ಬೇಲೂರು ತಾಲ್ಲೂಕಿನ ಅರೇಹಳ್ಳಿ ಸಮೀಪ ಪ್ರಯಾಣಿಕರ ಆಟೋ ಒಂದರ ಮೇಲೆ ಕಾಡಾನೆ ದಾಳಿ ನಡೆಸಿದ್ದು, ದಾಳಿಯಲ್ಲಿ ಮಹಿಳೆಯೊಬ್ಬರು ಗಾಯಗೊಂಡಿದ್ದಾರೆ.
ಗುರುವಾರ ಅರೇಹಳ್ಳಿ ಸಮೀಪ ಆಟೋ ದ ಮೇಲೇಯೇ ಆನೆಗಳು ದಾಳಿ ಮಾಡಿವೆ. ಆನೆ ದಾಳಿ ಮಾಡಿದ ಸಂದರ್ಭದಲ್ಲಿ ಆಟೋ ಗೆ ಹಾನಿ ಯಾಗಿ ಆಟೋದಲ್ಲಿದ್ದ ಮಹಿಳೆಗೂ ಗಾಯವಾಗಿದೆ.
ಗುರುವಾರ ಬೆಳಿಗ್ಗೆ ಆಟೋ ಚಾಲಕ ಮೋಹನ್ ಎಂಬುವವರು ತಮ್ಮ ಆಟೋದಲ್ಲಿ ಶಿವಾನಿ ಎಂಬ ಮಹಿಳಾ ಪ್ರಯಾಣಿಕರನ್ನು ಅರೆಹಳ್ಳಿಗೆ ಸಮೀಪದ ಗುಜ್ಜನಹಳ್ಳಿಯಿಂದ ಕರೆದುಕೊಂಡು ಬರುತ್ತಿದ್ದಾಗ ರಸ್ತೆಗೆ ಅಡ್ಡಲಾಗಿ ಐದು ಕಾಡಾನೆಗಳು ಬಂದಿವೆ. ಆನೆಗಳ ಗುಂಪನ್ನು ಕಂಡು ಆಟೋ ಚಾಲಕ ಅಲ್ಲಿಂದ ಓಡಿದ್ದಾರೆ. ಆದ್ರೆ ಮಹಿಳೆ ಮಾತ್ರ ಓಡಲು ಸಾಧ್ಯವಾಗದೇ ಆಟೋದಲ್ಲಿ ಕೂತಿದ್ದಾಗ ಎರಡು ಆನೆಗಳು ಆಟೋ ಮೇಲೆ ದಾಳಿ ಮಾಡಿ ಆಟೋ ವನ್ನು ಉರುಳಿಸಿ ಚರಂಡಿಗೆ ದೂಡಿ ಬಿಟ್ಟಿವೆ.
ಆ ಸಂದರ್ಭದಲ್ಲಿ ಆಟೋದಲ್ಲಿದ್ದ ಶಿವಾನಿ ಯವರು ನೆಲಕ್ಕೆ ಬಿದ್ದು ಗಾಯಗೊಂಡಿದ್ದಾರೆ. ಮಹಿಳೆಯ ಮತ್ತು ಆಟೋ ಚಾಲಕನ ಅರಚಾಟದಿಂದ ಆನೆಗಳು ಆಟೋವನ್ನು ಉರುಳಿಸಿ ಮುಂದೆ ಸಾಗಿವೆ. ಇದರಿಂದ ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆಟೋ ಕ್ಕೆ ತೀವ್ರ ಹಾನಿಯಾಗಿದೆ.
ಬಡ ಆಟೋ ಚಾಲಕನ ಆಟೋ ತೀವ್ರ ಹಾನಿಯಾಗಿದ್ದು, ಅವರಿಗೆ ಅರಣ್ಯ ಇಲಾಖೆ ಸೂಕ್ತ ಪರಿಹಾರ ನೀಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.