ಚಿಕ್ಕಮಗಳೂರು ನಗರದ ಎಟಿಎಂ ಒಂದರಲ್ಲಿ ಆಕಸ್ಮಿಕ ಬೆಂಕಿ ತಗುಲಿ ಐದು ಲಕ್ಷ ರೂ. ಬೆಂಕಿಗೆ ಆಹುತಿಯಾಗಿರುವ ಘಟನೆ ನಡೆದಿದೆ.
ನಗರ ಐ.ಜಿ.ರಸ್ತೆಯಲ್ಲಿರುವ ಕರ್ನಾಟಕ ಬ್ಯಾಂಕ್ ಎಟಿಎಂ ಗೆ ಭಾನುವಾರ ಮಧ್ಯರಾತ್ರಿ ಬೆಂಕಿ ತಗುಲಿ ಐದು ಲಕ್ಷ ರೂ. ಬೆಂಕಿಗೆ ಆಹುತಿಯಾಗಿದೆ.
ಎಟಿಎಂ ಕೊಠಡಿಯಲ್ಲಿ ಅಳವಡಿಸಿರುವ ಎಸಿ ಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗಿ ಬೆಂಕಿ ಆವರಿಸಿದೆ ಎಂದು ಅಂದಾಜಿಸಲಾಗಿದೆ. ಎಸಿಯಲ್ಲಿ ಕಾಣಿಸಿಕೊಂಡ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಇಡೀ ಎಟಿಎಂ ಗೆ ಆವರಿಸಿದ್ದು ಎಟಿಎಂ ನಲ್ಲಿದ್ದ ಐದು ಲಕ್ಷ ರೂ. ಸುಟ್ಟು ಕರಕಲಾಗಿದೆ.
ಎಟಿಎಂ ಕೊಠಡಿಯಲ್ಲಿದ್ದ ಹಣ ತುಂಬುವ ಮೆಷಿನ್ ಹಾಗೂ ಎಟಿಎಂ ಮೆಷಿನ್ ಸುಟ್ಟು ಹೋಗಿದೆ. ಎಟಿಎಂಗೆ ಬೆಂಕಿ ತಗುಲಿರುವ ವಿಷಯ ತಿಳಿಯುತ್ತಿದ್ದಂತೆ ಆಗ್ನಿ ಶಾಮಕ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಎಟಿಎಂ ಕೊಠಡಿ ಮೇಲ್ಬಾಗದಲ್ಲಿ ಕರ್ನಾಟಕ ಬ್ಯಾಂಕ್ ಶಾಖೆ ಇದ್ದು ಅಗ್ನಿ ಶಾಮಕ ಸಿಬ್ಬಂದಿಗಳ ಸಕಾಲಿಕ ಕಾರ್ಯದಿಂದ ದೊಡ್ಡ ಅನಾಹುತ ತಪ್ಪಿದೆ.