ಕಳೆದ 10 ವರ್ಷದಲ್ಲಿ ಕೇಂದ್ರದ ಬಿಜೆಪಿ ಸರಕಾರದ ದುರಾಡಳಿತದಿಂದ ದೇಶದ ಜನತೆ ನೆಮ್ಮದಿ ಹಾಗೂ ಶಾಂತಿಯಿಂದ ಬದುಕಲು ಸಾಧ್ಯವಾಗಿಲ್ಲ. ಜನರು ನೆಮ್ಮದಿಯಿಂದ ಬದುಕುವ ಕಾಲ ಬಂದಿದ್ದು, ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕೆಂದು ಮಾಜಿ ಸಚಿವೆ ಮೋಟಮ್ಮ ಹೇಳಿದರು.
ಅವರು ಮಂಗಳವಾರ ಪಟ್ಟಣದ ಸುಶಾಂತ್ ನಗರದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಘೋಷಿಸಿರುವ ಗ್ಯಾರಂಟಿ ಕಾರ್ಡ್ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಕೇಂದ್ರದ ಬಿಜೆಪಿ ಸರಕಾರ 10 ವರ್ಷದಲ್ಲಿ ದೊಡ್ಡ ದೊಡ್ಡ ಕಂಪನಿ ಮಾಲೀಕರ ಪರವಾಗಿ ಕೆಲಸ ಮಾಡಿತೆ ಹೊರತು, ಬಡ ಜನರ, ಕೂಲಿ ಕಾರ್ಮಿಕರ, ರೈತರ ಅಭಿವೃದ್ಧಿ ಬಗ್ಗೆ ಚಿಂತಿಸಲೂ ಇಲ್ಲ. ಉತ್ತಮ ಯೋಜನೆ ರೂಪಿಸಲೂ ಇಲ್ಲ. ಹಾಗಾಗಿ ದೇಶದ ಜನತೆ ಅರ್ಥಿಕ ಸಂಕಷ್ಟ ಎದುರಿಸಿದ್ದಾರೆ. ಕೇವಲ ಸುಳ್ಳು ಹೇಳಿಕೊಂಡು 10 ವರ್ಷ ಕಾಲ ಕಳೆದಿದ್ದರಿಂದ ಮೋದಿ ಅಲೆ ಸಂಪೂರ್ಣ ಕ್ಷೀಣಿಸಿದೆ. ಇನ್ನು ಮುಂದೆ ಮೋದಿ ಹಸರೇಳಿಕೊಂಡು ಚುನಾವಣೆ ಗೆಲ್ಲಲು ಸಾಧ್ಯವಿಲ್ಲವೆಂದು ಬಿಜೆಪಿಯವರಿಗೆ ಅರಿವಾಗಿದೆ. ಹಾಗಾಗಿ ಈ ಕ್ಷೇತ್ರದಲ್ಲಿ 2 ಬಾರಿ ಆಯ್ಕೆಯಾಗಿ ಏನೂ ಕೆಲಸ ಮಾಡದ ಶೋಭಾ ಕರಂದ್ಲಾಜೆ ಅವರನ್ನು ಬಿಜೆಪಿಯವರೇ ಗೋ ಬ್ಯಾಕ್ ಅಭಿಯಾನ ನಡೆಸಿ ಓಡಿಸಿದ್ದಾರೆಂದು ಹೇಳಿದರು. .
ಶಾಸಕಿ ನಯನಾ ಮೋಟಮ್ಮ ಮಾತನಾಡಿ, ರಾಜ್ಯದ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರುವ ಮುನ್ನ ಘೋಷಣೆ ಮಾಡಿದ 5 ಗ್ಯಾರಂಟಿಯನ್ನು ಜನರಿಗೆ ನೀಡುವ ಮೂಲಕ ಮಾತಿಗೆ ತಕ್ಕಂತೆ ನಡೆದಿದೆ. ಈಗ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಯುವ, ಮಹಿಳಾ, ರೈತ, ಶ್ರಮಿಕ ಮತ್ತು ಪಾಲುದಾರಿಕೆ ನ್ಯಾಯಕ್ಕಾಗಿ 5 ಗ್ಯಾರಂಟಿ ಘೋಷಣೇ ಮಾಡಿದೆ. ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಈ ಎಲ್ಲಾ ಗ್ಯಾರಂಟಿ ಜಾರಿಯಾಗುವ ಮೂಲಕ ದೇಶದ ಜನತೆ ಬದುಕು ಹಸನಾಗುತ್ತದೆ. ಹಾಗಾಗಿ ಉಡುಪಿ ಚಿಕ್ಕಮಗಳೂರು ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಜಯಪ್ರಕಾಶ್ ಹೆಗ್ಡೆ ಅವರಿಗೆ ಮತ ಹಾಕುವ ಮೂಲಕ ಕಾಂಗ್ರೆಸ್ನ್ನು ಬೆಂಬಲಿಸಬೇಕೆಂದು ಮನವಿ ಮಾಡಿದರು.
ಪ.ಪಂ. ಸದಸ್ಯ ರಮೇಶ್ ಹೊಸಕೆರೆ ಮುಖಂಡರಾದ ರಘು ಮಗ್ಗಲಮಕ್ಕಿ, ಮೆಲ್ವಿನ್ ಬಣಕಲ್, ರಘು ಬಿ.ಹೊಸಳ್ಳಿ ಮುಂತಾದವರು ಇದ್ದರು.