ಹಿರಿಯ ಕಾಫಿ ಬೆಳೆಗಾರ, ಸಮಾಜ ಸೇವಕ ಡಿ.ಕೆ. ಲಕ್ಷ್ಮಣಗೌಡ(81 ವರ್ಷ) ಹೃದಯಾಘಾತದಿಂದ ನಿಧನಹೊಂದಿದ್ದಾರೆ.
ಮೂಡಿಗೆರೆ ಸಮೀಪದ ಘಟ್ಟದಹಳ್ಳಿಯ ತಮ್ಮ ಸಾರಂಧ ಎಸ್ಟೇಟ್ ಮನೆಯಲ್ಲಿ ಗುರುವಾರ ರಾತ್ರಿ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.
ಮೂಲತಃ ಮೂಡಿಗೆರೆ ತಾಲ್ಲೂಕಿನ ದಾರದಹಳ್ಳಿ ಗ್ರಾಮದವರಾದ ಲಕ್ಷ್ಮಣಗೌಡರು, ಘಟ್ಟದಹಳ್ಳಿ ಸಮೀಪ ತಮ್ಮ ತೋಟದ ಮನೆಯಲ್ಲಿ ನೆಲೆಸಿದ್ದರು.
ಬೆಂಗಳೂರಿನಲ್ಲಿ ಕಾನೂನು ಪದವಿ ವ್ಯಾಸಾಂಗ ಮಾಡುವಾಗ ಧರ್ಮಸ್ಥಳ ಧರ್ಮಾಧಿಕಾರಿಗಳಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಸಹಪಾಠಿಯಾಗಿದ್ದ ಲಕ್ಷ್ಮಣಗೌಡರು ವೀರೇಂದ್ರ ಹೆಗ್ಗಡೆಯವರೊಂದಿಗೆ ಉತ್ತಮ ಬಾಂಧವ್ಯ ಇರಿಸಿಕೊಂಡಿದ್ದರು.
ಶ್ರೀ ಕ್ಷೇತ್ರ ಧರ್ಮಸ್ಥಳದೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಅವರು ಸಂಸ್ಥೆಯ ಶಾಲಾ ಕಾಲೇಜುಗಳಲ್ಲಿ ಮಲೆನಾಡು ಭಾಗದ ನೂರಾರು ವಿದ್ಯಾರ್ಥಿಗಳಿಗೆ ವ್ಯಾಸಾಂಗ ಮಾಡಲು ಮಾರ್ಗದರ್ಶನ ನೀಡಿದ್ದರು.
ಮಲೆನಾಡು ಭಾಗದ ಹತ್ತಾರು ದೇವಾಲಯಗಳ ಜೀರ್ಣೋದ್ಧಾರಕ್ಕೆ ಶ್ರೀ ಕ್ಷೇತ್ರದಿಂದ ದೇಣಿಗೆ ಕೊಡಿಸುವಲ್ಲಿ ಮಾರ್ಗದರ್ಶನ ಮಾಡಿದ್ದರು.
ಈಗ್ಗೆ ಎರಡು ತಿಂಗಳ ಹಿಂದೆ ಲಕ್ಷ್ಮಣಗೌಡರ ಪತ್ನಿ ಸೀತಮ್ಮನವರು ನಿಧನ ಹೊಂದಿದ್ದರು.
ಲಕ್ಷ್ಮಣಗೌಡರು ಇಬ್ಬರು ಹೆಣ್ಣುಮಕ್ಕಳು, ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಘಟ್ಟದಹಳ್ಳಿಯ ಅವರ ತೋಟದ ಮನೆಯಲ್ಲಿ ಇಂದು (ಶುಕ್ರವಾರ) ಸಂಜೆ 4 ಗಂಟೆಗೆ ಪಾರ್ಥೀವ ಶರೀರದ ಅಂತಿಮ ಸಂಸ್ಕಾರ ನೆರವೇರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ