ಕರ್ನಾಟಕ ರಾಜ್ಯದಾದ್ಯಂತ ಮುಂಗಾರು ಪೂರ್ವ ಮಳೆ ಅಬ್ಬರಿಸುತ್ತಿದೆ. ಬರದ ಛಾಯೆ ಆವರಿಸಿದ್ದ ರಾಜ್ಯಕ್ಕೆ ಮಳೆರಾಯ ತಂಪೆರದು, ಬರದ ಬೇಗೆಯನ್ನು ನೀಗಿಸಿದ್ದಾನೆ.
ಇದೀಗ ಮುಂಗಾರು ಆರಂಭಕ್ಕೆ ಮುನ್ನವೇ ಮಳೆ ಎಲ್ಲೆಡೆ ಅಪಾರ ಪ್ರಮಾಣದಲ್ಲಿ ಸುರಿಯುತ್ತಿದ್ದು, ಮೇ ತಿಂಗಳ ಮಧ್ಯಭಾಗದಲ್ಲೇ ಮಳೆಗಾಲದ ವಾತಾವರಣ ಸೃಷ್ಟಿಯಾಗಿದೆ.
ಶನಿವಾರ ಮತ್ತು ಭಾನುವಾರ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಮಳೆಯಾಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿಯೂ ವರುಣ ಅಬ್ಬರಿಸಿದ್ದಾನೆ. ಜಿಲ್ಲೆಯ ಹಲವೆಡೆ ಮಳೆ ಸುರಿದಿದ್ದು, ಹಲವು ಕಡೆ ಜನಜೀವನ ಅಸ್ತವ್ಯಸ್ತವಾಗಿದೆ.
ಜಿಲ್ಲೆಯ ಕಸ್ಕೆ ಗ್ರಾಮದಲ್ಲಿ ಮನೆ ಮೇಲೆ ಮರ ಬಿದ್ದಿದೆ, ನಗರದ ಹೌಸಿಂಗ್ ಬೋರ್ಡ್ ಬಳಿ ಬೈಕ್ಗಳ ಮೇಲೆ ಕಾಂಪೌಂಡ್ ಕುಸಿದು ಬಿದ್ದಿದೆ ಉದ್ದೇಬೋರನಹಳ್ಳಿಯಲ್ಲಿ ಗುಡಿಸಲೊಳಗೆ ಮಳೆ ನೀರು ನುಗ್ಗಿ ಅಪಾರ ಮೌಲ್ಯದ ವಸ್ತುಗಳಿಗೆ ಹಾನಿಯಾಗಿದೆ, ಚಾರ್ಮಾಡಿ ಘಾಟ್ ನಲ್ಲಿ ಸತತ ಮಳೆಯಾಗುತ್ತಿದ್ದು, ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ.
ಜಿಲ್ಲೆಯ ಮಲೆನಾಡು ಮತ್ತು ಬಯಲುಸೀಮೆಯಲ್ಲಿ ಮಳೆರಾಯ ಆರ್ಭಟಿಸಿದ್ದಾನೆ, ಭಾರೀ ಮಳೆಯಿಂದ ಗುಡಿಸಲಿಗೆ ಚರಂಡಿ ನೀರು ನುಗ್ಗಿದ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ. ಚಿಕ್ಕಮಗಳೂರು ತಾಲೂಕಿನ ಆಲ್ದೂರು, ಕಂಡರ ಕಸ್ಕೆ ಗ್ರಾಮದಲ್ಲಿ ಭಾರಿ ಮಳೆಗೆ ಮನೆಯ ಮೇಲೆ ಮರ ಬಿದ್ದಿತ್ತು. ಕೂದಲೆಳೆ ಅಂತದಲ್ಲಿ ಮನೆಯಲ್ಲಿದ್ದವರು ಪಾರಾಗಿದ್ದರು. ಮರ ಬಿದ್ದ ಪರಿಣಾಮ ಮನೆಯಲ್ಲಿದ್ದ ಪೀಠೋಪಕರಣಗಳು, ಆಹಾರ ಪದಾರ್ಥಗಳಿಗೆ ಹಾನಿಯಾಗಿದೆ.
ಮೂಡಿಗೆರೆ ತಾಲ್ಲೂಕಿನ ಗೋಣಿಬೀಡು ಹೊಸಳ್ಳಿ ಗ್ರಾಮದಲ್ಲಿ ಮಳೆಯಿಂದ ಮನೆಯೊಂದು ಭಾಗಶಃ ಕುಸಿದು ಬಿದ್ದಿದೆ.
ದಕ್ಷಿಣ ಕಾಶಿ ಕಳಸೇಶ್ವರ ಸ್ವಾಮಿ ದೇವಸ್ಥಾನದ ಮೆಟ್ಟಿಲು ಮೇಲಿಂದ ನೀರು ಹರಿಯುತ್ತಿದೆ. ಇತ್ತ ಕುದುರೆಮುಖ ಘಟ್ಟ ಪ್ರದೇಶದಲ್ಲಿ ಭಾರೀ ಮಳೆ ಹಿನ್ನಲೆ ಭದ್ರಾ ನದಿ ಒಳಹರಿವಿನಲ್ಲಿ ನೀರಿನ ಪ್ರಮಾಣ ಹೆಚ್ಚಳವಾಗಿದೆ. ಇದೇ ರೀತಿ ಮಳೆ ಮುಂದುವರಿದರೆ ಜೀವನದಿಗಳಾದ ತುಂಗ, ಭದ್ರಾ, ವೇದ, ಹೇಮಾವತಿಗಳಲ್ಲಿ ನೀರಿನ ಹರಿವು ಹೆಚ್ಚಳಗೊಳ್ಳಲಿದೆ.
ಕಳಸ ತಾಲೂಕಿನ ನೆಲ್ಲಿಕೆರೆ, ಕೈಮರ, ಕಲ್ಮಕ್ಕಿ ಗ್ರಾಮದ ಹತ್ತಾರು ಮನೆಗಳ ಮೇಲೆ ಮರ ಬಿದ್ದು ಮನೆಗಳ ಮೇಲ್ಛಾವಣಿಗೆ ಹಾನಿಯಾಗಿದೆ.ಇನ್ನೂ ರಸ್ತೆಗೆ ಅಡ್ಡಲಾಗಿ ಮರಗಳು ಬೀಳುತ್ತಿದ್ದು ವಾಹನ ಸವಾರರಲ್ಲಿ ಆತಂಕ ಮೂಡಿಸಿದೆ. ಮುಂಗಾರು ಪೂರ್ವ ಮಳೆ ಮಲೆನಾಡು ಭಾಗದಲ್ಲಿ ಅಬ್ಬರಿಸುತ್ತಿದ್ದು, ಗುಡುಗು,ಸಿಡಿಲು ಸಹಿತ ಬಿರುಗಾಳಿಯೊಂದಿಗೆ ಮಳೆ ಸುರಿಯುತ್ತಿದೆ.
ಉದ್ದೇಬೋರನಹಳ್ಳಿಯ ಎರಡು ಗುಡಿಸಲು ಹಾಗು ಗೊಬ್ಬರದ ಗೋಡಾನ್ಗೆ ಮಳೆ ನೀರು ನುಗ್ಗಿದ್ದು, ಚರಂಡಿ ಕಾಮಗಾರಿಯನ್ನ ಅರ್ಧಕ್ಕೆ ನಿಲ್ಲಿಸಿರುವ ಹೆದ್ದಾರಿ ಪ್ರಾಧಿಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ, ಇದೇ ಸ್ಥಳದಲ್ಲಿ ಗೋಡಾನ್ ಗೆ ನೀರು ನುಗ್ಗಿರುವುದರಿಂದ ಅಪಾರ ಪ್ರಮಾಣದ ಗೊಬ್ಬರ ಹಾಳಾಗಿದೆ.
ಚಿಕ್ಕಮಗಳೂರು ನಗರದಲ್ಲಿ ಬೈಕ್ಗಳ ಮೇಲೆ ಕಾಂಪೌಂಡ್ ಗೋಡೆ ಕುಸಿದಿದ್ದರಿಂದ ವಾಹನಗಳು ಸಂಪೂರ್ಣ ಜಖಂಗೊಂಡಿವೆ, ಮಲೆನಾಡು ಭಾಗದಲ್ಲಿ ಕೂಡಾ ಮಳೆ ಅಬ್ಬರಿಸಿದ್ದು ಮನೆ ಮೇಲೆ ಮರ ಬಿದ್ದು ಮನೆಯೊಂದಕ್ಕೆ ಪೂರ್ಣಪ್ರಮಾಣದಲ್ಲಿ ಹಾನಿಯಾಗಿದೆ. ಮಲೆನಾಡಿಗಿಂತ ಬಯಲು ಭಾಗದಲ್ಲಿ ವರಣ ಅಬ್ಬರಿಸಿದ್ದಾನೆ. ಕೊಳವೆಬಾವಿ ಮೂಲಕ ನೀರು ಪಡೆದು ವಿವಿಧ ಬೆಳೆಬೆಳೆದವರಿಗೆ ಸ್ವಲ್ಪಹಾನಿಯಾಗಿದೆ. ಮಲೆನಾಡು ಪ್ರದೇಶದಲ್ಲಿ ಮಳೆ ಮುಂದುವರೆದಿದ್ದು, ಗದ್ದೆಗಳಲ್ಲಿ ನೀರು ನಿಲ್ಲುವ ಮೂಲಕ ಬೇಸಾಯಕ್ಕೆ ಅಡ್ಡಿಯಾಗಿದೆ.
ಮಳೆ ಇಲ್ಲದೆ ಒಣಗುತ್ತಿದ್ದ ತೆಂಗಿನ ಮರಗಳಿಗೆ ಜೀವಕಳೆತುಂಬಿದೆ. ಈಗಾಗಲೇ ಅಡಿಕೆ ಗಿಡಗಳಲ್ಲಿಗೆ ಖಾಸಗಿ ಟ್ಯಾಂಕರ್ ಮೂಲಕ ನೀರು ಪಡೆದು ಗಿಡಗಳಿಗೆ ನೀರುಣಿಸುತ್ತಿದ್ದ ರೈತರು ನಿರುಂಬಳವಾಗಿ ನಿಟ್ಟುಸಿರು ಬಿಡುವಂತಾಗಿದೆ. ಸ್ವಲ್ಪ ದಿನದ ಮಟ್ಟಿಗೆ ಹಣಖರ್ಚಾಗುವುದು ತಪ್ಪಿದೆ.
ಮಲೆನಾಡು ಭಾಗದಲ್ಲಿ ಕಾಫಿ,ಅಡಿಕೆ, ಮೆಣಸಿನ ಬಳ್ಳಿ ಹಾಗೂ ಶುಂಠಿಗದ್ದೆಗಳಿಗೆ ಮಳೆರಾಯ ವರವಾಗಿ ಪರಿಣಮಿಸಿದ್ದಾನೆ, ಕಾಫಿ ಬೆಳೆಗಾರರು ತಮ್ಮ ತೋಟಗಳಿಗೆ ರಾಸಾಯನಿಕ ಗೊಬ್ಬರ ನೀಡಲು ಮುಂದಾಗಿದ್ದಾರೆ.
ಕಳೆದ ಒಂದು ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಕೆರೆಕಟ್ಟೆಗಳಲ್ಲಿ ನೀರು ನಿಂತಿಲ್ಲ ಬಂದ ಮಳೆನೀರನ್ನು ಭೂಮಿ ಹೀರಿಕೊಂಡಿದ್ದು, ಉರಿಬಿಸಿಲ ವಾತಾವರಣ ಈಗ ತಂಪಾಗತೊಡಗಿದೆ.