ಮಾ.29 ಮತ್ತು 30 ರಂದು ಎರಡು ದಿನ ಮೂಡಿಗೆರೆ ಪಟ್ಟಣದ ಅಡ್ಯಂತಾಯ ರಂಗಮಂದಿರದ ರವಿ ಲಕ್ಷೀಶ ವೇದಿಕೆಯಲ್ಲಿ 19ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಸಮ್ಮೇಳನಾಧ್ಯಕ್ಷ ಹಳೆಕೋಟೆ ರಮೇಶ್ ಅವರ ಅಧ್ಯಕ್ಷತೆಯಲ್ಲಿ ಅದ್ದೂರಿಯಾಗಿ ನಡೆಯಲಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಹೇಳಿದರು.
ಅವರು ಶನಿವಾರ ಮೂಡಿಗೆರೆ ಪಟ್ಟಣದಲ್ಲಿ ಸಮ್ಮೇಳನದ ಆಹ್ವಾನ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿ, ಮಾ.29ರಂದು ಬೆಳಗ್ಗೆ 8ಗಂಟೆಗೆ ಪಟ್ಟಣದ ಅಡ್ಯಂತಾಯ ರಂಗಮಂದಿರದಲ್ಲಿ ಜಿಲ್ಲಾಧಿಕಾರಿ ಡಾ.ಮೀನಾ ನಾಗರಾಜ್ ರಾಷ್ಟ್ರ ದ್ವಜಾರೋಹಣ, ಪರಿಷತ್ತಿನ ಧ್ವಜಾರೋಹಣ ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್, ನಾಡಧ್ವಜಾರೋಹಣ ಕಸಾಪ ಅಧ್ಯಕ್ಷ ಎಚ್.ಎಂ.ಶಾಂತಕುಮಾರ್ ನೆರವೇರಿಸಲಿದ್ದಾರೆ. 9 ಗಂಟೆಗೆ ಚಂದನ್ ಗ್ರೂಪ್ ಮಾಲೀಕ ಕೆ.ಮಂಚೇಗೌಡ ಅವರು ಸಮ್ಮೇಳನಾಧ್ಯಕ್ಷರ ಮೆರವಣಿಗೆ ಉದ್ಘಾಟಿಸಲಿದ್ದು, 11.30 ಗಂಟೆಗೆ ಮೂಡಿಬಿದರೆ ಆಳ್ವಾಸ್ ವಿದ್ಯಾಸಂಸ್ಥೆ ಮುಖ್ಯಸ್ಥ ಡಾ.ಮೋಹನ್ ಆಳ್ವ ಸಮ್ಮೇಳನ ಉದ್ಘಾಟಿಸಲಿದ್ದಾರೆ. ಸಮ್ಮೇಳನದ ಸರ್ವಾಧ್ಯಕ್ಷ ಹಳೇಕೋಟೆ ರಮೇಶ್ ಸಮ್ಮೇಳನಾಧ್ಯಕ್ಷರ ಭಾಷಣ ಮಾಡಲಿದ್ದಾರೆ. ಕಸಾಪ ರಾಜ್ಯಾಧ್ಯಕ್ಷ ಡಾ.ಮಹೇಶ್ ಜೋಷಿ ಅವರು ನೇತೃತ್ವ ಮತ್ತು ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಿದ್ದು, 6 ಪುಸ್ತಕಗಳ ಲೋಕಾರ್ಪಣೆಯಾಗಲಿದೆ. ಸಾಧಕರಿಗೆ ಸನ್ಮಾನ, ಮಧ್ಯಾಹ್ನ 2ಗಂಟೆಗೆ ಅನ್ನದಾತರ ಅಳಲು-ಆಕ್ಷೇಪಗಳು, 4 ಗಂಟೆಗೆ ವರ್ತಮಾನದಲ್ಲಿ ಮಹಿಳೆ ಗೋಷ್ಠಿ, ಸಂಜೆ 6.30 ಗಂಟೆಗೆ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.
ಮಾ.30ರಂದು ಬೆಳಗ್ಗೆ 10 ಗಂಟೆಗೆ ಜಾನಪದ ಪ್ರಕಾರಗಳ ಪ್ರದರ್ಶನ, ನಂತರ ಕನ್ನಡ ಚಳುವಳಿ-ಪರಿಣಾಮಗಳು ಗೋಷ್ಠಿ, ಮಧ್ಯಾಹ 2 ಗಂಟೆಗೆ ಕವಿಗೋಷ್ಠಿ, ಸಂಜೆ 4 ಗಂಟೆಗೆ ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ, ಬಹಿರಂಗ ಅಧಿವೇಶನ, ನಂತರ ಸಮಾರೋಪ ಸಮಾರಂಭ ನಡೆಯಲಿದೆ. ಆ ಸಂದರ್ಭದಲ್ಲಿ ಸಾಹಿತ್ಯ ಸಿರಿ ಪ್ರಶಸ್ತಿ ಪ್ರಧಾನ, ಕನ್ನಡ ಸಿರಿ ಪ್ರಶಸ್ತಿ ಪ್ರಧಾನ, ಸಂಘಟನಾ ಚತುರ ಪ್ರಶಸ್ತಿ ಪ್ರಧಾನ ನಡೆಯಲಿದೆ. ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ನೀತಿ ಸಂಹಿತೆ ಜಾರಿಯಾಗಿರುವುದರಿಂದ ಹಾಲಿ ಹಾಗೂ ಮಾಜಿ ಜನಪ್ರತಿನಿಧಿಗಳು ವೇದಿಕೆಯಲ್ಲಿ ಆಸೀನರಾಗುವುದನ್ನು ನಿರ್ಬಂಧಿಸಲಾಗಿದೆ. ಕಳಸದಲ್ಲಿ ನಡೆಸಿದ ಜಿಲ್ಲಾ ಸಮ್ಮೇಳನದ ಲೆಕ್ಕಾಚಾರ ಸಧ್ಯದಲ್ಲೇ ಮನ್ನಣೆ ಮಾಡಲಿದ್ದು, ಈ ಬಾರಿ ನಡೆಯುವ ಜಿಲ್ಲಾ ಸಮ್ಮೇಳನದ ಲೆಕ್ಕಾಚಾರವನ್ನು ಸಮ್ಮೇಳನ ಮುಗಿದ 30 ದಿನದಲ್ಲಿ ಮಂಡನೆ ಮಾಡಲಾಗುವುದು ಎಂದು ಹೇಳಿದರು.
ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಬಿ.ಎಸ್.ಜಯರಾಂ, ಕೋಶಾಧ್ಯಕ್ಷ ಜೆ.ಎಸ್.ರಘು, ಪ್ರಧಾನ ಸಂಚಾಲಕ ಗಣೇಶ್ ಮಗ್ಗಲಮಕ್ಕಿ, ಕಸಾಪ ತಾಲೂಕು ಅಧ್ಯಕ್ಷ ಎಚ್.ಎಂ.ಶಾಂತಕುಮಾರ್, ಡಿ.ಕೆ.ಲಕ್ಷ್ಮಣ್ಗೌಡ, ವಿಶಾಲಾ ನಾಗರಾಜ್, ಬಕ್ಕಿ ಮಂಜು, ಸಚಿನ್, ಹಸೇನಾರ್ ಉಪಸ್ಥಿತರಿದ್ದರು.