ಹುಲಿ ದಾಳಿಯಿಂದ ಐದು ಹಸುಗಳು ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ. ಚಿಕ್ಕಮಗಳೂರು ತಾಲೂಕಿನ ಕಠಾರದಹಳ್ಳಿಯಲ್ಲಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕಠಾರದಹಳ್ಳಿ ಗ್ರಾಮದ ಚಂದ್ರು-ಮುಳ್ಳಪ್ಪ ಎಂಬುವರಿಗೆ ಸೇರಿದ ಹಸುಗಳು ಹುಲಿ ದಾಳಿಗೆ ಬಲಿಯಾಗಿವೆ.
ಮಂಗಳವಾರ ಮೇಯಲು ಹೋಗಿದ್ದ ಹಸುಗಳು ಮನೆಗೆ ಬಂದಿರಲಿಲ್ಲ, ಇಂದು ಕಾಫಿ ತೋಟದಲ್ಲಿ ಐದು ಹಸುಗಳ ಮೃತದೇಹ ಪತ್ತೆಯಾಗಿವೆ. ಒಂದು ಹಸು ಹುಲಿದಾಳಿಯಿಂದ ತೀವ್ರ ನಿರ್ತಾಣಗೊಂಡಿದ್ದು ಪಶುವೈದ್ಯರಿಂದ ಚಿಕಿತ್ಸೆ ನೀಡಲಾಗುತ್ತಿದೆ.
ಚಿಕ್ಕಮಗಳೂರು ತಾಲ್ಲೂಕಿನ ಆಲ್ದೂರು ಸಮೀಪದ ಕಠಾರದಹಳ್ಳಿಯಲ್ಲಿ ನಡೆದಿರುವ ಈ ಘಟನೆಯಿಂದ ಜನ ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಈ ಭಾಗದ ಕಂಚಿನಕಲ್ಲು ದುರ್ಗ ಅರಣ್ಯ ಪ್ರದೇಶದಲ್ಲಿ ಮೊದಲಿನಿಂದಲೂ ಹುಲಿಗಳು ಇರುವ ಬಗ್ಗೆ ಮಾಹಿತಿ ಇದೆ. ಆದರೆ ಈಗ ಹುಲಿಗಳು ಕಾಫಿ ತೋಟದ ಒಳಗೇ ಬಂದು ಹಸುಗಳನ್ನು ಕೊಂದಿರುವುದು ಜನರ ಆತಂಕವನ್ನು ಇನ್ನಷ್ಟು ಹೆಚ್ಚಿಸಿದೆ.
ತೋಟದ ಕೆಲಸಕ್ಕೆ ಕಾರ್ಮಿಕರು ಬರಲು ಹಿಂದೇಟು ಹಾಕುವ ಸಾಧ್ಯತೆ ಇದೆ. ಈ ಭಾಗದ ಜನರು ಎಚ್ಚರಿಕೆಯಿಂದ ಇರುವಂತೆ ಅರಣ್ಯ ಇಲಾಖೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.