ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕಿನ ಬಣಕಲ್ ಮತ್ತು ಕೊಟ್ಟಿಗೆಹಾರ ನಡುವಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಮೆಸ್ಕಾಂ ಲಾರಿಗೆ ಓಮ್ನಿ ಮತ್ತು ಆಲ್ಟೋ ಕಾರುಗಳು ಡಿಕ್ಕಿಯಾಗಿ ಒಂದೇ ಕುಟುಂಬದ ನಾಲ್ಕು ಮಂದಿ ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ.
ಶುಕ್ರವಾರ ಸಂಜೆ ಸುಮಾರು ನಾಲ್ಕು ಗಂಟೆ ಸಮಯದಲ್ಲಿ ಈ ದುರ್ಘಟನೆ ನಡೆದಿದೆ. ಧರ್ಮಸ್ಥಳ ಕಡೆಯಿಂದ ಬರುತ್ತಿದ್ದ ಓಮ್ನಿ ಮತ್ತು ಆಲ್ಟೋ ಕಾರುಗಳು ಮೂಡಿಗೆರೆ ಕಡೆಯಿಂದ ಬರುತ್ತಿದ್ದ ಮೆಸ್ಕಾಂ ಲಾರಿಗೆ ಡಿಕ್ಕಿ ಹೊಡೆದಿದ್ದು ಪರಿಣಾಮ ಒಂದೇ ಕುಟುಂಬದ ನಾಲ್ಕು ಮಂದಿ ಸ್ಥಳದಲ್ಲೇ ಮೃತಪಟ್ಟಿರುತ್ತಾರೆ. ಹಲವರು ಗಾಯಗೊಂಡಿದ್ದಾರೆ
ಮೃತರೆಲ್ಲರು ಚಿತ್ರದುರ್ಗ ಮತ್ತು ದಾವಣಗೆರೆ ಮೂಲದವರು ಎಂದು ಹೇಳಲಾಗುತ್ತಿದೆ. ಒಂದೇ ಕುಟುಂಬದ ಸದಸ್ಯರು ಧರ್ಮಸ್ಥಳ ಯಾತ್ರೆ ಮುಗಿಸಿ ವಾಪಾಸಾಗುತ್ತಿದ್ದರು ಎನ್ನಲಾಗುತ್ತಿದೆ.
ಕೊಟ್ಟಿಗೆಹಾರ ದಾಟಿ ಸ್ವಲ್ಪ ದೂರ ಬಂದಾಗ ವಾಹನವೊಂದನ್ನು ಓವರ್ಟೇಕ್ ಮಾಡಿ ಸಾಗುವಾಗ ಎದುರಿನಿಂದ ಬರುತ್ತಿದ್ದ ಮೆಸ್ಕಾಂ ಲಾರಿಗೆ ಓಮಿನಿ ಡಿಕ್ಕಿ ಹೊಡೆದಿದ್ದು, ಹಿಂದಿನಿಂದ ಬರುತ್ತಿದ್ದ ಅದೇ ಕುಟುಂಬದ ಆಲ್ಟೋ ಕಾರ್ ಓಮಿನಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ಓಮ್ನಿ ಕಾರು ನಜ್ಜುಗುಜ್ಜಾಗಿದ್ದು ಓಮ್ನಿಯಲ್ಲಿದ್ದ ಮೂವರು ಪುರುಷರು ಮತ್ತು ಓರ್ವ ಮಹಿಳೆ ಮೃತಪಟ್ಟಿದ್ದು ಇತರೆ ನಾಲ್ವರು ಗಂಭೀರ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಮೃತರನ್ನು ಹಂಪಯ್ಯ 65, ಪ್ರೇಮ 58, ಮಂಜಯ್ಯ 60 ಮತ್ತು ಪ್ರಭಾಕರ್ 40 ವರ್ಷ ಎಂದು ಗುರುತಿಸಲಾಗಿದೆ.
ಇವರೆಲ್ಲರು ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕು, ಚಿಕ್ಕಜಾಜೂರು ಅಂಚೆ, ಚನ್ನಪಟ್ಟಣ ಗ್ರಾಮದವರು ಎಂದು ತಿಳಿದುಬಂದಿದೆ.
ಒಂದೇ ಕುಟುಂಬದ ಒಟ್ಟು17 ಮಂದಿ ಪ್ರವಾಸ ಬಂದಿದ್ದರು ಎನ್ನಲಾಗಿದೆ.
ಘಟನೆಯ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕು.
ಮೂಡಿಗೆರೆ