ಜನಸೇವೆಯಿಂದ ಬದುಕು ಸಾರ್ಥಕವಾಗುತ್ತದೆ ಮತ್ತು ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಹೇಳಿದ್ದಾರೆ.
ಅವರು ಇತ್ತೀಚಿಗೆ ಕಡೂರಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪದಾಧಿಕಾರಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು,
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಗ್ರಾಮ ಅಭಿವೃದ್ಧಿ ಯೋಜನೆಯ ಕಾರ್ಯಕರ್ತರು ಸಮಾಜದ ಹಿತದೃಷ್ಟಿಯಿಂದ ಕೆಲಸ ಮಾಡಬೇಕು. ಈ ಯೋಜನೆಯಲ್ಲಿ ಆರ್ಥಿಕ ಬಡತನ ಇರುವವರಿಗೆ ಆರ್ಥಿಕ ಸಬಲೀಕರಣದ ಜೊತೆಗೆ ಸಮಾಜಕ್ಕೆ ಬೇಕಾಗುವಂತಹ ಇನ್ನು ಹಲವಾರು ಉಪಯೋಗವಾಗುವ ಕಾರ್ಯಕ್ರಮಗಳು ಆಗುತ್ತಿದ್ದು ಇದರ ಬಗ್ಗೆ ಸರಿಯಾದ ರೀತಿಯಲ್ಲಿ ಜನಗಳಿಗೆ ಸೇವೆಗಳು ಮುಟ್ಟುತ್ತಾ ಇದೆಯೇ ಎಂದು ಗಮನಿಸಬೇಕು ಎಂದು ಕಿವಿಮಾತು ಹೇಳಿದರು.
ನಮ್ಮ ಯೋಜನೆಯ ಗುರಿ ಜನರನ್ನು ಆರ್ಥಿಕ ಸಬಲೀಕರಣದ ಮಾಡುವುದು ಇದರ ಜೊತೆಗೆ ನಾವು ಮಾಡುವಂತಹ ಹಲವಾರು ಕಾರ್ಯಕ್ರಮಗಳಿಂದ ಅವರಿಗೆ ಮೌಲ್ಯ ಸಂಸ್ಕಾರ ನೀಡುತ್ತಾ ಸೌಹಾರ್ದತೆಯನ್ನು ಬೆಳೆಸುತ್ತಾ ಸಮಾಜವನ್ನು ಸ್ವಾಸ್ಥ್ಯ ಸಮಾಜ ಮಾಡಬೇಕು ಎಂಬುದು ನಮ್ಮ ಉದ್ದೇಶ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶ್ರೀ ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಧರ್ಮೋತ್ತಾನ ಟ್ರಸ್ಟಿನ ಟ್ರಸ್ಟಿ ಆದ ಪ್ರಶಾಂತ್ ಚಿಪ್ರಗುತ್ತಿ ಉಪಸ್ಥಿತಿ ಇದ್ದು ಪರಮ ಪೂಜ್ಯ ಡಾ. ಡಿ ವೀರೇಂದ್ರ ಹೆಗ್ಗಡೆಯವರು ತಮ್ಮ ಇಡೀ ಜೀವನವನ್ನೇ ಸುಮಾರು 50 ವರ್ಷಕ್ಕಿಂತ ಹೆಚ್ಚು ಕಾಲ ಸಮಾಜದ ಒಳಿತಿಗಾಗಿ ಮುಡುಪಾಗಿಟ್ಟಿದ್ದು ಇವರು ನಮ್ಮ ಸಮಾಜಕ್ಕೆ ಶ್ರೀ ಮಂಜುನಾಥ ಸ್ವಾಮಿಯ ಕೊಟ್ಟ ಒಂದು ವರ ಆಗಿರುತ್ತಾರೆ ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕರಾದ ಶ್ರೀಮತಿ ಗೀತಾ, ಜಿಲ್ಲಾ ನಿರ್ದೇಶಕರಾದ ಸದಾನಂದ ಬಂಗೇರ ಹಾಗೂ ಯೋಜನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು