ಅವಿನ್ ಸ್ವರ ಸಂಗಮದ 400 ಸಂಚಿಕೆ ಸಂಭ್ರಮದ ಹಿನ್ನಲೆಯಲ್ಲಿ ಚಿಕ್ಕಮಗಳೂರಿನ ಕುವೆಂಪು ಕಲಾ ಮಂದಿರದಲ್ಲಿ ಜೂ.7ರಿಂದ 9ವರೆಗೆ ರಾಜ್ಯ ಮಟ್ಟದ ಸಂಗೀತ ಸಮರ ಗಾಯನ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ಅವಿನ್ ಸ್ವರ ಸಂಘಮದ ನಿರ್ದೇಶಕ ಮಗ್ಗಲಮಕ್ಕಿ ಗಣೇಶ್ ಹೇಳಿದರು.
ಅವರು ಬುಧವಾರ ಮೂಡಿಗೆರೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅವಿನ್ ಸ್ವರ ಸಂಘದ ಫೇಸ್ಬುಕ್ ಲೈವ್ ಪ್ರಾರಂಭಗೊಂಡು ಎರಡೂವರೆ ವರ್ಷ ಕಳೆದಿದ್ದು, ಜಿಲ್ಲೆಯಲ್ಲಿರುವ 3 ರಿಂದ 80 ವರ್ಷದವರೆಗಿನ 400ಕ್ಕೂ ಅಧಿಕ ಗ್ರಾಮೀಣ ಕಲಾವಿದರನ್ನು ಪರಿಚಯಿಸಿದೆ. ಪ್ರತಿ 100 ಸಂಚಿಕೆಗೊಮ್ಮೆ ವಿಶೇಷವಾಗಿ ಗಾಯನ ಸ್ಪರ್ಧೆ ಏರ್ಪಡಿಸುವ ಮೂಲಕ ಕಲಾವಿದರನ್ನು ರಾಜ್ಯಮಟ್ಟದಲ್ಲಿ ಗುರುತಿಸುವ ಕಾರ್ಯ ಮಾಡಲಾಗಿದೆ. ಈಗ 400 ಸಂಚಿಕೆ ಸಂಭ್ರಮಾಚರಣೆ ಹಿನ್ನಲೆಯಲ್ಲಿ ರಾಜ್ಯದಲ್ಲಿ ಎಲೆಮರೆಕಾಯಿಯಂತಿರುವ ಗಾಯನ ಕಲಾವಿದರನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನ ನಡೆಸಲಾಗಿದೆ ಎಂದು ಹೇಳಿದರು.
ನಿರ್ದೇಶಕ ಬಕ್ಕಿ ಮಂಜು ಮಾತನಾಡಿ, ರಾಜ್ಯ ಮಟ್ಟದ ಸಂಗೀತ ಸಮರಕ್ಕೆ ಈಗಾಗಲೇ ಸಾಮಾಜಿಕ ಜಾಲಾ ತಾಣದ ಮೂಲಕ ಪ್ರಚಾರ ನಡೆಸಿದ್ದು, ಸುಮಾರು 50ಕ್ಕೂ ಅಧಿಕ ಗಾಯಕರು ತಮ್ಮ ಗಾಯನದ ವೀಡಿಯೋ ತುಳುಕು ಕಳಿಸಿದ್ದಾರೆ. ಇನ್ನೂ 400 ಗಾಯಕರಿಂದ ಗಾಯನದ ವೀಡಿಯೋ ಬರುವ ನಿರೀಕ್ಷೆಯಿದೆ. ಇದಕ್ಕೆ ಏ.18 ಕೊನೆಯ ದಿನವಾಗಿದೆ. ನಮಗೆ ತಲುಪಿದ ಗಾಯನ ವೀಡಿಯೋವನ್ನು ಪರಿಶೀಲಿಸಿ ಆಯ್ದ 50ರಿಂದ 60 ಗಾಯಕರನ್ನು ಆಯ್ಕೆ ಮಾಡಿ, ಜೂ.7 ಮತ್ತು 8ರಂದು ಗಾಯನ ಸ್ಪರ್ಧೆ ನಡೆಸುವ ಮೂಲಕ ಕ್ವಾರ್ಟರ್, ಸಮಿ ಮತ್ತು ಫೈನಲ್ಗೆ ಆಯ್ಕೆ ಮಾಡಲಾಗುವುದು.
ಜೂ.9ರಂದು ಅವಿನ್ ಸ್ವರ ಸಂಘಮದ 400 ಸಂಚಿಕೆಯ ಮಹಾ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಗಾಯನ ಕಲಾವಿದರಿಗೆ ಪ್ರಶಸ್ತಿ ಪತ್ರ ನೀಡಲಾಗುವುದು.
ಪ್ರಥಮ ಬಹುಮಾನ ಟ್ರೋಫಿ ಸಹಿತ 25.000 ನಗದು, ದ್ವಿತೀಯ 13.000 ನಗದು, ತೃತೀಯ 8.000 ನಗದು ಹಾಗೂ 10 ಮಂದಿಗೆ 2.000 ರೂ ನಗದು ನೀಡಲಾಗುತ್ತದೆ. ಗಾಯನ ಸಮರಕ್ಕೆ ಭಾಗವಹಿಸುವವರು ಹಾಗೂ ಹೆಚ್ಚಿನ ಮಾಹಿತಿಗಾಗಿ 9448667558, 9448305990 ಸಂಖ್ಯೆಗೆ ಕರೆ ಮಾಡಬೇಕೆಂದು ಹೇಳಿದರು.
ನಿರ್ದೇಶಕರಾದ ಬಕ್ಕಿ ರವೀಂದ್ರ, ಹಸೈನಾರ್ ಉಪಸ್ಥಿತರಿದ್ದರು