುತ್ತಿದ್ದಾರೆ.
ಬಿ.ಜೆ.ಪಿ. ಪಕ್ಷ ಮತದಾರರಿಗೆ ಆಮೀಷಗಳನ್ನು ಒಡ್ಡುತ್ತಿದ್ದು, ವಾಮಮಾರ್ಗದ ಮೂಲಕ ಚುನಾವಣೆ ಗೆಲ್ಲಲು ಹವಣಿಸುತ್ತಿದೆ. ಆದರೆ ಮತದಾರರು ಬಿ.ಜೆ.ಪಿ. ಆಮೀಷಗಳಿಗೆ ಮರುಳಾಗುವುದಿಲ್ಲ ಎಂದಿದ್ದಾರೆ.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಜಿ.ಸುರೇಂದ್ರ, ಕಾರ್ಯದರ್ಶಿ ಸಂಪತ್ ಬಿಳಗುಳ, ಮುಖಂಡರಾದ ಬಿ.ಎಸ್.ಜಯರಾಂಗೌಡ, ಚಂದ್ರು ಹಳೆಕೆರೆ, ಸಿ.ಬಿ.ಶಂಕರ್, ಎ.ಜಿ. ಸುಬ್ರಾಯಗೌಡ, ರಘು ಮಗ್ಗಲಮಕ್ಕಿ, ಜುಬೇರ್, ಲವ ಬಿಳಗುಳ, ರವಿ ಕುನ್ನಳ್ಳಿ, ಜಗದೀಶ್ ಮತ್ತಿತರರಿದ್ದರು.