ಬಿಜೆಪಿಯಲ್ಲಿ ತಾಲೂಕು ಮಟ್ಟದ ಉನ್ನತ ಸ್ಥಾನ ಪಡೆದಿದ್ದ ಗುತ್ತಿಗೆದಾರನೋರ್ವನ ಮಾತು ಕೇಳಿ ನಮ್ಮನ್ನು ನೋಟಿಸ್ ನೀಡದೆ ಪಕ್ಷದಿಂದ ಅಮಾನತುಗೊಳಿಸಲಾಗಿದೆ. ಪಕ್ಷಕ್ಕಾಗಿ 25 ವರ್ಷ ಹಗಲಿರಲು ದುಡಿದಿದ್ದಕ್ಕೆ ನಮಗೆ ಈ ಬೆಲೆ ನೀಡಿದ್ದಾರೆ. ಪಕ್ಷದಲ್ಲಿ ನನಗಿಂತ ಕಿರಿಯ ವ್ಯಕ್ತಿಯ ಮಾತು ಕೇಳಿ ಈ ನಿರ್ಧಾರ ಕೈಗೊಂಡಿರುವುದು ಸರಿಯಲ್ಲ ಎಂದು ಮೂಡಿಗೆರೆ ಪಟ್ಟಣ ಪಂಚಾಯಿತಿ ಸದಸ್ಯ ಪಿ.ಜಿ.ಅನುಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.
ಮೂಡಿಗೆರೆ ಪಟ್ಟಣದ ಪ್ರೀತಮ್ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ನಡೆದ ಬಿಜೆಪಿ ಸ್ವಾಭಿಮಾನಿ ಪರಿವಾರದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿ, ಕೆಲ ದಿನದ ಹಿಂದೆ ಬಿಜೆಪಿಯ ಜಿಲ್ಲಾಧ್ಯಕ್ಷ ದೇವರಾಜ್ ಶೆಟ್ಟಿ ನಮ್ಮ ಗುಂಪಿನ ಹಿರಿಯ ನಾಯಕರನ್ನು ಸಂಪರ್ಕಿಸಿ ಇಬ್ಬರ ಅಮಾನತ್ತು ರದ್ದುಪಡಿಸಿ ಮತ್ತೆ ಅವರನ್ನು ಪಕ್ಷಕ್ಕೆ ಸೇರಿಸಿ ನೂತನ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮ ನಡೆಸುತ್ತೇವೆ ಎಂದು ಹೇಳಿದ್ದರು. ಈಗ ಅವರು ಮಾತು ತಪ್ಪಿದ್ದಾರೆ. ಏಕಾಏಕಿ ನಮ್ಮನ್ನು ಕೈ ಬಿಟ್ಟು ಶುಕ್ರವಾರ ಪದಗ್ರಹಣ ಕಾರ್ಯಕ್ರಮ ಆಯೋಜಿಸಿದ್ದಾರೆ. ಇದರಿಂದಾಗಿ ನಾವು ಪ್ರತ್ಯೇಕ ಸಮಾವೇಶ ನಡೆಸಬೇಕಾಯಿತು. ಈ ಚುನಾವಣೆಯಲ್ಲಿ ನಾವು ಪ್ರಧಾನಿ ನರೇಂದ್ರ ಮೋದಿ ಅವರ ಪರವಾಗಿ ಬಿಜೆಪಿಗೆ ಪ್ರಚಾರ ನಡೆಸುತ್ತೇವೆ. ಮುಂದಿನ ಜಿ, ತಾಪಂ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಪ್ರತ್ಯೇಕವಾಗಿ ಚುನಾವಣೆಗೆ ಸ್ಪರ್ಧಿಸುತ್ತೇವೆ ನಾವು ಕೂಡ ತಾಲೂಕು, ಹೋಬಳಿ, ಬೂತ್ ಘಟಕ ಸ್ಥಾಪಿಸಿ ಪದಾಧಿಕಾರಿಗಳನ್ನು ನೇಮಿಸುತ್ತೇವೆ ಎಂದು ತಿಳಿಸಿದರು.
ಅತಿವೃಷ್ಟಿ ವೇಳೆ ಬಿಜೆಪಿ ಮುಖಂಡ ಗುತ್ತಿಗೆದಾರನೋರ್ವ ಅಂದಿನ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರ ಬಳಿ ಎರಡು ಕೋಟಿ ರೂಪಾಯಿಯ ಕಾಮಗಾರಿ ನಡೆಸಿದ್ದೇನೆ 2 ಕೋಟಿ ಹಣ ನೀಡಬೇಕು ಎಂದು ಕೇಳಿದಾಗ ಶಾಸಕರು ಒಪ್ಪಿರಲಿಲ್ಲ. ಕಾಮಗಾರಿ ನಡೆದ ಬಗ್ಗೆ ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ತನಿಖೆಯಲ್ಲಿ 15 ಲಕ್ಷದಷ್ಟು ಕೆಲಸ ಮಾಡಲಾಗಿದೆ ಎಂದು ಕಂಡು ಬಂದಿತ್ತು. ಇದರಿಂದ ಕೋಪಗೊಂಡಿದ್ದ ವ್ಯಕ್ತಿ ಕುಮಾರಸ್ವಾಮಿ ಅವರ ವಿರುದ್ಧ ಕೆಂಡಕಾರಿ ಬಿ.ಎಸ್.ಯಡಿಯೂರಪ್ಪ ಅವರು ಚುನಾವಣೆಗೂ ಮುನ್ನ ಭೇಟಿ ನೀಡಿದಾಗ ಸಂಘರ್ಷ ನಡೆಸಿದ್ದರು. ಕುಮಾರಸ್ವಾಮಿ ಅವರು ಶಾಸಕರಾಗಿದ್ದಾಗ ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ಕುಸಿದಿತ್ತು. 94/ಸಿ ಅರ್ಜಿ ವಿಲೇಗೆ ಡಿಮ್ಯಾಂಡ್ ಮಾಡುತ್ತಿದ್ದರು. ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಗಳೇ ಇರಲಿಲ್ಲ ರೋಗಿಗಳು ಚಿಕಿತ್ಸೆಗಾಗಿ ಪರದಾಡುತ್ತಿದ್ದರು. ಜನರಿಗೆ ಮೂಲಭೂತ ಸೌಕರ್ಯವನ್ನು ಒದಗಿಸಿರಲಿಲ್ಲ. ಇದರಿಂದ ನಾವು ಕೂಡ ಕುಮಾರಸ್ವಾಮಿಯವರಿಗೆ ಚುನಾವಣೆಯಲ್ಲಿ ಟಿಕೆಟ್ ನೀಡಬೇಡಿ ಎಂದು ಒತ್ತಾಯಿಸಿದ್ದೆವು ಎಂದು ತಿಳಿಸಿದರು.
ಸಮಾವೇಶದಲ್ಲಿ ಕನ್ನೆಹಳ್ಳಿ ಭರತ್, ಪ್ರಪಂ ಸದಸ್ಯರಾದ ಮನೋಜ್, ಸುಧೀರ್, ಕುಂದೂರು ಗ್ರಾಪಂ ಅಧ್ಯಕ್ಷ ವಿಜಯೇಂದ್ರ, ಮುಖಂಡರಾದ ವಿ.ಕೆ.ಶಿವೇಗೌಡ, ದೇವರಾಜ್, ಸಂಜಯ್, ಉತ್ತಮ್ ಕುಮಾರ್, ಮುಗೃಹಳ್ಳಿ ಪ್ರಸನ್ನ, ರಘುಪತಿ, ಹೆಮ್ಮಕ್ಕಿ ಗಿರೀಶ್, ರವೀಂದ್ರ, ನೇಮರಾಜ್ ಇತರರಿದ್ದರು,
ಡಿ.15 ಎಂಡಿಜಿ 3ಪಿ1 ಮೂಡಿಗೆರೆ ಪಟ್ಟಣದಲ್ಲಿ ಬಿಜೆಪಿ ಸ್ವಾಭಿಮಾನಿ ಪರಿವಾರ ಕಾರ್ಯಕರ್ತರ ಸಮಾವೇಶದಲ್ಲಿ ಪಪಂ ಸದಸ್ಯ ಪಿ.ಜಿ.ಅನುಕುಮಾರ್ ಮಾತನಾಡಿದರು. ಕನ್ನೆಹಳ್ಳಿ ಭರತ್, ಮನೋಜ್, ಸುಧೀರ್, ವಿಜಯೇಂದ್ರ, ಹೆಮ್ಮಕ್ಕಿ ಗಿರೀಶ್, ವಿ.ಕೆ.ಶಿವೇಗೌಡ, ಬಾಳೂರು ಭರತ್ ಇತರರಿದ್ದರು.
ಆರಂಭದಲ್ಲಿ ಪಟ್ಟಣದಲ್ಲಿ ಮೆರವಣಿಗೆ ನಡೆಸಲಾಯಿತು.