ಗುಣಮಟ್ಟದ ವಿದ್ಯುತ್ ನೀಡಬೇಕೆಂದು ಒತ್ತಾಯಿಸಿ ವಿವಿಧ ಸಂಘಟನೆ ಮುಖಂಡರು ಶುಕ್ರವಾರ ಪಟ್ಟಣದ ಮೆಸ್ಕಾಂ ಕಚೇರಿ ಎದುರು ಬದನೇಕಾಯಿ ಹಾರ ತೋರಿಸುವ ಮೂಲಕ ಪ್ರತಿಭಟನೆ ನಡೆಸಿದರು.
ರೈತ ಮುಖಂಡ ಮಂಜುನಾಥ್ಗೌಡ ಮಾತನಾಡಿ, ತಾಲೂಕಿನಲ್ಲಿ ಅನಿಯಮಿತ ವಿದ್ಯುತ್ ಕಡಿತಗೊಳ್ಳುವ ಜತೆಗೆ ಗುಣಮಟ್ಟದ ವಿದ್ಯುತ್ ಪೂರೈಕೆಯಾಗುತ್ತಿಲ್ಲ. ಸರಕಾರದ ನಿಯಮದ ಪ್ರಕಾರ ವಿದ್ಯುತ್ ಬಳಕೆದಾರರ ಹಕ್ಕು ಆಗಿದೆ. ವಿದ್ಯುತ್ ಸರಬರಾಜು ಮಾಡುವವರು ಸಾರ್ವಜನಿಕರಿಗೆ ಸರಕಾರಣ ಕೊಡದೇ ಹಾಗೂ ಜನರ ಒಪ್ಪಿಗೆ ಪಡೆಯದೇ ಲೋಡ್ ಶೆಡ್ಡಿಂಗ್ ಮಾಡುವಂತಿಲ್ಲ. ಅನಗತ್ಯವಾಗಿ ಲೋಡ್ ಶೆಡ್ಡಿಂಗ್ ಮಾಡಿದರೆ ಬಳಕೆದಾರರಿಗೆ ಪರಿಹಾರ ನೀಡಬೇಕು. ಈ ಯಾವುದೇ ನಿಯಮ ಪಾಲನೆ ಮಾಡದೇ ಲೋಡ್ ಶೆಡ್ಡಿಂಗ್ ಮಾಡಲಾಗುತ್ತಿದೆ. ಹಾಗಾಗಿ ಗ್ರಾಹಕರಿಗೆ ಪರಿಹಾರ ನೀಡಬೇಕು. ವಿದ್ಯುತ್ ಸಮಸ್ಯೆ ಶಾಶ್ವತವಾಗಿ ಪರಿಹಾರ ಕಲ್ಪಿಸಬೇಕೆಂದು ಒತ್ತಾಯಿಸಿದರು.
ನೀರಾವರಿ ವಿದ್ಯುತ್ ಬಳಕೆದಾರ ವೇದಿಕೆ ಅಧ್ಯಕ್ಷ ಭರತ್ ಮಡ್ಡಿಕೆರೆ ಮಾತನಾಡಿ, ಇಲ್ಲಿನ ಮೆಸ್ಕಾಂ ಇಲಾಖೆ ಪುಸ್ತಕದ ಬದನೆಕಾಯಿಯಾಗಿದೆ. ಪುಸ್ತಕದಲ್ಲಿರುವ ಮಾಹಿತಿ ನೀಡುವುದನ್ನು ಬಿಟ್ಟರೆ ರೈತರ, ಜನರ ಸಂಕಷ್ಟ ಅರಿತಿಲ್ಲ. ಮೆಸ್ಕಾಂ ಇಲಾಖೆ ನೀರಿಲ್ಲದ ಖಾಲಿ ಕೊಡದಂತಾಗಿದೆ. ನಾವು ಕೊಡುವ ಹಣಕ್ಕೆ ಖಾಲಿ ಕೊಡದಿಂದ ನೀರು ಕೊಡಲು ಹೇಗೆ ಸಾಧ್ಯ? ಬೇರೆ ತಾಲೂಕು ಹೋಲಿಸಿದರೆ ಮೂಡಿಗೆರೆ ತಾಲೂಕಿನಲ್ಲಿ ಮಾತ್ರ ಪ್ರತಿನಿತ್ಯ ಲೋಡ್ ಶೆಡ್ಡಿಂಗ್ ಆಗುತ್ತಲೇ ಇರುತ್ತದೆ. ಕೃಷಿ ಚಟುವಟಿಕೆಗೆ ವಿದ್ಯುತ್ ಇಲ್ಲದೇ ನಷ್ಟ ಅನುಭವಿಸುತ್ತಿದ್ದೇವೆ. ಗುಣಮಟ್ಟದ ವಿದ್ಯುತ್ ಸಿಗದೇ ಮೋಟಾರು ಹಾಳಾಗುತ್ತಿದ್ದು, ಅದನ್ನು ಇನ್ನು ಮುಂದೆ ಮೆಸ್ಕಾಂ ಅಧಿಕಾರಿಗಳೇ ಸರಿಪಡಿಸಿಕೊಡಬೇಕು. ಇಲ್ಲಿನ ವಿದ್ಯುತ್ ಸಮಸ್ಯೆ ಬಗ್ಗೆ ಮೇಲಾಧಿಕಾರಿಗಳಿಗೆ ವರದಿ ನೀಡಿ ಸರಿಪಡಿಸಬೇಕೆಂದು ಒತ್ತಾಯಿಸಿದರು.
ರೈತ ಸಂಘದ ತಾಲೂಕು ಅಧ್ಯಕ್ಷ ಪುಟ್ಟಸ್ವಾಮಿ ಗೌಡ ರಾಜ್ಯ ಉಪಾಧ್ಯಕ್ಷೆ ವನಶ್ರೀ, ಡಿ.ಎಸ್.ರಮೇಶ್, ಗೌಸ್ಮೋಹಿದ್ದೀನ್, ಮೀನಾಕ್ಷಮ್ಮ, ಚಂದ್ರೇಗೌಡ, ನಾಗೇಶ್ಗೌಡ, ವೇಣು, ಹೊನ್ನೆಕೊಲ್, ಶರತ್ ಜಿ.ಎಂ., ಸುರಕ್ಷಿತ್, ಶೋಬಿತ್, ಮಂಜುನಾಥ್ ಮತ್ತಿತರರಿದ್ದರು.