ಮೂಡಿಗೆರೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಈ ಹಿಂದಿನ ಬಿ.ಜೆ.ಪಿ. ಸರ್ಕಾರ ನೀಡಿದ ಅನುದಾನದಲ್ಲಿ ಅನುಷ್ಟಾನಗೊಳ್ಳುತ್ತಿರುವ ಕಾಮಗಾರಿಗಳನ್ನು ಕಾಂಗ್ರೇಸ್ ಸರ್ಕಾರದ ಸಾಧನೆ ಎಂದು ಸ್ಥಳೀಯ ಶಾಸಕರು ಜನರನ್ನು ದಾರಿತಪ್ಪಿಸುತ್ತಿದ್ದಾರೆ ಎಂದು ಪಟ್ಟಣ ಪಂಚಾಯಿತಿ ಬಿ.ಜೆ.ಪಿ. ಸದಸ್ಯರು ಆರೋಪಿಸಿದ್ದಾರೆ.
ಶನಿವಾರ ಮೂಡಿಗೆರೆಯಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಹಾಲಿ ಸದಸ್ಯ ಹಾಗೂ ಮಾಜಿ ಅಧ್ಯಕ್ಷ ಪಿ.ಜಿ. ಅನುಕುಮಾರ್ ; ಈ ಹಿಂದಿನ ಬಸವರಾಜ ಬೊಮ್ಮಾಯಿ ನೇತೃತ್ವದ ಬಿ.ಜೆ.ಪಿ. ಸರ್ಕಾರ ಹಾಗೂ ಕೇಂದ್ರ ಸರ್ಕಾರ ನಗರೋತ್ಥಾನ ಸೇರಿದಂತೆ ವಿವಿಧ ಯೋಜನೆಗಳಲ್ಲಿ ನೀಡಿರುವ ಅನುದಾನದಲ್ಲಿ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ರಸ್ತೆ, ಒಳಚರಂಡಿ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಹಿಂದಿನ ಸರ್ಕಾರದ ಅವಧಿಯಲ್ಲಿ ಮಂಜೂರಾಗಿ ಅನುಮೋದನೆ ಪಡೆದ ಕಾಮಗಾರಿಗಳು ಈಗ ನಡೆಯುತ್ತಿವೆ. ಆದರೆ ಕ್ಷೇತ್ರದ ಶಾಸಕರು ಇದು ಕಾಂಗ್ರೇಸ್ ಸರ್ಕಾರ ಯೋಜನೆಗಳು ಎಂದು ಹೇಳಿ ಜನರನ್ನು ದಿಕ್ಕುತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದರು.
ಪ.ಪಂ ವ್ಯಾಪ್ತಿಯಲ್ಲಿ ನಗರೊತ್ತಾನ ಯೋಜನೆಯ 5 ಕೋಟಿ ರೂ. ಅನುದಾನದಲ್ಲಿ ಪೈಕಿ 2.85 ಕೋಟಿ ಹಣ ಬಳಸಿ ರಸ್ತೆ, ಚರಂಡಿ ಅಭಿವೃದ್ಧಿಗೊಳಿಸಲಾಗಿದೆ. ಉಳಿದ 2.15 ಕೋಟಿ ಅನುದಾನದಲ್ಲಿ ವಿವಿಧ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಈ ಅನುದಾನ 2022 ರಲ್ಲಿ ಬಸವರಾಜ್ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದಾಗ ಬಿಡುಗಡೆಯಾಗಿತ್ತು. ಆಗಲೆ ಪಪಂ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಕ್ರಿಯಾಯೋಜನೆ ತಯಾರಿಸಲಾಗಿತ್ತು. ಈಗಿನ ಶಾಸಕಿ ನಯನ ಮೋಟಮ್ಮ ಅವರು ನಗರೊತ್ತಾನ ಯೋಜನೆಯ ಕಾಮಗಾರಿಗೆ ಅಲ್ಲಲ್ಲಿ ಶಂಕುಸ್ಥಾಪನೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಿ, ಕಾಂಗ್ರೆಸ್ ಸರ್ಕಾರದ ಅನುದಾನವೆಂದು ಹೇಳಿಕೊಳ್ಳುತ್ತಿದ್ದಾರೆ. ಅವರ ಹೇಳಿಕೆ ಸುಳ್ಳು, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ನಗರಕ್ಕಾಗಲಿ ಅಥವ ಗ್ರಾಮೀಣ ಪ್ರದೇಶಕ್ಕಾಗಲಿ ನಯಾ ಪೈಸೆ ಅನುದಾನವನ್ನು ಬಿಡುಗಡೆ ಮಾಡಿಲ್ಲ. ಶಾಸಕರು ಪಟ್ಟಣ ಪಂಚಾಯತಿ ಸದಸ್ಯರ ಒಂದೇ ಒಂದು ಸಭೆಯನ್ನು ಸಹ ಕರೆದಿಲ್ಲ ಎಂದು ದೂರಿದರು.
ಪ.ಪಂ ಸದಸ್ಯ ಮನೋಜ್ ಕುಮಾರ್ ಮಾತನಾಡಿ, ಪಟ್ಟಣದಲ್ಲಿ ಪಕ್ಕಾ ಮನೆ ನಿರ್ಮಾಣಕ್ಕೆ 22.32 ಲಕ್ಷ, ತಡೆಗೋಡೆ ಮತ್ತು ರಸ್ತೆಗೆ ಇಂಟರ್ಲಾಕ್ ಟೈಲ್ಸ್ ಅಳವಡಿಕೆಗೆ 34.92ಲಕ್ಷ, ಕಡೆಮಾಡ್ಕಲ್ ಗ್ರಾಮದ ಕಸವಿಲೆ ಘಟಕದ ತಡೆಗೋಡೆಗೆ 2 ಕೋಟಿ ಸೇರಿದಂತೆ ಬಿಜೆಪಿ ಸರ್ಕಾರ ಬಿಡುಗಡೆ ಮಾಡಿದ್ದ 12 ಕೋಟಿ ಅನುದಾನದಲ್ಲಿ ಈಗ ಕಾಮಗಾರಿ ನಡೆಯುತ್ತಿದೆ. ಕೆಲ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ ಎಂದು ತಿಳಿಸಿದರು.
ಪಪಂ ಸದಸ್ಯೆ ಆಶಾ ಮೋಹನ್ ಮಾತನಾಡಿ, ತನ್ನ ವಾರ್ಡಿನಲ್ಲಿ ಪಾರ್ಕ್ ನಿರ್ಮಾಣಕ್ಕೆ 28 ಲಕ್ಷ ಮೀಸಲಿರಿಸಲಾಗಿದೆ. ತಾಲೂಕು ಆಸ್ಪತ್ರೆಗೆ ಕೇಂದ್ರ ಸರ್ಕಾರದ 50 ಲಕ್ಷ ರೂ. ಅನುದಾನದಲ್ಲಿ ಸುಸಜ್ಜಿತವಾದ ಐಸಿಯು ಘಟಕ, 1 ಕೋಟಿ ರೂ. ವೆಚ್ಚದಲ್ಲಿ ಆಕ್ಸಿಜನ್ ಪ್ಲಾಂಟ್ ನಿರ್ಮಿಸಲಾಗಿದೆ. ಬಿಜೆಪಿ ಸರ್ಕಾರ ನೀಡಿದ ಅನುದಾನವನ್ನು ಕಾಂಗ್ರೆಸ್ ಶಾಸಕರು ನಮ್ಮದೆಂದು ಹೇಳಿಕೊಳ್ಳುತ್ತಿರುವುದು ಸರಿಯಲ್ಲ ಎಂದು ತಿಳಿಸಿದರು.
ಪಪಂ ಸದಸ್ಯೆ ಕಮಲಮ್ಮ, ಮುಖಂಡರಾದ ಎಂ.ಕೆ.ಚಂದ್ರೇಶ್, ಧನಿಕ್, ಸುಂದರೇಶ್, ಪದ್ಮಣ್ಣ ಇದ್ದರು.