ಹಾಸನ ಜಿಲ್ಲೆ ಸಕಲೇಶಪುರ ಭಾಗದಲ್ಲಿ ಉಪಟಳ ನೀಡುತ್ತಿರುವ ಕಾಡಾನೆಗಳ ಸೆರೆಗೆ ಅರಣ್ಯ ಇಲಾಖೆ ಮುಂದಾಗಿದ್ದು ಅದರಂತೆ ಕರಡಿ ಹೆಸರಿನ ಕಾಡಾನೆಯನ್ನು ಅರಣ್ಯ ಇಲಾಖೆ ಸೆರೆ ಹಿಡಿದಿತ್ತು. ಇದರ ಬೆನ್ನಲ್ಲೇ ಇದೀಗ ಸೀಗೆ ಗುಡ್ಡ ಹೆಸರಿನ ಕಾಡಾನೆಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಸಕಲೇಶಪುರ ತಾಲ್ಲೂಕು ಹೆತ್ತೂರು ಸಮೀಪ ಅಭಿಮನ್ಯು ನೇತೃತ್ವದಲ್ಲಿ ಎಂಟು ಆನೆಗಳ ಸಹಾಯದೊಂದಿಗೆ ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿತ್ತು ಸೀಗೆ ಗುಡ್ಡ ಕಾಡಾನೆಯನ್ನು ಹಿಡಿಯುವ ಕಾರ್ಯಾಚರಣೆಯನ್ನು ಶುಕ್ರವಾರದಿಂದ ಪ್ರಾರಂಭಿಸಲಾಗಿತ್ತು. ಆದರೆ ಡಾಟ್ ಮಾಡಲು ಸೀಗೆ ಗುಡ್ಡ ಕಾಡಾನೆ ಸಿಗದ ಹಿನ್ನೆಲೆಯಲ್ಲಿ ಶುಕ್ರವಾದ ಕಾರ್ಯಾಚರಣೆಯನ್ನು ನಿಲ್ಲಿಸಲಾಗಿತ್ತು.
ಶನಿವಾರ ಬೆಳಗ್ಗೆ ಮತ್ತೆ ಕಾರ್ಯಾಚರಣೆ ಕೈಗೊಂಡ ಅರಣ್ಯ ಇಲಾಖೆ ಸೀಗೆ ಗುಡ್ಡ ಆನೆಯನ್ನು ಸೆರೆಹಿಡಿದು ದುಬಾರೆ ಆನೆ ಶಿಬಿರಕ್ಕೆ ಕರೆದೊಯ್ದಿದ್ದಾರೆ.
ಸೀಗೆ ಗುಡ್ಡ ಎಂದು ಅರಣ್ಯ ಇಲಾಖೆಯವರು ಗುರುತಿಸಿದ್ದ ಈ ಕಾಡಾನೆಯು ಸಕಲೇಶಪುರ ಭಾಗದಲ್ಲಿ ಬಹಳಷ್ಟು ಉಪಟಳ ನೀಡುತ್ತಿತ್ತು ಮತ್ತು ಮಾನವ ಜೀವ ಹಾನಿಗೂ ಕಾರಣವಾಗಿತ್ತು ಎನ್ನಲಾಗಿದೆ.
ಇದೀಗ ಕಳೆದ ನಾಲ್ಕು ದಿನಗಳಿಂದ ಬೇಲೂರು ಸಕಲೇಶಪುರ ಭಾಗದಲ್ಲಿ ಎರಡು ಕಾಡಾನೆಗಳನ್ನು ಹಿಡದಂತಾಗಿದೆ. ಆನೆ ಹಿಡಿಯುವ ಕಾರ್ಯಾಚರಣೆ ಇನ್ನೂ ಮುಂದುವರಿಯುತ್ತದೆ ಎಂದು ತಿಳಿದುಬಂದಿದೆ.