ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಸಾಹಿತಿ ಹಳೇಕೋಟೆ ರಮೇಶ್ ಅವರನ್ನು ಮೂಡಿಗೆರೆ ಸಚೇತನ ಯುವ ಸಂಘದ ಪದಾಧಿಕಾರಿಗಳು ಅಭಿನಂದಿಸಿದರು.
ಬುಧವಾರ ಹಳೇಕೋಟೆ ರಮೇಶ್ ಅವರ ನಿವಾಸಕ್ಕೆ ತೆರಳಿದ ಸಚೇತನ ಯುವ ಸಂಘದ ಅಧ್ಯಕ್ಷರು ಮತ್ತು ಸದಸ್ಯರು ರಮೇಶ್ ದಂಪತಿಗಳಿಗೆ ಸನ್ಮಾನಿಸಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ರವಿ ರಾಜ್ ಅರಸ್, ಮಾಜಿ ಅಧ್ಯಕ್ಷರಾದ ವಿನಯ್ ಹಳೇಕೋಟೆ, ಟಿ. ಹರೀಶ್, ನಿಶ್ಚಲ್, ಫ್ರಾನ್ಸಿಸ್, ಮಂಜುನಾಥ್, ವಿವೇಕ್, ದಿನೇಶ್ ಮುಂತಾದವರು ಉಪಸ್ಥಿತರಿದ್ದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ರಮೇಶ್ ಅವರು ಸಚೇತನ ಯುವ ಸಂಘ ಮೂಡಿಗೆರೆಯಲ್ಲಿ ಅನೇಕ ವರ್ಷಗಳಿಂದ ಉತ್ತಮ ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ ಕಾರ್ಯಕ್ರಮಗಳನ್ನು ನಡೆಸುತ್ತಾ ಬರುತ್ತಿದೆ ಎಂದು ಸಂಘದ ಸದಸ್ಯರ ಸಮಾಜಮುಖಿ ಕಾರ್ಯಗಳನ್ನು ಶ್ಲಾಘಿಸಿದರು. ಯುವಕರು ಸಂಘಟಿತರಾಗಿ ಉತ್ತಮ ಹವ್ಯಾಸಗಳನ್ನು ಮೈಗೂಡಿಸಿಕೊಂಡು ಜನರಿಗೆ ಅನುಕೂಲವಾಗುವ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಸಾಹಿತ್ಯ ಸಮ್ಮೇಳನಕ್ಕೆ ಸರ್ವರ ಸಹಕಾರವನ್ನು ಕೋರಿದರು. ತಮ್ಮನ್ನು ಗೌರವಿಸಿ ಅಭಿನಂದಿಸಿದ್ದಕ್ಕೆ ಧನ್ಯವಾದ ಹೇಳಿದರು.