ಶಿವರಾತ್ರಿಯ ಪ್ರಯುಕ್ತ ಮೂಡಿಗೆರೆ ತಾಲ್ಲೂಕಿನ ಬಾಳೂರು ಹೋಬಳಿ ನಿಡುವಾಳೆ ಶ್ರೀ ರಾಮೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ರಾತ್ರಿ ಶೃದ್ಧಾಭಕ್ತಿಯ ಶಿವಾರಾಧನೆ ಹಾಗೂ ಜಾಗರಣೆ ಕಾರ್ಯಕ್ರಮ ನಡೆಯಿತು. ರಾಮೇಶ್ವರ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಸುನಿಲ್ ಜೆ.ಗೌಡ ಶಿವರಾತ್ರಿ ಜಾಗರಣೆಗೆ ದೀಪ ಉರಿಸಿ ಚಾಲನೆ ನೀಡಿದರು. ಅರ್ಚಕ ಚರಣ್ ಕಾರಂತ ನೇತೃತ್ವದಲ್ಲಿ ರಾಮೇಶ್ವರ ಸ್ವಾಮಿಗೆ ವಿಶೇಷ ಪೂಜೆ ಮಹಾಮಂಗಳಾರತಿ ನೆರವೇರಿತು.
ಈ ಸಂದರ್ಭದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಅಕ್ಷರ ಸಂತ, ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಅವರಿಗೆ ದೇವಸ್ಥಾನದ ಆಡಳಿತದಾರ ಸುನಿಲ್ ಜೆ.ಗೌಡ ಶಾಲು ಹೊದಿಸಿ ಸ್ಮರಣಿಕೆ ನೀಡಿ ಸನ್ಮಾನಿಸಿದರು. ಬಳಿಕ ಸ್ಥಳೀಯ ಸಾಧಕರಾದ ಶಿಕ್ಷಕಿ ಸಿಂತಿಯಾ ಪಾಯಸ್, ಸರ್ಕಾರಿ ನಿವೃತ್ತ ನೌಕರ ನಜೀರ್ ಸಾಬ್ ಬಣಕಲ್, ಶಿಕ್ಷಕ ಎ.ಎನ್.ಪ್ರತೀಕ್, ಸಮಾಜ ಸೇವೆಗೆ ಜಿ.ರವಿ, ಶೈಕ್ಷಣಿಕ ಸಾಧನೆಗೆ ಜನಾರ್ಧನ್ ಉರ್ವಿನ್ ಖಾನ್, ಇವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಬಳಿಕ ಪದ್ಮಶ್ರೀ ಪುರಸ್ಕೃತ ಹಾಜಬ್ಬ ಮಾತನಾಡಿ ಓದದೇ ಇಂಗ್ಲೀಷ್ ಭಾಷೆ ಮಾತನಾಡಲು ಕಷ್ಟಪಟ್ಟೆ, ಅಂತಹ ಪರಿಸ್ಥಿತಿ ನಮ್ಮ ಮಕ್ಕಳಿಗೆ ಬರಬಾರದೆಂದು ಕಿತ್ತಲೆ ಮಾರಿ ಕೂಡಿಟ್ಟ ಹಣದಲ್ಲಿ ಜಾಗ ತೆಗೆದು ದಾನಿಗಳ ಸಹಾಯದಿಂದ ಶಾಲೆ ಕಟ್ಟಿಸಿದೆ. ಅಂದು ಶಿಕ್ಷಣ ದೇಗುಲಕ್ಕೆ ನೀಡಿದ ಹಣ ಮಕ್ಕಳ ಕಲಿಕೆಗೆ ಸಾಕ್ಷಿಯಾಯಿತು. ಇಂದು ಆ ಋಣ ನನ್ನನ್ನು ಪದ್ಮಶ್ರೀ ಹಾಗೂ ಹಲವು ಪ್ರಶಸ್ತಿ ಸನ್ಮಾನಗಳು ನನ್ನನ್ನು ಹುಡುಕಿಕೊಂಡು ಬಂದವು. ನನ್ನನ್ನು ಸನ್ಮಾನಿಸುತ್ತಿರುವ ನಿಡುವಾಳೆ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಇಲ್ಲಿಯ ಜನರಿಗೆ ಈ ಮಣ್ಣಿಗೆ ನಾನು ಋಣಿಯಾಗಿದ್ದೇನೆ ಎಂದರು.
ಸಾಧಕ ಜನಾರ್ದನ ಉರ್ವಿನ್ ಖಾನ್ ಮಾತನಾಡಿ ನನ್ನ ಶಿಕ್ಷಣದ ಸಾಧನೆ ನನ್ನ ಪೋಷಕರು ಮಾಡಿದ ತ್ಯಾಗದಿಂದ ನನಗೆ ಗೌರವ ಸಂದಿದೆ. ಆ ಪ್ರಶಸ್ತಿ ನನ್ನ ತಾಯಿಗೆ ಸಲ್ಲತಕ್ಕದ್ದು ಎಂದರು.
ಸುನಿಲ್ ಜೆ.ಗೌಡ ಮಾತನಾಡಿ ಹಾಜಬ್ಬ ಕಿತ್ತಲೆ ಮಾರಿ ಜಾಗ ತೆಗೆದು ಶಾಲೆ ಕಟ್ಟಿಸಲು ಮುಂದಾದರು. ಇವರು ಮಕ್ಕಳಿಗೆ ಇಂದು ಜ್ಞಾನದ ಹಾದಿಯಾಗಿದ್ದಾರೆ. ಇವರಂತಹ ವ್ಯಕ್ತಿ ಸಮಾಜದ ಆಶಾಕಿರಣವಾಗಿದ್ದಾರೆ ಎಂದರೆ ತಪ್ಪಾಗಲಾರದು ಎಂದರು.
ಕಾರ್ಯಕ್ರಮದಲ್ಲಿ ವಿವಿಧ ಭಜನಾಮಂಡಳಿಗಳು ಭಾಗವಹಿಸಿ ಭಜನೆ ಕಾರ್ಯಕ್ರಮ ನಡೆಸಿಕೊಟ್ಟರು, ನಿಡುವಾಳೆ ಸುತ್ತಮುತ್ತಲಿನ ಜನರು ಜಾಗರಣ ಕಾರ್ಯದಲ್ಲಿ ಭಾಗವಹಿಸಿದರು.ಈ ಸಂದರ್ಭದಲ್ಲಿ ರಾಮೇಶ್ವರ ದೇವಸ್ಥಾನದ ವ್ಯವಸ್ಥಾಪಕ ನಾಗರಾಜ್ ಭಟ್, ಜಾವಳಿ ಗ್ರಾ.ಪಂ.ಅಧ್ಯಕ್ಷ ಎಂ.ಪಿ.ಪ್ರದೀಪ್, ಉಪಾಧ್ಯಕ್ಷ ಮನೋಹರ್ ಹಾಗೂ ಸ್ಥಳೀಯ ವಿವಿಧ ಮುಖಂಡರು ಹಾಗೂ ಭಕ್ತರು ಇದ್ದರು.