ಸಬ್ ರಿಜಿಸ್ಟ್ರಾರ್ ಕಚೇರಿಗೆ ಲೋಕಾಯುಕ್ತ ದಾಳಿ ನಡೆದ ಸಂದರ್ಭದಲ್ಲಿ ಸಬ್ ರಿಜಿಸ್ಟ್ರಾರ್ ಕಛೇರಿಯಿಂದ ನಾಟಕೀಯವಾಗಿ ಎಸ್ಕೇಪ್ ಆದ ಘಟನೆ ನಡೆದಿದೆ. ಕೊಡಗು ಜಿಲ್ಲೆ ಮಡಿಕೇರಿ ಸಬ್ ರಿಜಿಸ್ಟ್ರಾರ್ ಕಛೇರಿಯಲ್ಲಿ ಬುಧವಾರ ಈ ಘಟನೆ ನಡೆದಿದೆ. ಲಂಚ ಸ್ವೀಕಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ದಾಳಿ ನಡೆದ ವೇಳೆ ಮಡಿಕೇರಿ ಸಬ್ ರಿಜಿಸ್ಟ್ರಾರ್ ಸೌಮ್ಯಲತಾ ಎಸ್ಕೇಪ್ ಆಗಿದ್ದರೆ, ಬ್ರೋಕರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ.
ಮಡಿಕೇರಿಯ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ರಿಜಿಸ್ಟ್ರಾರ್ ಆಗಿರುವ ಸೌಮ್ಯಲತಾ ಅವರು ಪೌತಿ ಖಾತೆ ರಿಜಿಸ್ಟ್ರೇಷನ್ಗೆ ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು. ಕೋರಂಗಾಲ ಗ್ರಾಮದ ನಂಗಾರು ಕುಮಾರ್ ಅವರಿಂದ ಪೌತಿ ಖಾತೆ ನೋಂದಣಿ ಮಾಡಿಸಲು 50,000 ರೂ. ಕೇಳಿದ್ದರು.
ಕಳೆದ ಎರಡು ತಿಂಗಳುಗಳಿಂದ ರಿಜಿಸ್ಟ್ರೇಷನ್ ಮಾಡಲು ಸತಾಯಿಸುತ್ತಿದ್ದ ಸೌಮ್ಯಲತಾ ಅವರು ಕೊನೆಗೆ ಬ್ರೋಕರ್ ಮೂಲಕ ಹಣ ಕೇಳಿದ್ದರು. ಅದರಂತೆ ಹಣ ಕೊಡಲು ಕುಮಾರ್ ಒಪ್ಪಿದ್ದರು. ಬುಧವಾರ ಹಣ ಕೊಡಲು ದಿನ ನಿಗದಿಯಾಗಿತ್ತು.
ಇದರಿಂದ ಮನನೊಂದ ಕುಮಾರ್ ಲೋಕಾಯುಕ್ತರಿಗೆ ದೂರು ನೀಡಿದ್ದರು. ಈ ಸಂದರ್ಭದಲ್ಲಿ ಲಂಚ ಪಡೆಯುವ ವೇಳೆ ದಾಳಿ ಮಾಡಲು ಲೋಕಾಯುಕ್ತರು ತಯಾರಿ ನಡೆಸಿದ್ದರು. ಕುಮಾರ್ ಅವರು ಹಣ ಕೊಡಲು ಸಿದ್ಧವಾಗುವ ಹೊತ್ತಿಗೆ ಲೋಕಾಯುಕ್ತರು ಕಛೇರಿಗೆ ದಾಳಿ ನಡೆಸಿದ್ದರು. ಕುಮಾರ್ ಅವರಿಂದ ಬ್ರೋಕರ್ ಹರಿದತ್ತ ಹಣ ಸ್ವೀಕರಿಸುತ್ತಿದ್ದಂತೆಯೇ ಹಿಡಿದುಕೊಂಡರು.
ಈ ನಡುವೆ ಹಣಕ್ಕಾಗಿ ಬೇಡಿಕೆ ಇಟ್ಟಿದ್ದ ಸಬ್ ರಿಜಿಸ್ಟ್ರಾರ್ ಸೌಮ್ಯಲತಾ ಕಛೇರಿಯಿಂದ ತಪ್ಪಿಸಿಕೊಂಡು ಹೋಗಿದ್ದಾರೆ ಎಂದು ತಿಳಿದುಬಂದಿದೆ.
ಲೋಕಾಯುಕ್ತ ಎಸ್ಪಿ ಸುಜಿತ್ ಅವರ ನಿರ್ದೇಶನದಂತೆ ಲೋಕಾಯುಕ್ತ ಇನ್ಸ್ಪೆಕ್ಟರ್ ಲೋಕೇಶ್ ಮತ್ತು ಇನ್ಸ್ಪೆಕ್ಟರ್ ರೂಪಶ್ರೀ ನೇತೃತ್ವದಲ್ಲಿ ನಡೆದ ದಾಳಿಐಲ್ಲಿ ಏಜೆಂಟ್ ಹರಿದತ್ತ ಸಿಕ್ಕಿಬಿದ್ದಿದ್ದಾನೆ. ಇದೀಗ ಸೌಮ್ಯಲತಾ ಅವರಿಗೂ ನೋಟಿಸ್ ನೀಡಲಾಗಿದ್ದು, ತನಿಖೆಗೆ ಹಾಜರಾಗುವಂತೆ ಸೂಚಿಸಲಾಗಿದೆ.