ಚಿಕ್ಕಮಗಳೂರು ನಗರದಲ್ಲಿ ಆಲಿಕಲ್ಲು ಸಹಿತ ಧಾರಾಕಾರ ಮಳೆಯಾಗಿದೆ.
ಮಂಗಳವಾರ ಮಧ್ಯಾಹ್ನ ಸುಮಾರು 2 ಗಂಟೆಗಳ ಕಾಲ ಚಿಕ್ಕಮಗಳೂರು ನಗರದಲ್ಲಿ ಭರ್ಜರಿಯಾಗಿ ಮಳೆ ಸುರಿದಿದೆ. ಮಳೆಯೊಂದಿಗೆ ಆಲಿಕಲ್ಲುಗಳು ಸುರಿದಿವೆ. ನಗರದಲ್ಲಿ ಸುಮಾರು 2 ರಿಂದ 3 ಇಂಚು ಮಳೆಯಾಗಿದೆ. ಕೆಲವು ಭಾಗದಲ್ಲಿ 3 ಇಂಚಿಗೂ ಅಧಿಕ ಮಳೆಯಾಗಿದೆ.
ಮಳೆಯಿಂದಾಗಿ ನಗರದ ರಸ್ತೆಗಳು ಹೊಳೆಯಂತೆ ಪರಿವರ್ತನೆಯಾಗಿದ್ದವು. ತಗ್ಗು ಪ್ರದೇಶಗಳ ಹಲವು ಮನೆಗಳಿಗೆ ನೀರು ನುಗ್ಗಿ ಜನರು ತೊಂದರೆ ಅನುಭವಿಸಿದರು.
ಅಚಾನಕ್ಕಾಗಿ ಬಿದ್ದ ಭಾರೀ ಮಳೆಯಿಂದ ನಗರದ ವಿವಿಧೆಡೆ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಚರಂಡಿಗಳಲ್ಲಿ ಹರಿಯಬೇಕಾದ ನೀರು ರಸ್ತೆಯಲ್ಲಿ ಹರಿದು ವಾಹನ ಸಂಚಾರರು ಕೆಲ ಕಾಲ ಪರದಾಡಬೇಕಾಯಿತು.
ಅಂಬರ್ವ್ಯಾಲಿ ಶಾಲೆಯ ಹತ್ತಿರ ಮರ ಉರುಳಿಬಿದ್ದು ಕೆಲ ಕಾಲ ಸಂಚಾರ ಬಂದ್ ಆದ ಘಟನೆಯು ನಡೆಯಿತು.ಹೌಸಿಂಗ್ಬೋರ್ಡ್ ಹತ್ತಿರದ ಸುಮುಖನಗರದಲ್ಲಿ ವಿದ್ಯುತ್ ತಂತಿಯ ಮೇಲೆ ಮರ ಬಿದ್ದ ಪರಿಣಾಮ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು.
ನಗರದ ಎಂ.ಜಿ ರಸ್ತೆಯ 2ನೇ ತಿರುವಿನಲ್ಲಿ ಅಗಸರ ಬೀದಿ ಸೇರಿದಂತೆ ವಿವಿಧೆಡೆ ನೀರು ತುಂಬಿ ದ್ವಿಚಕ್ರ ವಾಹನಗಳ ಜಲಾವೃತಗೊಂಡವು.
ಇಂದು ಸುರಿದ ಭಾರಿ ಆಲಿಕಲ್ಲು ಮಳೆಗೆ ನಗರದ ವಿವಿಧೆಡೆಯ ಮನೆಗಳ ಮೇಲ್ಚಾವಣಿಗಳಲ್ಲಿ ಅಳವಡಿಸಿದ್ದ ಸೋಲಾರ್ ಟ್ಯೂಬ್ಗಳು ಹಾನಿಗೊಂಡಿವೆ
ಚಿಕ್ಕಮಗಳೂರು ಸುತ್ತಮುತ್ತಲ ಪ್ರದೇಶಗಳಲ್ಲಿಯೂ ಗ್ರಾಮೀಣ ಪ್ರದೇಶದಲ್ಲಿ ಉತ್ತಮ ಮಳೆಯಾಗಿದೆ. ಜಿಲ್ಲೆಯ ಕಡೂರು, ಆಲ್ದೂರು, ಬಾಳೆಹೊನ್ನೂರುನಲ್ಲಿಯೂ ವ್ಯಾಪಕ ಮಳೆಯಾಗಿದೆ.
ಹಾಸನ ಜಿಲ್ಲೆಯ ವಿವಿದೆಡೆ ಉತ್ತಮ ಮಳೆಯಾಗಿದೆ, ಹಾಸನ, ಬೇಲೂರು, ಸಕಲೇಶಪುರ, ಆಲೂರು ಸುತ್ತಮುತ್ತಲ ಪ್ರದೇಶಗಳಲ್ಲಿ ಉತ್ತಮ ಮಳೆಯಾಗಿದೆ.
ವಿವಿದೆಡೆ ಸುರಿದ ಮಳೆಯ ವಿವರ ಕೆಳಗಿನಂತಿದೆ.
ಇಂದಾವರ : 1.10, ಹೆಡದಾಳು 2.00, ಹಳಿಯೂರು 1.95, ಚಿತ್ತವಳ್ಳಿ 0.65, ಅರೇನೂರು 1.0, ಹಂಗರವಳ್ಳಿ 1.15, ಗಬ್ಗಲ್ 1.10 ದರ್ಶನ(ಕುಂದೂರು) 0.75, ಅವತಿ ಬೈಗೂರು 1.10, ಬಿಕ್ಕರಣೆ ಕಡೆಗದ್ದೆ 0.70, ಕಣತಿ 0.70, ಮುಗುಳುವಳ್ಳಿ 1.15, ಬಾಳೆಹೊನ್ನೂರು 0.65, ಕಬ್ಬಿಣಸೇತುವೆ 0.45, ಆಲ್ದೂರು 1.20, ಬೆಟ್ಟದಮಳಲಿ 0.45, ಸಾರಗೋಡು 0.55, ತೇಗೂರು(ಚಿಕ್ಕಮಗಳೂರು) 3.10, ಸಿರುಗುಂದ 1.80, ಕಟ್ರುಮನೆ 0.80, ದಿಟ್ಟೆಕೊಪ್ಪ (ಕೊಪ್ಪ ತಾ) 1.35, ವಾಟೆಹಳ್ಳಿ (ಸಕಲೇಶಪುರ) 1.33, ಕೆರೆಮಕ್ಕಿ 1.20, ಜಯಪುರ(ಕೊಪ್ಪ)0.65
ಇನ್ನೂ ಮೂರ್ನಾಲ್ಕು ದಿನ ಮಳೆ ಸೂಚನೆಯಿದ್ದು, ರಾಜ್ಯದ ಹಲವು ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ.