ಶಿವನಿಗೆ ಬಿಲ್ಪತ್ರೆ, ತುಂಬೆ ಹೂ, ಅಭಿಷೇಕ ಸೇರಿದಂತೆ ಯಾವುದೇ ರೀತಿಯ ಪೂಜೆ ಕೈಂಕರ್ಯ ಮಾಡುವುದಕ್ಕಿಂತ ಶಿವ ಭಕ್ತರಿಗೆ ಒಂದು ಲೋಟ ಮಜ್ಜಿಗೆ ಕೊಟ್ಟರೆ ಶಿವನಿಗೆ ನೂರು ರುದ್ರಾಭಿಷೇಕ ಮಾಡಿದಷ್ಟೇ ಪುಣ್ಯ ಲಭಿಸುತ್ತದೆ ಎಂದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಧರ್ಮೋತ್ತಾನ ಟ್ರಸ್ಟಿ ಚಿಪ್ರಗುತ್ತಿ ಪ್ರಶಾಂತ್ ಹೇಳಿದರು.
ಅವರು ಬುಧವಾರ ಮೂಡಿಗೆರೆ ಸೌದಾಮಿನಿ ಗೆಳೆಯರ ಬಳಗದಿಂದ ಶಿವರಾತ್ರಿ ಪ್ರಯುಕ್ತ ಧರ್ಮಸ್ಥಳ ಪಾದಯಾತ್ರಿಗಳಿಗೆ ಚಾರ್ಮಾಡಿಯಲ್ಲಿ ಏರ್ಪಡಿಸಿದ್ದ ಉಚಿತ ಮಜ್ಜಿಗೆ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಕೆಳದ ಅನೇಕ ವರ್ಷದಿಂದ ಮೂಡಿಗೆರೆ ತಾಲೂಕಿನಲ್ಲಿ ಸೇವಾ ಮನೋಭಾವವುಳ್ಳ ಅನೇಕ ತಂಡಗಳಿಂದ ಧರ್ಮಸ್ಥಳ ಪಾದ ಯಾತ್ರಿಗಳಿಗಾಗಿ ಉಪಹಾರ, ತಂಪು ಪಾನೀಯ, ವಸತಿ, ಶೌಚಾಲಯ ಸೇರಿದಂತೆ ವಿವಿಧ ರೀತಿಯ ಸೌಕರ್ಯ ಒದಗಿಸುತ್ತಿದ್ದಾರೆ. ಇದರಿಂದ ಪಾದಯಾತ್ರಿಗಳಿಗೆ ಬಹಳಷ್ಟು ಅನುಕೂಲವಾಗಿದೆ ಎಂದು ಹೇಳಿದರು.
ತಾನು ಈ ರಸ್ತೆಯಲ್ಲಿ ಬರುವಾಗ ದಾರಿಯುದ್ದಕ್ಕೂ ಪೇಪರ್, ಪ್ಲಾಸ್ಟಿಕ್ ಲೋಟ ಬಾಟಲಿಗಳು ಬಿದಿದ್ದು ಪರಿಸರಕ್ಕೆ ಹಾನಿ ಉಂಟಾಗುತ್ತಿದೆ. ಇದನ್ನು ಮನಗೊಂಡು ಸೌದಾಮನಿ ಬಳಗದವರು ಯಾವುದೇ ಪೇಪರ್ ಲೋಟ, ಪ್ಲಾಸ್ಟಿಕ್ ಬಳಕೆ ಮಾಡದೇ ಪರಿಸರಕ್ಕೆ ಹಾನಿಯಾದಂತೆ ಅಚ್ಚುಕಟ್ಟಾಗಿ ಮಜ್ಜಿಗೆ ವಿತರಿಸುವ ಮೂಲಕ ಪರಿಸರ ಉಳಿಸುವ ಜತೆಗೆ ಪಾದಯಾತ್ರಿಗಳಿಗೆ ಮಾಡಿರುವ ಸೇವೆ ನಿಜಕ್ಕೂ ಶ್ಲಾಘನೀಯ ಎಂದು ಹೇಳಿದರು.
ಸೌದಾಮಿನಿ ತಂಡದ ಎ.ಆರ್.ಉದಯಶಂಕರ್, ಶಿವ ಸಾಗರ್ ತೇಜಸ್ವಿ, ಗಿರೀಶ್ ಹೆಸಗಲ್, ವಿಜಯ್ ಬಿಳಗುಳ, ಸಚಿನ್ ಬಣಕಲ್, ಪ್ರಕಾಶ್ ಕಿರುಗುಂದ, ಗಣೇಶ್, ಚಂದು ಮತ್ತಿತರರಿದ್ದರು.