ಚಿಕ್ಕಮಗಳೂರು ದಿ ಮೋಟಾರ್ಸ್ ಸ್ಫೋರ್ಟ್ಸ್ ಕ್ಲಬ್ ಆಫ್ ಚಿಕ್ಕಮಗಳೂರು ವತಿಯಿಂದ ಎರಡು ದಿನಗಳ ಕಾಲ ನಡೆದ ರ್ಯಾಲಿ ಆಫ್ ಚಿಕ್ಕಮಗಳೂರು ದ್ವಿಚಕ್ರ ವಾಹನ ರ್ಯಾಲಿಯ ಛಾಂಪಿಯನ್ ಆಗಿ ತಮಿಳುನಾಡು ಹೊಸೂರಿನ ಅಬ್ದುಲ್ ವಾಹಿದ್ ಅವರು ಹೊರಹೊಮ್ಮಿದರು.
ಹೊಸೂರಿನವರೇ ಆದ ಸ್ಯಾಮುಯೆಲ್ ಜಾಕೋಬ್ ಮತ್ತು ಆರ್.ಇ.ರಾಜೇಂದ್ರ ಅವರು ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನ ಗಳಿಸಿದ್ದು, ರ್ಯಾಲಿಯ ಮೊದಲ ಮೂರೂ ಸ್ಥಾನಗಳನ್ನು ಹೊಸೂರಿನ ಸ್ಪರ್ಧಿಗಳೇ ಬಾಚಿಕೊಂಡಿರುವುದು ವಿಶೇಷ.
ಎಂಆರ್ಎಫ್ ಮೋಗ್ರಿಪ್ ಎಫ್ಎಂಎಸ್ಸಿಐ ನ್ಯಾಷನಲ್ ರ್ಯಾಲಿ ಚಾಂಪಿಯನ್ಷಿಪ್ನ ಎರಡನೇ ಸುತ್ತಿನದ್ದಾಗಿದ್ದು, ದಾಖಲೆಯ 102 ಸವಾರರು ನೊಂದಾಯಿಸಿಕೊಂಡಿದ್ದರು. ಗೋವಾ, ಕಲ್ಕತ್ತ, ದೆಹಲಿ, ತಮಿಳುನಾಡು, ಮುಂಬೈ, ಬೆಂಗಳೂರು ಸೇರಿದಂತೆ ದೇಶದ ವಿವಿಧೆಡೆಗಳಿಂದ ಖ್ಯಾತನಾಮ ಸವಾರರು ಬಂದಿದ್ದರು.
ಅಲ್ಲಂಪುರದ ಸೆವೆನ್ ಇವನ್ ರೆಸಾರ್ಟ್ನಲ್ಲಿ ರ್ಯಾಲಿ ಆರಂಭವಾಗಿ ಒಟ್ಟು 9 ಸ್ಟೇಜ್ಗಳನ್ನು ಕ್ರಮಿಸಿತು. ವಸಂತ್ ಕೂಲ್ ಎಸ್ಟೇಟ್ನಲ್ಲಿ 8.68 ಕಿ.ಮೀ. ಸಾನೆಹಡ್ಲು ಎಸ್ಟೇಟ್ನಲ್ಲಿ 5.42 ಕಿ.ಮೀ, ಪಾಳ್ಯ ಎಸ್ಟೇಟ್ನಲ್ಲಿ 5.93. ಕಿಮೀ ಒಳಗೊಂಡಿತ್ತು.
ಸ್ಪೆಷಲ್ ಸ್ಟೇಜ್ ಒಟ್ಟು 3 ಬಾರಿ ನಡೆಯಿತು. ಒಟ್ಟು 60.03 ಕಿ.ಮೀ ನಷ್ಟು ಸ್ಪೆಷಲ್ ಸ್ಟೇಜ್ ರ್ಯಾಲಿ ನಡೆದಿದ್ದು, ಒಟ್ಟು 144 ಕಿ.ಮೀ.ಕ್ರಮಿಸಿತು 12 ಮಹಿಳಾ ಸ್ಪರ್ಧಿಗಳು ಭಾಗವಹಿಸಿದ್ದರು.