ಕಾಫಿನಾಡಿನಲ್ಲಿ ಕಾಡಾನೆ ದಾಳಿಗೆ ಮಾನವ ಪ್ರಾಣ ಹಾನಿ ಮುಂದುವರಿದಿದೆ. ಕಾಡಾನೆ ದಾಳಿಗೆ ಮತ್ತೊಬ್ಬ ಕೃಷಿಕ ಬಲಿಯಾಗಿದ್ದಾರೆ. ಕೊಡಗು ಜಿಲ್ಲೆಯಲ್ಲಿ ಕಾಡಾನೆ ದಾಳಿಯಿಂದ ಮತ್ತೊಂದು ಸಾವು ಸಂಭವಿಸಿದೆ.
ಕೊಡಗು ಜಿಲ್ಲೆ ಶನಿವಾರಸಂತೆ ಸಮೀಪದ ಹೊಸಗುತ್ತಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಹೊಸಗುತ್ತಿ ಗ್ರಾಮದ ಕಾಂತರಾಜು (45) ಕಾಡಾನೆ ದಾಳಿಯಿಂದ ಮೃತ ದುರ್ದೈವಿ. ಕಾಂತುರಾಜು ಇಂದು ಮುಂಜಾನೆ ಮನೆಯಿಂದ ಜಮೀನಿಗೆ ತೆರಳುವಾಗ ಕಾಡಾನೆ ದಾಳಿ ನಡೆಸಿದೆ. ಆನೆಯಿಂದ ತಪ್ಪಿಸಿಕೊಳ್ಳಲು ಆಗದೆ ಕಾಂತುರಾಜು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಭಾಗದಲ್ಲಿ ನಿರಂತರ ಹಾವಳಿ ಕೊಡುತ್ತಿರುವ ಕಾಡಾನೆಯನ್ನು ಸೆರೆಹಿಡಿಯುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಬೇಲೂರಿನಲ್ಲಿ ರೈತನ ಮೇಲೆ ಒಂಟಿಸಲಗ ಅಟ್ಯಾಕ್
ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನ ಬಿಕ್ಕೋಡು ಹೋಬಳಿಯಲ್ಲಿ ರೈತನ ಮೇಲೆ ಕಾಡಾನೆ ದಾಳಿ ನಡೆಸಿ ತೀವ್ರ ಗಾಯಗೊಳಿಸಿದೆ.
ಬಿಕ್ಕೋಡು ಸಮೀಪದ ಬೊಮ್ಮಡಿಹಳ್ಳಿ ಎಂಬಲ್ಲಿ ದೇವರಾಜು ಎಂಬ ರೈತನ ಮೇಲೆ ಶನಿವಾರ ಸಂಜೆ ಕಾಡಾನೆ ದಾಳಿ ನಡೆಸಿದೆ.
ಜಮೀನಿನಿಂದ ಹಸುವನ್ನು ಹೊಡೆದುಕೊಂಡು ಬರುತ್ತಿದ್ದಾಗ ಏಕಾಏಕಿ ಎದುರಾದ ಕಾಡಾನೆ ದೇವರಾಜು ಅವರನ್ನು ಎತ್ತಿ ಎಸೆದಿದ್ದು, ಅವರ ಎದೆಯ ಮೇಲೆ ಕಾಲಿಡಲು ಪ್ರಯತ್ನಿಸಿದೆ. ಈ ಸಂದರ್ಭದಲ್ಲಿ ಅವರ ಕಿವಿಗೆ ತೀವ್ರ ಪೆಟ್ಟಾಗಿದೆ.
ತಕ್ಷಣ ಅವರನ್ನು ಬೇಲೂರು ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಲಾಗಿದೆ. ನಂತರ ಹೆಚ್ಚಿನ ಚಿಕಿತ್ಸೆಗೆ ಹಾಸನ ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದೆ.
ಇಂದು ಗಾಯಾಳು ದೇವರಾಜು ಅವರನ್ನು ಹಾಸನ ಲೋಕಸಭಾ ಕ್ಷೇತ್ರದ ಜೆ.ಡಿ.ಎಸ್. ಬಿ.ಜೆ.ಪಿ. ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದಾರೆ.