ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯಿಂದಾಗಿ ಉಡುಪಿ-ಚಿಕ್ಕಮಗಳೂರು ಸೇರಿದಂತೆ ರಾಜ್ಯದ 28 ಲೋಕಸಭೆ ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿಗಳು ಗೆಲುವು ಸಾಧಿಸುವುದು ಶತಸಿದ್ದ. ಇದರಿಂದ ಕಾಂಗ್ರೆಸ್ಗೆ ಮುಖಭಂಗವಾಗಲಿದೆ ಎಂದು ಉಪ ಸಭಾಪತಿ ಎಂ.ಕೆ.ಪ್ರಾಣೇಶ್ ಹೇಳಿದರು.
ಅವರು ಶುಕ್ರವಾರ ಮೂಡಿಗೆರೆ ಪಟ್ಟಣದಲ್ಲಿ ಪಕ್ಷದ ಚುನಾವಣಾ ಪ್ರಚಾರ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿ ಮತ್ತೆ ಪ್ರಧಾನಿ ಪಟ್ಟ ಅಲಂಕರಿಸುವುದನ್ನು ನೋಡಲು ದೇಶದ ಜನತೆ ಕಾಯುತ್ತಿದ್ದಾರೆ. ದೇಶದಲ್ಲಿ ಕಳೆದ 10 ವರ್ಷದಿಂದ ಭ್ರಷ್ಟಾಚಾರ ರಹಿತ ಆಡಳಿತ ನಡೆಸಲಾಗಿದೆ. ಕೇಂದ್ರದಿಂದ ಪ್ರತಿ ಮನೆಗೆ ಉಚಿತವಾಗಿ 5 ಕೇಜಿ ಅಕ್ಕಿ ವಿತರಿಸಲಾಗುತ್ತಿದೆ. ಉಜ್ವಲ ಗ್ಯಾಸ್ನಲ್ಲಿ ಸಬ್ಸಿಡಿ ನೀಡಲಾಗಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಸ್ಥಿರತೆ ಕಾಪಾಡಿಕೊಳ್ಳಲಾಗಿದೆ. ಯೂರಿಯಾ ಸೇರಿದಂತೆ ರೈತರ ರಸಗೊಬ್ಬರಗಳಿಗೆ ಸಬ್ಸಿಡಿ ನೀಡಲಾಗುತ್ತಿದೆ. ಕಿಸಾನ್ ಸಲ್ಮಾನ್ ಹೆಸರಲ್ಲಿ ರೈತರಿಗೆ ಬೀಜ ವ್ಯವಸಾಯ ಪರಿಕರಗಳನ್ನು ಕೊಳ್ಳಲು ಸಹಾಯ ನೀಡಲಾಗುತ್ತಿದೆ. ರಾಷ್ಟ್ರೀಯ ಮತ್ತು ಗ್ರಾಮೀಣ ರಸ್ತೆಗಳನ್ನು ಮೇಲ್ದರ್ಜೆಗೇರಿಸಲಾಗಿದೆ. ರೈಲ್ವೆ ಯೋಜನೆ ಮೂಲಕ ಸಂಚಾರವನ್ನು ಸುಗಮಗೊಳಿಸಲಾಗಿದೆ. ಜನಸಾಮಾನ್ಯರು ವಿಮಾನದಲ್ಲಿ ತಿರುಗುವ ಕನಸನ್ನು ನನಸು ಮಾಡಲಾಗಿದೆ. ಮುಖ್ಯವಾಗಿ ಭಯೋತ್ಪಾದಕರನ್ನು ಮಟ್ಟ ಹಾಕಲಾಗಿದೆ. ಜಮ್ಮು ಕಾಶ್ಮೀರದಲ್ಲಿ ಶಾಂತಿ ನೆಲೆಸುವ ಕ್ರಮವಾಗಿದೆ. ರಾಮಮಂದಿರದ ಕನಸು ನನಸಾಗಿದೆ ಎಂದು ಹೇಳಿದರು.
ಜೆಡಿಎಸ್ ಜಿಲ್ಲಾಧ್ಯಕ್ಷ ರಂಜನ್ ಅಜಿತ್ ಕುಮಾರ್ ಮಾತನಾಡಿ, ಕಾಂಗ್ರೆಸ್ ಸರಕಾರ ಗ್ಯಾರಂಟಿ ಹೆಸರಲ್ಲಿ ಅಭಿವೃದ್ಧಿ ಕುಂಠಿತಗೊಳಿಸಿದೆ. ರಾಷ್ಟ್ರೀಯ ಶಿಕ್ಷಣ ನೀತಿಯನ್ನು ತಡೆದು ಬಡವರ ಮಕ್ಕಳ ಉನ್ನತ ಶಿಕ್ಷಣದ ಹಕ್ಕನ್ನು ಕಿತ್ತು ಕೊಳ್ಳಲಾಗಿದೆ. ನಿಮ್ಮ 10 ಕೇಜಿ ಅಕ್ಕಿ ಕೊಡುತ್ತೇವೆಂದು ಮಾತಿಗೆ ತಪ್ಪಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಮತ ಹಾಕದಿದ್ದರೆ ಗ್ಯಾರಂಟಿ ರದ್ದುಪಡಿಸುವುದಾಗಿ ಕಾಂಗ್ರೆಸ್ನ ಐಟಿ ಸೆಲ್ನಿಂದ ಮತದಾರರಿಗೆ ಕರೆ ಮಾಡುತ್ತಿರುವುದು ತಿಳಿದು ಬಂದಿದ್ದು, ಈ ಬಗ್ಗೆ ಚುನಾವಣಾ ಆಯೋಗ ಗಂಭೀರವಾಗಿ ಪರಿಗಣಿಸಬೇಕೆಂದು ಹೇಳಿದರು.
ಬಿಜೆಪಿ ತಾಲೂಕು ಅಧ್ಯಕ್ಷ ಗಜೇಂದ್ರ ಕೊಟ್ಟಿಗೆಹಾರ, ಜಿಲ್ಲಾ ಕಾರ್ಯದರ್ಶಿ ಜೆ.ಎಸ್.ರಘು, ಮುಖಂಡರಾದ ಪ್ರಶಾಂತ್, ಧನಿಕ್, ಸುದರ್ಶನ್, ವಿನೋದ್ ಕಣಚೂರು, ಹೂವಪ್ಪ, ಲಕ್ಷ್ಮಣಗೌಡ ಬಾಳೂರು, ಶಶಿ ಜಾವಳಿ, ಪದ್ಮಣ್ಣ, ಬಾಲುಶೆಟ್ಟಿ ಮತ್ತಿತರರಿದ್ದರು.