ಖಾಸಗಿ ಶಾಲಾ, ಕಾಲೇಜುಗಳ ಅತಿಯಾದ ಡೊನೇಷನ್, ಶುಲ್ಕ ನಿಯಂತ್ರಿಸಲು ಸರಕಾರ ಶುಲ್ಕ ನಿಯಂತ್ರಣ ಪ್ರಾಧಿಕಾರವನ್ನು ರಚಿಸುವ ಮೂಲಕ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲ ಕಲ್ಪಿಸಬೇಕು ಎಂದು ಆಮ್ಆದ್ಮಿ ಪಕ್ಷದ ಚಿಕ್ಕಮಗಳೂರು ಜಿಲ್ಲಾ ಮಾಧ್ಯಮ ಉಸ್ತುವಾರಿ ಡಾ.ಕೆ.ಸುಂದರಗೌಡ ಆಗ್ರಹಿಸಿದರು.
ಅವರು ಚಿಕ್ಕಮಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶೈಕ್ಷಣಿಕ ಕ್ಷೇತ್ರ ಖಾಸಗೀಕರಣದ ಮೂಲಕ ಶಿಕ್ಷಣ ದುಬಾರಿಯಾಗಿರುವ ಈ ಕಾಲಘಟ್ಟದಲ್ಲಿ ಖಾಸಗೀಯವರಿಗೆ ಶುಲ್ಕ ನಿಯಂತ್ರಣದಲ್ಲ್ಲಿ ಸರಕಾರ ಹಸ್ತಕ್ಷೇಪ ಮಾಡಬಾರದು ಎಂಬ ನ್ಯಾಯಾಲಯದ ಆದೇಶವು ಪೋಷಕರಿಗೆ ನುಂಗಲಾರದ ತುತ್ತಾಗಿದೆ. ಇದರಿಂದ ಆರ್ಥಿಕವಾಗಿ ಸುಸ್ಥಿತಿಯಲ್ಲಿರುವ ಮಕ್ಕಳು ಉನ್ನತ ವ್ಯಾಸಂಗ ಮಾಡಿದರೆ ಬಡಕುಟುಂಬದ ಮಕ್ಕಳು ಬಿಪಿಎಲ್ ಪಟ್ಟಿಯಲ್ಲೇ ಸದಾ ಕಾಲ ಇರಬೇಕಾಗುತ್ತದೆ ಎಂದು ತಿಳಿಸಿದರು.
ಬಹುತೇಕ ಶಾಲಾ-ಕಾಲೇಜುಗಳನ್ನು ನಡೆಸುವವರು ರಾಜಕೀಯ ಹಿನ್ನೆಲೆಯುಳ್ಳವರಾಗಿದ್ದು, ಅವರಿಗೆ ಈ ಶುಲ್ಕ ನಿಯಂತ್ರಣ ಪ್ರಾಧಿಕಾರದ ಅವಶ್ಯಕತೆ ಇದ್ದಂತೆ ಕಾಣುತ್ತಿಲ್ಲ. ಖಾಸಗಿ ಶಾಲಾ-ಕಾಲೇಜುಗಳು ಪ್ರತಿ ವರ್ಷ ಅವರ ಬ್ಯಾಲೆನ್ಸ್ ಶೀಟ್ನ್ನು ತಯಾರು ಮಾಡಿ ಖರ್ಚು-ವೆಚ್ಚದ ಮಾಹಿತಿಯನ್ನು ಸರಕಾರಕ್ಕೆ ನೀಡುವಂತಾಗಬೇಕು. ಅದು ನಮ್ಮ ಪಕ್ಷದ ಬಹುಮುಖ್ಯ ಬೇಡಿಕೆಯಾಗಿದೆ ಎಂದು ಒತ್ತಾಯಿಸಿದರು.
ದೆಹಲಿಯಲ್ಲಿ ಆಮ್ಆದ್ಮಿ ಸರಕಾರ ಬಂದ ನಂತರ ಶಾಲಾ ಕಾಲೇಜುಗಳ ಶುಲ್ಕ ನಿಯಂತ್ರಣ ಪ್ರಾಧಿಕಾರವನ್ನು ರಚಿಸಿ ಖರ್ಚು-ವೆಚ್ಚದ ಸಂಪೂರ್ಣ ಮಾಹಿತಿಯನ್ನು ಸರಕಾರಕ್ಕೆ ನೀಡುವಂತೆ ಕಾನೂನು ತಂದಿದೆ. ಹೆಚ್ಚಿನ ಡೊನೆಷನ್ ಅಥವಾ ಶುಲ್ಕ ಅಲ್ಲಿ ಪಡೆಯುವಂತಿಲ್ಲ. ಪಡೆದರೆ ಅಪರಾಧವಾಗುತ್ತದೆ. ಹೀಗಾಗಿ ನಮ್ಮ ರಾಜ್ಯದಲ್ಲೂ ಶುಲ್ಕ ನಿಯಂತ್ರಣ ಪ್ರಾಧಿಕಾರ ರಚಿಸಿ ಆ ಮೂಲಕ ಶಿಕ್ಷಣ ಎಲ್ಲ ವರ್ಗದ ವಿದ್ಯಾರ್ಥಿಳಿಗೂ ಧಕ್ಕುವಂತೆ ಮಾಡುವುದು ನಮ್ಮನ್ನಾಳುವವರ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಆಮ್ಆದ್ಮಿ ಪಕ್ಷವು ದೆಹಲಿಯಲ್ಲಿ ಮಾಡಿದ ಶಿಕ್ಷಣ ಅಭಿವೃದ್ಧಿಯನ್ನು ಮಾದರಿಯಾಗಿಟ್ಟುಕೊಂಡು ರಾಜ್ಯ ಸರಕಾರ ಕಾನೂನು ಮಾಡುವ ಅಗತ್ಯತೆ ಇದೆ. ಬಡತನ ನಿವಾರಣೆ, ಭ್ರಷ್ಟಾಚಾರ ನಿವಾರಣೆಗೆ ಖಾಸಗಿ ಶಾಲೆಗಳು ಕೂಡ ಸಂಪೂರ್ಣ ಸಹಕಾರ ನೀಡಬೇಕು. ಆ ಮೂಲಕ ವಿದ್ಯಾರ್ಥಿಗಳ ನೈತಿಕ ಮಟ್ಟವನ್ನು ಹೆಚ್ಚಿಸಿ ಅವರನ್ನು ಕೌಶಲ್ಯಭರಿತ, ಪ್ರಾಮಾಣಿಕವಾಗಿ ದೇಶಕಟ್ಟುವ ಶಿಲ್ಪಿಗಳನ್ನಾಗಿ ತಯಾರು ಮಾಡಬೇಕು ಎಂಬುದು ಎಎಪಿಯ ಧ್ಯೇಯವಾಗಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಆಮ್ಆದ್ಮಿ ಪಕ್ಷದ ಮಾಜಿ ಜಿಲ್ಲಾಧ್ಯಕ್ಷ ಹೇಮಂತ್ಕುಮಾರ್, ಮುಖಂಡರಾದ ಎಂ.ಪಿ ಈರೇಗೌಡ, ಪ್ರಕಾಶ್ ಇದ್ದರು.