ಲೋಕಸಭಾ ಚುನಾವಣೆಗೆ ಬಿ.ಜೆ.ಪಿ. ತನ್ನ ಎರಡನೇ ಪಟ್ಟಿ ಬಿಡುಗಡೆ ಮಾಡಿದೆ. ಇದರಲ್ಲಿ ರಾಜ್ಯದ 20 ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ.
ಇದರಲ್ಲಿ ಮೈಸೂರಿಗೆ ಮಹಾರಾಜ ಯದುವೀರ್ ಕೃಷ್ಣದತ್ತ ಒಡೆಯರ್ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಿದರೆ, ಶೋಭಾ ಕರಂದ್ಲಾಜೆ ಅವರಿಗೆ ಬೆಂಗಳೂರು ಉತ್ತರಕ್ಕೆ ಟಿಕೆಟ್ ಕೊಡಲಾಗಿದೆ. ಅಚ್ಚರಿ ಬೆಳವಣಿಗೆಯಲ್ಲಿ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಆಯ್ಕೆ ಮಾಡಲಾಗಿದೆ.
ಕೊಡಗು – ಮೈಸೂರು ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಪ್ರತಾಪ್ ಸಿಂಹ ಅವರನ್ನು ಕೈಬಿಡಲಾಗಿದ್ದು, ಅವರ ಜಾಗಕ್ಕೆ ಯದುವೀರ್ ಒಡೆಯರ್ ಅವರನ್ನು ಆಯ್ಕೆ ಮಾಡಲಾಗಿದೆ. ಅಲ್ಲದೆ, ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಗೋ ಬ್ಯಾಕ್ ಶೋಭಾ ಅಭಿಯಾನ ಆರಂಭವಾಗಿದ್ದರಿಂದ ಅವರನ್ನು ಬೆಂಗಳೂರು ಉತ್ತರಕ್ಕೆ ಶಿಫ್ಟ್ ಮಾಡಲಾಗಿದೆ. ಬೆಂಗಳೂರು ಉತ್ತರದ ಹಾಲಿ ಸಂಸದ ಡಿ.ವಿ. ಸದಾನಂದ ಗೌಡ ಅವರಿಗೆ ಟಿಕೆಟ್ ಮಿಸ್ ಆಗಿದೆ. ಉಡುಪಿ- ಚಿಕ್ಕಮಗಳೂರಲ್ಲಿ ಶೋಭಾ ಕರಂದ್ಲಾಜೆ ಜಾಗಕ್ಕೆ ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಲಾಗಿದೆ.
ಮತ್ತೊಂದು ಅಚ್ಚರಿಯ ಬೆಳವಣಿಗೆಯಲ್ಲಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಹಾಲಿ ಸಂಸದ ಬಿ.ಜೆ.ಪಿ. ಮಾಜಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರಿಗೆ ಕೋಕ್ ನೀಡಿ ಅವರ ಸ್ಥಾನದಲ್ಲಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರಿಗೆ ಟಿಕೆಟ್ ನೀಡಲಾಗಿದೆ. ತುಮಕೂರು ಕ್ಷೇತ್ರದಿಂದ ವಿ.ಸೋಮಣ್ಣ ಅವರಿಗೆ ಟಿಕೆಟ್ ನೀಡಲಾಗಿದೆ. ಬೆಂಗಳೂರು ಗ್ರಾಮಾಂತರದಿಂದ ದೇವೇಗೌಡರ ಅಳಿಯ ಖ್ಯಾತ ಹೃದಯ ತಜ್ಞ ಡಾ. ಮಂಜುನಾಥ್ ಅವರನ್ನು ಕಣಕ್ಕಿಳಿಸಲಾಗಿದೆ.
ಬಿಜೆಪಿಯ 20 ಅಭ್ಯರ್ಥಿಗಳ ಪಟ್ಟಿ
- ಚಿಕ್ಕೋಡಿ : ಅಣ್ಣಾ ಸಾಹೇಬ್ ಜೊಲ್ಲೆ
- ಬಾಗಲಕೋಟೆ : ಪಿ.ಸಿ. ಗದ್ದಿಗೌಡರ್
- ವಿಜಯಪುರ: ರಮೇಶ್ ಜಿಗಜಿಣಗಿ
- ಕಲಬುರಗಿ : ಡಾ. ಉಮೇಶ್ ಜಾಧವ್
- ಬೀದರ್ : ಭಗವಂತ್ ಖೂಬಾ
- ಕೊಪ್ಪಳ : ಡಾ. ಬಸವರಾಜ ಕ್ಯಾವತೂರು
- ಬಳ್ಳಾರಿ : ಬಿ. ಶ್ರೀರಾಮುಲು
- ಹಾವೇರಿ : ಬಸವರಾಜ ಬೊಮ್ಮಾಯಿ
- ಧಾರವಾಡ : ಪ್ರಹ್ಲಾದ್ ಜೋಶಿ
- ದಾವಣಗೆರೆ: ಗಾಯತ್ರಿ ಸಿದ್ದೇಶ್ವರ್
- ಶಿವಮೊಗ್ಗ: ಬಿವೈ ರಾಘವೇಂದ್ರ
- ಉಡುಪಿ ಚಿಕ್ಕಮಗಳೂರು : ಕೋಟ ಶ್ರೀನಿವಾಸ ಪೂಜಾರಿ
- ದಕ್ಷಿಣ ಕನ್ನಡ: ಕ್ಯಾಪ್ಟನ್ ಬ್ರಿಜೇಶ್ ಚೌಟ
- ತುಮಕೂರು: ವಿ ಸೋಮಣ್ಣ
- ಮೈಸೂರು: ಯದುವೀರ್ ಕೃಷ್ಣ ದತ್ತ ಒಡೆಯರ್
- ಚಾಮರಾಜನಗರ: ಎಸ್. ಬಾಲರಾಜ್
- ಬೆಂಗಳೂರು ಗ್ರಾಮಾಂತರ: ಡಾ. ಸಿ.ಎನ್. ಮಂಜುನಾಥ್
- ಬೆಂಗಳೂರು ಉತ್ತರ: ಶೋಭಾ ಕರಂದ್ಲಾಜೆ
- ಬೆಂಗಳೂರು ಸೆಂಟ್ರಲ್: ಪಿ.ಸಿ. ಮೋಹನ್
- ಬೆಂಗಳೂರು ದಕ್ಷಿಣ: ತೇಜಸ್ವಿ ಸೂರ್ಯ