ಮೂಡಿಗೆರೆ ತಾಲ್ಲೂಕಿನ ಪ್ರಸಿದ್ಧ ಪ್ರವಾಸಿ ತಾಣ ದೇವರಮನೆಯಲ್ಲಿ ದೈತ್ಯ ಗಾತ್ರದ ಕಾಡಾನೆಯೊಂದು ಬೀಡುಬಿಟ್ಟಿದ್ದು, ಇಂದು ಸಂಜೆ ದೇವರಮನೆಗೆ ಬೈಕ್ ನಲ್ಲಿ ಬಂದಿದ್ದ ಯುವಕ ಯುವತಿ ಕೂದಲೆಳೆ ಅಂತರದಲ್ಲಿ ಕಾಡಾನೆಯಿಂದ ಪಾರಾಗಿದ್ದಾರೆ.
ಇಂದು ಸಂಜೆ ಸುಮಾರು 5-30ರ ಸಮಯದಲ್ಲಿ ಕಾಡಾನೆ ರಸ್ತೆಗೆ ಅಡ್ಡ ಬಂದಿದ್ದು ಆ ಸಮಯದಲ್ಲಿ ಬೈಕ್ ನಲ್ಲಿ ಸಂಚಾರಿಸುತ್ತಿದ್ದ ಯುವಕ ಯುವತಿ ಕಾಡಾನೆಯನ್ನು ಕಂಡು ಬೈಕ್ ಬಿಟ್ಟು ಓಡಿದ್ದಾರೆ. ಕಾಡಾನೆ ಬೈಕ್ ಅನ್ನು ಎತ್ತಿ ರಸ್ತೆಯ ಆಚೆಗೆ ಎಸೆದು ಪುಡಿಗಟ್ಟಿದೆ.
ಈ ಸುದ್ದಿ ಸಂಜೆ ವೇಳೆಗೆ ಸ್ಥಳೀಯವಾಗಿ ವೈರಲ್ ಆಗಿತ್ತು. ಬೈಕ್ ಸವಾರರು ಎತ್ತ ಹೋದರು ಎಂಬ ಮಾಹಿತಿ ಸಿಕ್ಕಿರಲಿಲ್ಲಿ. ಹಾಗಾಗಿ ಬೈಕ್ ಸವಾರನನ್ನು ಕಾಡಾನೆ ಹೊತ್ತೊಯ್ದಿದೆ ಎಂದು ಸುದ್ದಿ ಹಬ್ಬಿತ್ತು. ಈ ಬಗ್ಗೆ ಅರಣ್ಯ ಇಲಾಖೆಯವರು ತಲಾಶ್ ನಡೆಸಿದ್ದರು. ನಂತರ ಬೈಕ್ ಬಿಟ್ಟು ಓಡಿಹೋಗಿದ್ದ ಓರ್ವ ಯುವಕ ಮತ್ತು ಯುವತಿ ದೇವರಮನೆ ಸಮೀಪದ ಕಂಬಳಗದ್ದೆ ಗ್ರಾಮ ತಲುಪಿ ಅಲ್ಲಿನ ಮನೆಯೊಂದರಲ್ಲಿ ಆಶ್ರಯ ಪಡೆದಿದ್ದರು ಎಂದು ತಿಳಿದುಬಂದಿದೆ. ಇದೀಗ ಅರಣ್ಯ ಇಲಾಖೆ ಸಿಬ್ಬಂದಿಗಳು ಆತಂಕಗೊಂಡಿದ್ದ ಬೈಕ್ ಸವಾರರನ್ನು ಸುರಕ್ಷಿತವಾಗಿ ಕರೆತಂದಿದ್ದಾರೆ ಎಂದು ತಿಳಿದುಬಂದಿದೆ.
ಕಳೆದ ಒಂದು ವಾರದಿಂದ ದೇವರಮನೆ ದೇವಸ್ಥಾನದ ಸಮೀಪವೇ ಈ ಆನೆ ಬೀಡುಬಿಟ್ಟಿದ್ದು, ಸಂಜೆಯಾಗುತ್ತಿದ್ದಂತೆ ರಸ್ತೆಗೆ ಬರುತ್ತಿದೆ. ಹಲವು ಜನರು ಈ ಆನೆಯನ್ನು ಕಂಡು ಆತಂಕಗೊಂಡಿದ್ದಾರೆ.
ಭಾನುವಾರ ಪ್ರವಾಸಿಗರ ಕಾರೊಂದಕ್ಕೆ ಈ ಆನೆ ರಸ್ತೆಪಕ್ಕದಲ್ಲೇ ಸಿಕ್ಕಿದ್ದು, ಪ್ರವಾಸಿಗರು ಕೆಲವು ಸೆಕೆಂಡ್ ಗಳ ವಿಡಿಯೋ ಒಂದನ್ನು ಸಹ ಮಾಡಿದ್ದಾರೆ.
ದೇವರಮನೆಗೆ ದೊಡ್ಡ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿದ್ದು, ಕಾಡಾನೆ ಇರುವ ಬಗ್ಗೆ ಅರಿವಿಲ್ಲದೇ ಅಪಾಯಕ್ಕೆ ಸಿಲುಕುತ್ತಿದ್ದಾರೆ.
ಈ ಕಾಡಾನೆ ಗಾತ್ರದಲ್ಲಿ ದೊಡ್ಡದಾಗಿದ್ದು, ಇತ್ತೀಚೆಗೆ ಚಾರ್ಮಾಡಿ ಘಾಟ್ ನಲ್ಲಿ ಓಡಾಡುತ್ತಿದ್ದ ಆನೆ ಇದೇ ಇರಬಹುದೇ ಎಂಬ ಶಂಕೆ ವ್ಯಕ್ತವಾಗಿದೆ. ಅರಣ್ಯ ಸಿಬ್ಬಂದಿಯೊಬ್ಬರು ಹೇಳುವಂತೆ ಇದು ಈ ಭಾಗದಲ್ಲಿ ಕಾಣಿಸಿಕೊಂಡ ಕಾಡಾನೆಗಳಲ್ಲಿಯೇ ಅತ್ಯಂತ ದೊಡ್ಡ ಗಾತ್ರದ್ದು ಎಂದಿದ್ದಾರೆ.
ಈ ಆನೆಯನ್ನು ಇಲ್ಲಿಂದ ಓಡಿಸಬೇಕು ಇಲ್ಲವೇ ಈಗಾಗಲೇ ಆನೆ ಹಿಡಿಯಲು ಇರುವ ಆದೇಶದ ಅಡಿಯಲ್ಲಿ ಈ ಕಾಡಾನೆಯನ್ನು ಹಿಡಿದು ಬೇರೆಡೆಗೆ ಸಾಗಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.