ಹೇಮಾವತಿ ನದಿ ಉಗಮ ಹಿತರಕ್ಷಣಾ ಒಕ್ಕೂಟದ ಸಭೆಯು ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ಪಟ್ಟಣದಲ್ಲಿ ಮಂಗಳವಾರ ನಡೆಯಿತು.
ಸಭೆಯಲ್ಲಿ ಹೇಮಾವತಿ ನದಿ ಉಗಮ ಹಿತರಕ್ಷಣಾ ಒಕ್ಕೂಟದ ಅಧ್ಯಕ್ಷ ಬಾಲಕೃಷ್ಣ ಮಾತನಾಡಿ ; ಜೀವನದಿ ಕಾವೇರಿಯ ಪ್ರಮುಖ ಉಪನದಿಯಾಗಿರುವ ಹೇಮಾವತಿಯು ಪಶ್ಚಿಮ ಘಟ್ಟದ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಜಾವಳಿಯಲ್ಲಿ ಹುಟ್ಟಿ 250ಕಿ.ಲೋ.ಮೀಟರ್ ಗೂ ಹೆಚ್ಚು ಉದ್ದವಾಗಿ ಹರಿದು ಚಿಕ್ಕಮಗಳೂರು, ಹಾಸನ, ಮಂಡ್ಯ, ಮೈಸೂರು, ಕೊಡಗು, ತುಮಕೂರು ಸೇರಿದಂತೆ ಆರು ಜಿಲ್ಲೆಗಳ ಭೂಮಿಗೆ ನೀರುಣಿಸುತ್ತಿದೆ. ಹೇಮಾವತಿ ನದಿ ಹಾಗೂ ನದಿಯ ಉಗಮ ಸ್ಥಾನವನ್ನು ಅಭಿವೃದ್ಧಿಪಡಿಸದೆ ನಿರ್ಲಕ್ಷ್ಯ ಮಾಡಲಾಗಿದೆ. ಆದ್ದರಿಂದ 6 ಜಿಲ್ಲೆಗಳ ವ್ಯಾಪ್ತಿಯ ರೈತರ ಒಕ್ಕೂಟವನ್ನು ರಚಿಸಿಕೊಂಡು ನದಿಯ ಮೂಲವಾದ ಜಾವಳಿಯನ್ನು ಕಾವೇರಿ ನದಿ ಉಗಮ ಸ್ಥಳವಾದ ಭಾಗಮಂಡಲದ ತಲ ಕಾವೇರಿಯನ್ನು ಅಭಿವೃದ್ಧಿ ಪಡಿಸಿದಂತೆ ಹೇಮಾವತಿ ನಂದಿಮೂಲ ಜಾವಳಿಯನ್ನು ಅಭಿವೃದ್ಧಿಪಡಿಸಲು ಮತ್ತು ಹೇಮಾವತಿ ನದಿ ಅಭಿವೃದ್ಧಿ ಪ್ರಾಧಿಕಾರವನ್ನು ರಚಿಸಲು ಸರ್ಕಾರದ ಮುಂದಾಗಬೇಕು ಎಂದು ಆಗ್ರಹಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಗತಿಪರ ರೈತ ಹೋರಾಟಗಾರ ವಿಠಲಾಪುರ ಸುಬ್ಬೇಗೌಡ : ಹೇಮಾವತಿ ನದಿಯ ಉಗಮ ಸ್ಥಾನವಾದ ಜಾವಳಿಯನ್ನು ತೀರ್ಥ ಕ್ಷೇತ್ರವನ್ನಾಗಿ ಅಭಿವೃದ್ಧಿಪಡಿಸಲು ಸರ್ಕಾರವು ಪ್ರಾಧಿಕಾರವನ್ನು ರಚಿಸಿ ಸಭಾಭವನ, ಅತಿಥಿ ಗೃಹ, ಶುದ್ಧಗಂಗಾ ಕುಡಿಯುವ ನೀರಿನ ಘಟಕದ ಸ್ಥಾಪನೆ, ರಸ್ತೆಗಳ ಅಗಲೀಕರಣ, ಹೇಮಾವತಿ ಮತ್ತು ಸೋಮಾವತಿ ಉದ್ಯಾನವನಗಳ ನಿರ್ಮಾಣ, ಸಾರಿಗೆ ವ್ಯವಸ್ಥೆ, ಕೆರೆಗಳ ಹೂಳೆತ್ತುವುದು, ಹೇಮಾವತಿ ಹೆಬ್ಬಾಗಿಲು ಮತ್ತು ಪ್ರತಿಮೆ ನಿರ್ಮಾಣ, ಮಹಾಗಣಪತಿ ದೇವಸ್ಥಾನ ಅಭಿವೃದ್ಧಿ ಸೇರಿದಂತ 06ಜಿಲ್ಲೆಗಳಲ್ಲಿ ಪ್ರತಿ ವರ್ಷವೂ ಹೇಮಾದ್ರಿ ಉತ್ಸವ ಆಯೋಜಿಸಿ ಕಲೆ, ಸಂಸ್ಕೃತಿ, ಸಾಹಿತ್ಯದ ಸಮ್ಮಿಲನ ಕಾರ್ಯಕ್ರಮ ಆಯೋಜಿಸುವುದು ಸೇರಿದಂತೆ ಹೇಮಾವತಿ ಪ್ರತಿಮೆಯೊಂದಿಗೆ ನದಿಯ ಕುರಿತ ಸಾಕ್ಷ್ಯ ಚಿತ್ರದ ವಾಹನದ ಸಂಚಾರಿ ಪ್ರದರ್ಶನ ನಡೆಸಿ ನದಿಯ ಬಗ್ಗೆ ಜಾಗೃತಿ ಮೂಡಿಸಲು ಅಗತ್ಯವಾದ ಹೇಮಾವತಿ ಅಭಿವೃದ್ಧಿ ಪ್ರಾಧಿಕಾರದ ಸ್ಥಾಪನೆಗೆ ಸರ್ಕಾರದ ಮೇಲೆ ಒತ್ತಡ ಹಾಕಲಾಗುವುದು ಎಂದರು.
ರಾಜ್ಯ ಗೃಹಮಂಡಳಿ ಮಾಜಿ ಅಧ್ಯಕ್ಷ ಜಿ.ಹೆಚ್. ಹಾಲಪ್ಪಗೌಡ, ಹೋರಾಟ ಸಮಿತಿಯ ಕಾರ್ಯದರ್ಶಿ ಎಂ.ವಿ. ಜಗದೀಶ್, ನಿರ್ದೇಶಕರಾದ ಟಿ. ಪಿ.ಸುರೇಂದ್ರ, ಬಿ.ಎಂ.ಸುರೇಶ್, ಶಶಿಧರ್, ಮನೋಹರ್, ಅನಂತ್, ಸಮಾಜ ಸೇವಕ ಮಲ್ಲಿಕಾರ್ಜುನ, ಹಿರಿಯ ಪತ್ರಕರ್ತರಾದ ಹರಿಚರಣತಿಲಕ್, ಬಳ್ಳೇಕೆರೆ ಮಂಜುನಾಥ್, ಕೆ.ಆರ್.ನೀಲಕಂಠ, ಬಲ್ಲೇನಹಳ್ಳಿ ಮಂಜುನಾಥ್, ಬಸವರಾಜು ಸಭೆಯಲ್ಲಿ ಮಾತನಾಡಿದರು.
ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ನಾರಾಯಣಗೌಡ, ಮುಖಂಡರಾದ ರಾಮಸ್ವಾಮಿ, ದೇವೇಗೌಡ, ರಾಜಶೇಖರ್ ಸೇರಿದಂತೆ ನೂರಾರು ಪ್ರಗತಿಪರ ರೈತರು ಸಭೆಯಲ್ಲಿ ಭಾಗವಹಿಸಿದ್ದರು.