ನಮ್ಮ ಊರು ನಮ್ಮ ಕೆರೆಯ ಯೋಜನೆ ಅಡಿ ಮೂಡಿಗೆರೆ ತಾಲೂಕು ಗೋಣಿಬೀಡು ಹೋಬಳಿ ದಿಣ್ಣೆಕೆರೆ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಪುನ ನಿರ್ಮಾಣಗೊಂಡಂತ ಕೆರೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮೋತ್ತಾನ ಟ್ರಸ್ಟಿನ ಟ್ರಸ್ಟಿ ಯಾದ ಪ್ರಶಾಂತ್ ಚಿಪ್ರಗುತ್ತಿಯವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಅವರು ಮಾತನಾಡಿ ಇಂದು ನೀರು ಅಮೃತದಂತೆ ಆಗಿದೆ ಎಲ್ಲೆಲ್ಲೂ ಬರಗಾಲ ತಾಂಡವಾಡುತ್ತಿದೆ, ಕೆಲವು ಭಾಗದಲ್ಲಿ ದುಡ್ಡು ಕೊಟ್ಟರೆ ಒಂದು ಕೆಜಿ ಚಿನ್ನ ಸಿಗುತ್ತದೆ ಆದರೆ ಒಂದು ಬಿಂದಿಗೆ ನೀರು ಸಿಗದ ಪರಿಸ್ಥಿತಿ ನಿರ್ಮಾಣ ಆಗಿದೆ. ಭೂಮಿಯಲ್ಲಿ ನೀರಿನ ಜಲ ಮಟ್ಟ ಕುಸಿದಿದೆ. ಇಂಥ ಸಂದರ್ಭದಲ್ಲಿ ಪರಮಪೂಜ್ಯನೀಯ ಡಾ. ಡಿ.ವೀರೇಂದ್ರ ಹೆಗ್ಗಡೆ ರವರು ಕೆರೆಯ ಹೂಳೆತ್ತುವ ಕೆಲಸ ಮಾಡುವ ಮುಖಾಂತರ ನಮ್ಮ ಕರ್ನಾಟಕದ ಜನತೆಗೆ ನೀರಿನ ರೂಪದಲ್ಲಿ ಅಮೃತವೇ ನೀಡುತ್ತಿದ್ದಾರೆ. ನಾವು ಮುಂದಿನ ದಿನಗಳಲ್ಲಿ ನಮ್ಮ ಜಲ ನೆಲದ ಸಂಪತ್ತನ್ನು ಕಾಪಾಡಿಕೊಳ್ಳದೆ ಹೋದರೆ ಮುಂದಿನ ಪೀಳಿಗೆಗೆ ನಾವು ಏನು ಕೊಡುಗೆಯನ್ನು ಕೊಡದಂತೆ ಆಗುತ್ತದೆ ಹಾಗೂ ಮುಂದಿನ ದಿನಗಳಲ್ಲಿ ದೊಡ್ಡ ಆಪತ್ತು ಕಾದಿದೆ. ಸರಕಾರ ಮುಂದಿನ ದಿನಗಳಲ್ಲಿ 10 ಎಕರೆ ಮೇಲೆ ಇರುವಂತ ಪ್ರತಿ ರೈತರ ಭೂಮಿಯಲ್ಲಿ ನಿರ್ದಿಷ್ಟ ಪ್ರಮಾಣದ ಕೆರೆಯನ್ನು ಕಡ್ಡಾಯವಾಗಿ ಮಾಡಬೇಕಾಗಿ ಕಾನೂನು ಮಾಡಿದರೆ ಉತ್ತಮವಾಗಿರುತ್ತದೆ. ಅಂತ ಕಾರ್ಯಗಳಿಗೆ ಸರ್ಕಾರ ಹೆಚ್ಚಿನ ಪ್ರೋತ್ಸಾಹ ಧನವನ್ನು ನೀಡಬೇಕೆಂದು ಆಗ್ರಪಡಿಸಿದರು.
ಗ್ರಾಮ ಅಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕರಾದ ಗೀತಾ ರವರು ಕೆರೆಯನ್ನು ಹಸ್ತಾಂತರ ಮಾಡಿ ಇನ್ನಷ್ಟು ಮೂಡಿಗೆರೆ ತಾಲೂಕಿನಲ್ಲಿ ಕೆರೆಯ ಅಭಿವೃದ್ಧಿ ಆಗಲಿ ನಮ್ಮ ಪ್ರಕೃತಿ ಗಿಡ ಮರ ಪ್ರಾಣಿ ಪಕ್ಷಿ ಮನುಷ್ಯರಿಗೆ ಉಪಯೋಗವಾಗಲಿ ಎಂದು ಹೇಳಿದರು.
ಯೋಜನೆಯ ಜಿಲ್ಲಾ ನಿರ್ದೇಶಕರಾದ ಪ್ರಕಾಶ್ ರವರು ಮಾತನಾಡಿ ಕೆರೆಗಳಲ್ಲಿ ನೀರು ಬ್ಯಾಂಕಲ್ಲಿ ಇಟ್ಟಂತ ಡೆಪಾಸಿಟಿನ ಹಣ ಇದ್ದ ಹಾಗೆ ಬೇಕಾದಾಗ ಉಪಯೋಗಕ್ಕೆ ಬರುತ್ತದೆ ಎಂದರು.
ತಾಲೂಕು ಯೋಜನಾಧಿಕಾರಿ ಶಿವಾನಂದ್ ಗ್ರಾಮ ಪಂಚಾಯತಿ ಅಧ್ಯಕ್ಷರಾದ ದಿನೇಶ್, ಗ್ರಾಮ ಪಂಚಾಯಿತಿ ಸದಸ್ಯರಾದ ದೀಪಕ್, ಸುಧಾರಾಣಿ, ರಘು, ಕೆರೆ ಸಮಿತಿ ಅಧ್ಯಕ್ಷರಾದ ಕಿರಣ್, ಪಿ.ಡಿ.ಓ. ಸಿಂಚನ, ಪತ್ರಕರ್ತರಾದ ಕಿರುಗುಂದ ಅಬ್ಬಾಸ್ ಮುಂತಾದವರು ಇದ್ದರು.