ಚುನಾವಣಾ ಬಾಂಡ್ ಹೆಸರಿನಲ್ಲಿ ಕಾಂಗ್ರೆಸ್ ಪಕ್ಷ ಬಿಜೆಪಿ ಮೇಲೆ ಭ್ರಷ್ಟಾಚಾರದ ಆರೋಪ ಹೊರಿಸುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದು ಬಿಜೆಪಿ ಜಿಲ್ಲಾ ಕಾರ್ಯದರ್ಶಿ ರಘು ಜನ್ನಾಪುರ ತಿಳಿಸಿದ್ದಾರೆ.
ಅವರು ಶುಕ್ರವಾರ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿ, ಚುನಾವಣಾ ಬಾಂಡ್ ಎಂಬುದು ಒಂದು ಪಾರದರ್ಶಕ ನೀತಿಯಾಗಿದೆ. ಸಾರ್ವಜನಿಕರು ಇಷ್ಟಪಟ್ಟು ಪಕ್ಷಗಳಿಗೆ ನೀಡುವ ದೇಣಿಗೆ ಪದ್ಧತಿಯಾಗಿದೆ. ಅದರಂತೆ ಅನೇಕ ಕಂಪನಿಗಳು ಸಾರ್ವಜನಿಕರು ದೇಣಿಗೆ ನೀಡಿದ್ದಾರೆ. ಕೇವಲ 2 ರಾಜ್ಯದಲ್ಲಿ ಆಡಳಿತಕ್ಕೆ ಸೀಮಿತವಾಗಿರುವ ಕಾಂಗ್ರೆಸ್ ಪಕ್ಷಕ್ಕೆ 1400 ಕೋಟಿ ಚುನಾವಣಾ ಬಾಂಡ್ ಮೂಲಕ ಹಣ ಬಂದಿದ್ದು, ಇಡೀ ದೇಶ ವ್ಯಾಪ್ತಿಯಲ್ಲಿ ಕೇಂದ್ರ ಮತ್ತು ರಾಜ್ಯಗಳ ಆಡಳಿತ ನಡೆಸುತ್ತಿರುವ ಬಿಜೆಪಿಗೆ ಅಧಿಕ ದೇಣಿಗೆ ಬಂದಿರುವುದನ್ನು ಸಹಿಸಿಕೊಳ್ಳದೇ ಬಿಜೆಪಿ ವಿರುದ್ಧ ಆರೋಪ ಮಾಡುತ್ತಿರುವುದು ಸರಿಯಲ್ಲ. ಈ ಹಿಂದೆ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಹೆದರಿಸಿ ಬೆದರಿಸಿ ಕಪ್ಪು ಹಣ ಪಡೆದುಕೊಂಡು ಇಡೀ ದೇಶವನ್ನೇ ಲೂಟಿ ಮಾಡಿ ಸ್ವಿಸ್ ಬ್ಯಾಂಕ್ ನಲ್ಲಿ ಇಟ್ಟವರು, ಬೋಪರ್ಸ್ ಹಗರಣ, 2ಜಿ ಹಗರಣ, ಕಾಮನ್ ವೆಲ್ತ್, ಕಲ್ಲಿದ್ದಲು ಸೇರಿದಂತೆ ಲಕ್ಷಾಂತರ ಕೋಟಿ ಭ್ರಷ್ಟಾಚಾರ ಮಾಡಿರುವ ಕಾಂಗ್ರೆಸ್ನವರಿಗೆ ನಮ್ಮ ಪಕ್ಷದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ತಿಳಿಸಿದ್ದಾರೆ.
ಕಳೆದ 10 ವರ್ಷದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ತನ್ನ ಕೇಂದ್ರ ಸಂಪುಟದಲ್ಲಿ ಒಂದೇ ಒಂದು ಕಳಂಕ ಇಲ್ಲದಂತೆ ಕೆಲಸ ಮಾಡಿದ್ದಾರೆ. ದೇಶವನ್ನು ಅರ್ಥಿಕವಾಗಿ ಅಭಿವೃದ್ಧಿಯತ್ತ ಕೊಂಡೊಯ್ದಿದ್ದಾರೆ. ಅಲ್ಲದೇ ದೇಶದ ಬಲಿಷ್ಟ ಭದ್ರತಾ ನೀತಿ ಸುಧಾರಿಸಿದ್ದಾರೆ. ಇದನ್ನು ದೇಶದ ಜನತೆ ಗಮನಿಸುತ್ತಿದ್ದಾರೆ. ಕಾಂಗ್ರೆಸ್ ಭ್ರಷ್ಟಾಚಾರದ ಜನಕ ಆಗಿರುವುದರಿಂದ ಅವರ ಚುನಾವಣಾ ಸೋಲನ್ನು ಈಗಾಗಲೇ ಒಪ್ಪಿಕೊಳ್ಳುವಂತಾಗಿದೆ.
ಅಂಗನವಾಡಿ ಕಾರ್ಯಕರ್ತರಿಗೆ ಸಂಬಳ ದುಪ್ಪಟ್ಟು ಮಾಡಲು ಸಾಧ್ಯವಾಗಿಲ್ಲ. ವಿದ್ಯುತ್, ಭೂಕಂದಾಯ, ಸ್ಟ್ಯಾಂಪ್ ಡ್ಯೂಟಿ ಎಲ್ಲವನ್ನು ಹೆಚ್ಚಿಸಿದ್ದಾರೆ. ತಾಲೂಕು ಕಚೇರಿಗಳಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ. ಅಭಿವೃದ್ಧಿ ಕಾಮಗಾರಿ ಹೆಸರೆ ಇಲ್ಲ. ಬರಗಾಲದಿಂದ ಜನ ಜಾನುವಾರುಗಳಿಗೆ ಕುಡಿಯುವ ನೀರಿಲ್ಲ. ಗ್ಯಾರಂಟಿ ಹೆಸರಲ್ಲಿ ಚುನಾವಣೆ ಗಿಮಿಕ್ ಮಾಡಿ ರಾಜ್ಯ ದಿವಾಳಿ ಮಾಡುತ್ತಿದ್ದಾರೆಂದು ದೂರಿದ್ದಾರೆ.