ಜೋತು ಬಿದ್ದಿದ್ದ ವಿದ್ಯುತ್ ತಂತಿ ಸರಿಪಡಿಸಲು ಹೋಗಿ ವಿದ್ಯುತ್ ಪ್ರವಹಿಸಿ ಯುವಕನೋರ್ವ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.
ಚಿಕ್ಕಮಗಳೂರು ತಾಲ್ಲೂಕಿನ ಗಂಜಲಗೋಡು ಗ್ರಾಮದ ಜೀವಿತ್ (23) ಸಾವನ್ನಪ್ಪಿರುವ ಯುವಕ
ವಿದ್ಯುತ್ ಕೇಬಲ್ ದುರಸ್ತಿ ಮಾಡುವ ವೇಳೆ ಈ ಅವಘಡ ಸಂಭವಿಸಿದೆ. ಸೋಮವಾರ ರಾತ್ರಿ ಸುರಿದ ಮಳೆಯಿಂದ ಜಗ್ಗಿದ್ದ ಮೈನ್ಸ್ ವೈಯರ್ ಸರಿಪಡಿಸಲು ಹೋಗಿ ಈ ದುರಂತ ಸಂಭವಿಸಿದೆ.
ವಿದ್ಯುತ್ ಕಂಬದಿಂದ ಮನೆಗೆ ವಿದ್ಯುತ್ ಸಂಪರ್ಕಕ್ಕೆ ಅಳವಡಿಸಿದ್ದ ಮೈನ್ಸ್ ವಯರ್ ಗಾಳಿಮಳೆಯಿಂದ ಜೋತು ಬಿದ್ದಿತ್ತು, ಅದನ್ನು ಯಾವುದೇ ಮುನ್ನೆಚ್ಚರಿಕೆ ವಹಿಸದೇ ಸರಿಪಡಿಸಲು ಹೋಗಿದ್ದು, ಆಗ ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿ ಜೀವಿತ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಗಂಜಲಗೋಡು ಗ್ರಾಮದ ದಿವಂಗತ ಶೇಖರಪ್ಪ ಎನ್ನುವವರ ಪುತ್ರ ಜೀವಿತ್ ತನ್ನ ತಂದೆಯ ಸಾವಿನ ನಂತರ ಕೃಷಿಯಲ್ಲಿ ತೊಡಗಿಸಿಕೊಂಡು ಊರಿನಲ್ಲೇ ನೆಲೆಸಿದ್ದರು. ಎರಡು ವರ್ಷದ ಹಿಂದೆ ಜೀವಿತ್ ತಂದೆ ಶೇಖರಪ್ಪ ಅಕಾಲಿಕವಾಗಿ ಸಾವನ್ನಪ್ಪಿದ್ದರು.
ಇದೀಗ ತನ್ನ ಪತಿ ಮತ್ತು ಇದ್ದ ಒಬ್ಬ ಮಗನನ್ನು ಕಳೆದುಕೊಂಡು ಜೀವಿತ್ ತಾಯಿ ರೇಣುಕಾ ಒಬ್ಬಂಟಿಯಾಗಿದ್ದಾರೆ.
ಚಿಕ್ಕಮಗಳೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸ್ನೇಹಜೀವಿಯಾಗಿದ್ದ ಜೀವಿತ್ ಸಾವಿನಿಂದ ಗಂಜಲಗೋಡು ಗ್ರಾಮದ ಜನತೆ ಶೋಕಸಾಗರದಲ್ಲಿ ಮುಳುಗಿದ್ದಾರೆ.