ಕೊಡಗಿನಲ್ಲಿ ಮತ್ತೊಂದು ಕಾಡಾನೆಯ ಕಳೆಬರಹ ಪತ್ತೆಯಾಗಿದೆ. ಈಗ್ಗೆ ಒಂದು ವಾರದ ಹಿಂದೆ ಎರಡು ಆನೆಗಳ ಕಳೆಬರಹ ಪತ್ತೆಯಾಗಿದ್ದವು. ಅದಾಗಿ ಒಂದು ವಾರದಲ್ಲಿ ಮತ್ತೊಂದು ಕಾಡಾನೆ ಕಳೆಬರಹ ಪತ್ತೆಯಾಗಿದೆ. ಕುಶಾಲನಗರ ತಾಲ್ಲೂಕಿನ ಕೊಡಗರಹಳ್ಳಿಯಲ್ಲಿ ಕಾಫಿತೋಟವೊಂದರಲ್ಲಿ ಕಾಡಾನೆಯ ಕಳೆಬರಹ ಪತ್ತೆಯಾಗಿದೆ. ಸುಮಾರು 10 ರಿಂದ 12 ವರ್ಷ ಪ್ರಾಯದ ಕಾಡಾನೆ ಕಳೆಬರಹ ಪತ್ತೆಯಾಗಿದೆ.
ವಿದ್ಯುತ್ ಸ್ಪರ್ಶಿಸಿ ಸಾವು : ಕಾಡಾನೆ ಕಳೆಬರಹ ಕಂಡುಬಂದಿರುವ ಸ್ಥಳದಲ್ಲಿ ವಿದ್ಯುತ್ ಕಂಬವೊಂದು ಹಾನಿಗೊಳಗಾಗಿದ್ದು, ಕಾಡಾನೆ ವಿದ್ಯುತ್ ಕಂಬಕ್ಕೆ ಮೈಉಜ್ಜದಾಗಲೋ ಅಥವಾ ಆಕಸ್ಮಿಕವಾಗಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮವೋ ವಿದ್ಯುತ್ ಕಂಬ ಮುರಿದು ಕಾಡಾನೆಗೆ ವಿದ್ಯುತ್ ತಂತಿ ತಗುಲಿ ಸಾವನ್ನಪ್ಪಿರುವ ಸಾಧ್ಯತೆ ಇರಬಹುದೆಂದು ಶಂಕಿಸಲಾಗಿದೆ. ವಿದ್ಯುತ್ ಕಡಿತದ ಬಗ್ಗೆ ಸ್ಥಳೀಯರು ಇಲಾಖೆಗೆ ಕರೆ ಮಾಡಿದ್ದು ಈ ಹಿನ್ನೆಲೆಯಲ್ಲಿ ವಿದ್ಯುತ್ ತಂತಿ ಸರಿಪಡಿಸಲು ಸಿಬ್ಬಂದಿ ಹೋಗಿದ್ದಾಗ ಘಟನೆ ಬೆಳಕಿಗೆ ಬಂದಿದೆ.
ವಿದ್ಯುತ್ ಕಂಬದ ಮೇಲೆ ಕೆಲವು ಗುರುತು ಕಂಡುಬಂದಿದ್ದು, ಮೇಲ್ನೋಟಕ್ಕೆ ಆನೆ ಕಂಬವನ್ನು ಹಾನಿಗೊಳಿಸಿದ್ದರಿಂದ ಅದರ ಸಾವಿಗೆ ಕಾರಣವಾದಂತೆ ತೋರುತ್ತಿದೆ.
ಈ ಮಧ್ಯೆ ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಕಲಂ 9ರ ಅಡಿಯಲ್ಲಿ ಅಸ್ವಾಭಾವಿಕ ಸಾವಿನ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ನಡೆಸಲಾಗುವುದು ಎಂದು ಮಡಿಕೇರಿ ಡಿಸಿಎಫ್ ಭಾಸ್ಕರ್ ಖಚಿತಪಡಿಸಿದ್ದಾರೆ. ಇದೇ ರೀತಿ ವಿದ್ಯುತ್ ಪ್ರವಹದಿಂದ ಚಿಕ್ಕಮಗಳೂರು ಜಿಲ್ಲೆಯ ಆಲ್ದೂರು ವಲಯದಲ್ಲಿ ಕಾಡಾನೆಯೊಂದು ಇತ್ತಿಚ್ಚೆಗೆ ಸಾವನ್ನಪ್ಪಿತ್ತು.
ಸಕಲೇಶಪುರ : ಮನೆಯ ಸೀಲಿಂಗ್ ಫ್ಯಾನ್ ಗೆ ಸುತ್ತಿ ಕುಳಿತ್ತಿದ್ದ ನಾಗರಹಾವು ರಕ್ಷಣೆ