ಪ್ರವಾಸಕ್ಕೆ ಸ್ನೇಹಿತನ ಮನೆಗೆ ಬಂದಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಕಾಫಿ ತೋಟದ ಜಮೀನಿನಲ್ಲಿದ್ದ ಕೆರೆಯಲ್ಲಿ ಈಜಲು ಹೋಗಿ ಮೃತಪಟ್ಟಿರುವ ಘಟನೆ ಮೂಡಿಗೆರೆ ತಾಲೂಕಿನ ಗೋಣಿಬೀಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದೆ.
ಮೃತ ಯುವಕನನ್ನು ಹಾವೇರಿ ಜಿಲ್ಲೆಯ ಮಕರವಳ್ಳಿ ಮೂಲದ ಬೆಂಗಳೂರು ನಿವಾಸಿ ಆಕಾಶ್ ಎಂ.ಪಿ(19) ಎಂದು ಗುರುತಿಸಲಾಗಿದ್ದು, ತಂದೆಯ ಮರಣ ನಂತರ ಈತ ಕಳೆದ 15 ವರ್ಷಗಳಿಂದ ತನ್ನ ತಾಯಿ ಮತ್ತು ಸಹೋದರನೊಂದಿಗೆ ಬೆಂಗಳೂರಿನಲ್ಲಿ ವಾಸವಾಗಿದ್ದ ಎನ್ನಲಾಗಿದೆ. ಏಪ್ರಿಲ್ 27ರಂದು ತನ್ನ ಅಣ್ಣ ಕುಶಾಲ್ ಹಾಗೂ ಸ್ನೇಹಿತದಾರ ಭರತ್, ಶ್ರೇಯಸ್ ಎಂಬವರೊಂದಿಗೆ ಆಕಾಶ್ ಬೆಂಗಳೂರಿನಿಂದ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕಿನ ಗೋಣಿಬೀಡು ಕೊಪ್ಪಲು ಎಂಬಲ್ಲಿ ಇರುವ ರಾಜಗೋಪಾಲ್ ಎಂಬುವವರ ತೋಟದ ಮನೆಗೆ ಬಂದಿದ್ದರು ಎನ್ನಲಾಗಿದೆ. ಇವರು ರಾಜಗೋಪಾಲ್ ಅವರ ಮಗನ ಸ್ನೇಹಿತರು ಎಂದು ಹೇಳಲಾಗುತ್ತಿದೆ.
ಭಾನುವಾರ ಸಂಜೆ ನಾಲ್ವರು ರಾಜಗೋಪಾಲ್ ಅವರ ಜಮೀನಿನಲ್ಲಿದ್ದ ಕೆರೆಯಲ್ಲಿ ಈಜಲು ಹೋಗಿದ್ದರು ಎಂದು ಹೇಳಲಾಗಿದೆ. ಈ ವೇಳೆ ಕೆರೆಯ ಆಳದ ಅರಿವಿದರ ಆಕಾಶ್ ಈಜಾಡುತ್ತ ಆಳದ ಗುಂಡಿಗೆ ಇಳಿದಿದ್ದಾನೆ. ಈ ವೇಳೆ ಗುಂಡಿಯ ಕೆಸರಿನಲ್ಲಿ ಸಿಲುಕಿಕೊಂಡ ಆಕಾಶ್ ಮೇಲೆ ಬರಲಾರದೇ ನಾಪತ್ತೆಯಾಗಿದ್ದ.
ಸಹೋದರ ಹಾಗೂ ಸ್ನೇಹಿತರು ಕೃಷಿ ಹೊಂಡದಲ್ಲಿ ಆಕಾಶ್ಗಾಗಿ ಎಷ್ಟೇ ಹುಡುಕಿದರೂ ಪತ್ತೆಯಾಗಿಲ್ಲ. ನಂತರ ಸ್ಥಳೀಯ ಸ್ನೇಕ್ ಆರೀಫ್ ಜತೆ ಗೋಣಿಬೀಡು ಪೊಲೀಸರು ಹಾಗೂ ಅಗ್ನಿಶಾಮಕದಳದ ಸಿಬ್ಬಂದಿ ಸಂಜೆ, ರಾತ್ರಿವರೆಗೂ ಹುಡುಕಾಡಿದರೂ ಆಕಾಶ್ ಮೃತದೇಹ ಪತ್ತೆಯಾಗಿಲ್ಲ.
ಸೋಮವಾರ ಬೆಳಿಗ್ಗೆ ಮಂಗಳೂರು ಮೂಲದ ಮುಳುಗು ತಜ್ಞ ಈಶ್ವರ್ ಮಲ್ಪೆ ಹಾಗೂ ಸ್ನೇಕ್ ಆರೀಫ್ ಸೇರಿ ಆಕಾಶ್ ಶವಕ್ಕಾಗಿ ಹುಡುಕಾಡಿ ಕೆಲ ಹೊತ್ತಿನಲ್ಲಿಯೇ ಮೃತದೇಹ ಪತ್ತೆಯಾಗಿದೆ.
ಘಟನೆ ಸಂಬಂಧ ಮೃತ ಆಕಾಶ್ ಅವರ ಸಹೋದರ ಕುಶಾಲ್ ಗೋಣಿಬೀಡು ಠಾಣೆಗೆ ದೂರು ನೀಡಿದ್ದು, ತನ್ನ ಸಹೋದರ ಆಕಸ್ಮಿಕವಾಗಿ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಗೋಣಿಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೂಡಿಗೆರೆ ಎಂ.ಜಿ.ಎಂ. ಆಸ್ಪತ್ರೆಗೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಪೋಷಕರಿಗೆ ಹಸ್ತಾಂತರಿಸಲಾಗಿದೆ.