ಬೈಕ್ಗೆ ಟಿಪ್ಪರ್ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೇಲೂರು ಮೂಡಿಗೆರೆ ರಸ್ತೆಯ ನಾಗೇನಹಳ್ಳಿ ಗ್ರಾಮದ ಬಳಿ ಸೋಮವಾರ ಬೆಳಿಗ್ಗೆ ಈ ಅಪಘಾತ ನಡೆದಿದೆ. ಮೂಡಿಗೆರೆ ತಾಲ್ಲೂಕು ಗೋಣಿಬೀಡು ಹೋಬಳಿ ಹಂತೂರು ಗ್ರಾಮದ ಶರತ್ (26) ಮೃತ ದುರ್ದೈವಿ.
ಟಿಪ್ಪರ್ ಲಾರಿ ಚಾಲಕನ ಅಜಗಾರೂಕತೆಯ ಚಾಲನೆಯಿಂದ ಈ ಅಪಘಾತ ನಡೆದಿದೆ ಎನ್ನಲಾಗಿದೆ. ತಿರುವಿನಲ್ಲಿ ವೇಗವಾಗಿ ಬಂದು ಬೈಕ್ಗೆ ಟಿಪ್ಪರ್ ಲಾರಿ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ರಸ್ತೆ ಬದಿಗೆ ಹಾರಿ ಬಿದ್ದ ಶರತ್ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ.
ಹಂತೂರು ದಿವಂಗತ ಷಣ್ಮುಖಾಚಾರ್ ಅವರ ಪುತ್ರ ಶರತ್ ಸಕಲೇಶಪುರ ತಾಲ್ಲೂಕಿನ ದೇವಲಕೆರೆ ಸಮೀಪದ ಹೋಂ ಸ್ಟೇ ಒಂದರಲ್ಲಿ ಅಡುಗೆ ಕೆಲಸ ಮಾಡಿಕೊಂಡಿದ್ದರು ಎನ್ನಲಾಗಿದೆ. ಅವರ ಸಹೋದರಿಯನ್ನು ಬೇಲೂರು ತಾಲ್ಲೂಕಿನ ಕಿತ್ತಾವರಕ್ಕೆ ವಿವಾಹಮಾಡಿ ಕೊಟ್ಟಿದ್ದು, ಅವರು ನಿನ್ನೆ ಬೆಳಿಗ್ಗೆ ದೇವಲಕೆರೆಯಿಂದ ಕಿತ್ತಾವರಕ್ಕೆ ತನ್ನ ಬೈಕಿನಲ್ಲಿ ಹೋಗುತ್ತಿದ್ದರು ಎಂದು ತಿಳಿದುಬಂದಿದೆ. ನಾಗೇನಹಳ್ಳಿ ಸಮೀಪ ತಿರುವಿನಲ್ಲಿ ಟಿಪ್ಪರ್ ಲಾರಿ ಬೈಕಿಗೆ ಡಿಕ್ಕಿ ಹೊಡೆದು ತೀವ್ರ ಗಾಯಗೊಂಡ ಶರತ್ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ.
ಶರತ್ ತಂದೆ ತಾಯಿ ಇಬ್ಬರು ಇಲ್ಲ ಅವರು ತನ್ನ ಸಹೋದರಿಯ ಮನೆಯಲ್ಲಿಯೇ ಆಶ್ರಯ ಪಡೆದುಕೊಂಡು ಹೋಂ ಸ್ಟೇ ನಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.
ಅರೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಿಸಲಾಗಿದೆ.