ಡಾ. ಬಿ.ಆರ್ ಅಂಬೇಡ್ಕರ್ ಅಧ್ಯಯನ ಸಂಸ್ಥೆಗೆ ಹಾಗೂ ಬುದ್ಧ ವಿಹಾರ ಕಾರ್ಯಚಟುವಟಿಕೆಗೆ ಚಿಕ್ಕಮಗಳೂರು ನಗರದ ಸಮೀಪ ನಿವೇಶನ ಮಂಜೂರು ಮಾಡುವಂತೆ ಜಿಲ್ಲಾಡಳಿತ, ಸರ್ಕಾರ ಮತ್ತು ಶಾಸಕರಿಗೆ ಮನವಿ ನೀಡಲಾಗಿದೆ ಎಂದು ಸಂಸ್ಥೆ ಅಧ್ಯಕ್ಷ ಹಾಗೂ ಮಾಜಿ ಸಚಿವ ಬಿ.ಬಿ ನಿಂಗಯ್ಯ ತಿಳಿಸಿದರು.
ಅವರು ಮಂಗಳವಾರ ಚಿಕ್ಕಮಗಳೂರು ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಹಲವಾರು ವರ್ಷಗಳಿಂದ ಡಾ. ಬಿ.ಆರ್ ಅಂಬೇಡ್ಕರ್ ಅಧ್ಯಯನ ಸಂಸ್ಥೆ ಜಾಗ ಮಂಜೂರು ಮಾಡುವಂತೆ ಜಿಲ್ಲಾಡಳಿತಕ್ಕೆ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗೆ, ಜಿಲ್ಲಾ ಸಚಿವರಿಗೆ ಹಾಗೂ ಕ್ಷೇತ್ರದ ಶಾಸಕರಿಗೆ ಮನವಿ ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದರು.
ಜಿಲ್ಲೆಯಲ್ಲಿ ದಲಿತ ಸಮುದಾಯ ದೊಡ್ಡ ಸಮುದಾಯವಾಗಿದ್ದು ಸಾವಿರಾರು ವರ್ಷಗಳಿಂದ ಶೋಷಣೆಗೆ ಒಳಗಾಗಿದ್ದು, ಸಮುದಾಯಿಕ ಕಾರ್ಯಚಟುವಟಿಕೆಗಳಿಗೆ ಜಾಗ ಮಂಜೂರು ಮಾಡುವಂತೆ ಡಾ. ಬಿ.ಆರ್ ಅಂಬೇಡ್ಕರ್ ಅನುಯಾಯಿಗಳಾದ ನಾವು ಮನವಿ ನೀಡಿದ ಮೇರೆಗೆ ಜಾಗ ಗುರ್ತಿಸಿ ಮಂಜೂರು ಮಾಡಿಸಿ ಕೊಡುವುದಾಗಿ ಭರವಸೆ ನೀಡಿದ್ದರು ಎಂದರು.
ಕಸಬಾ ಹೋಬಳಿ ಗಮನಹಳ್ಳಿ ಸರ್ವೆ ನಂಬರ್ 93 ರಲ್ಲಿ 13 ಎಕರೆ ಜಾಗವನ್ನು ಗುರುತಿಸಿದ್ದು, ಈ ಜಾಗವನ್ನು ಜಿಲ್ಲಾ ಕೇಂದ್ರದಲ್ಲಿ ಬುದ್ಧ ವಿಹಾರ ಮಾಡಲು ಮಂಜೂರು ಮಾಡುವಂತೆ ಜಿಲ್ಲಾಡಳಿತವನ್ನು ಒತ್ತಾಯಿಸಿದರು.
ಈಗಾಗಲೇ ಮೂಡಿಗೆರೆ ತಾಲೂಕಿನಲ್ಲಿ 10 ಎಕರೆ ಜಾಗವನ್ನು ಈ ಉದ್ದೇಶಕ್ಕೆ ಮೀಸಲಿಡಲಾಗಿದೆ. ಇದೇ ಮಾದರಿಯಲ್ಲಿ ಉಳಿದ 8 ತಾಲೂಕು ಕೇಂದ್ರಗಳಲ್ಲಿ ನಿವೇಶನ ಮಂಜೂರು ಮಾಡಬೇಕು. ಜೊತೆಗೆ ಜಿಲ್ಲಾ ಅಂಬೇಡ್ಕರ್ ಸಮುದಾಯ ಭವನ ನಿರ್ವಹಣೆಯನ್ನು ಸಂಸ್ಥೆಗೆ ವಹಿಸಬೇಕೆಂದು ಆಗ್ರಹಿಸಿದರು.
ಶೋಷಿತ, ತುಳಿತಕ್ಕೊಳ್ಳಗಾದ, ಬಡವರಿಗಾಗಿ ಡಾ. ಬಿ.ಆರ್ ಅಂಬೇಡ್ಕರ್ ಅಧ್ಯಯನ ಸಂಸ್ಥೆ ಸ್ಥಾಪಿಸಿದ್ದು, ಇದು ಜಾರಿ ಆದರೆ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ, ಅಂಬೇಡ್ಕರ್ ಕುರಿತ ಗ್ರಂಥಾಲಯ, ಸಮುದಾಯದ ಜನರ ಆರೋಗ್ಯ ಚಿಕಿತ್ಸೆ ಜೊತೆಗೆ ದಲಿತರಿಗೆ ಮಂಜೂರಾದ ಜಮೀನಿನ ಬಗ್ಗೆ ವಿವರ ಪಡೆದು ದಲಿತರ ಸಮಸ್ಯೆಗಳ ನಿವಾರಣೆಗೆ ಶ್ರಮಿಸುವುದು ಸಂಸ್ಥೆ ಉದ್ದೇಶ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆ ಕೋಶಾಧ್ಯಕ್ಷ ಎಂ.ಎಸ್ ಆನಂತ್, ದಲಿತ ಸಂಘಟನೆ ಮುಖಂಡರಾದ ಮರ್ಲೆ ಅಣ್ಣಯ್ಯ, ಹೊನ್ನೇಶ್, ಹರಿಯಪ್ಪ, ಹುಣಸೇಮಕ್ಕಿ ಲಕ್ಷ್ಮಣ, ಅನಿಲ್ಕುಮಾರ್ ಉಪಸ್ಥಿತರಿದ್ದರು.