ಇತ್ತೀಚೆಗೆ ಮೂಡಿಗೆರೆ ತಾಲ್ಲೂಕು ಪಂಚಾಯಿತಿ ಎದುರು ಕೃಷ್ಣಾಪುರದ ನಿವೇಶನ ರಹಿತರೆಂದು ಹೆಸರೇಳಿಕೊಂಡು ಕೆಲ ಮಂದಿ ಪ್ರತಿಭಟನೆ ನಡೆಸಿ, ಗ್ರಾ.ಪಂ. ಅಧ್ಯಕ್ಷರು ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡು ತಮಗೆ ಬೇಕಾದವರಿಗೆ ನಿವೇಶನ ಮಂಜೂರು ಮಾಡಿದ್ದಾರೆಂದು ಹೇಳಿರುವ ಆರೋಪ ಶುದ್ಧ ಸುಳ್ಳು ಎಂದು ದಾರದಹಳ್ಳಿ ಗ್ರಾ.ಪಂ. ಅಧ್ಯಕ್ಷೆ ಎಂ.ಸಾಜಿದಾ ಹೇಳಿದರು.
ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 2013ರಲ್ಲಿ 13 ಗ್ರಾಮದಿಂದ 198 ಮಂದಿ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದ್ದರು. ರಾಜೀವ್ಗಾಂಧಿ ಹೌಸಿಂಗ್ ಗೈಡ್ಲೈನ್ ಪ್ರಕಾರ ಪಂಚಾಯಿತಿಯ ಎಲ್ಲಾ ಸದಸ್ಯರು ಸೇರಿ ಗ್ರಾಮಸಭೆಯಲ್ಲಿ ನಿರ್ಣಯ ಕೈಗೊಂಡು 72 ಮಂದಿ ಫಲಾನುಭವಿಗಳನ್ನು ಕೆಟಗರಿ ಮತ್ತು ಸೀನಿಯಾರಿಟಿ ಪ್ರಕಾರ ನಿವೇಶನ ಹಂಚಿಕೆ ಮಾಡಲಾಗಿದೆ. ಅಲ್ಲದೇ ಆಯ್ಕೆ ಪ್ರಕ್ರಿಯೆಯಲ್ಲಿ ಲೋಪ ಕಂಡು ಬಂದರೆ 7 ದಿನದಲ್ಲಿ ತಕರಾರು ಅರ್ಜಿ ನೀಡಲು ಕೂಡ ನೋಟೀಸ್ ಬೋರ್ಡ್ನಲ್ಲಿ ನೋಟೀಸ್ ಹಾಕಲಾಗಿತ್ತು. ಅದನ್ನು ಹರಿದು ಸುಖಾ ಸುಮ್ಮನೆ ತನ್ನ ಮೇಲೆ ಆರೋಪ ಮಾಡಿದ್ದಾರೆ. ತಾನು ಅಧಿಕಾರ ದುರ್ಬಳಕೆ ಮಾಡಿಕೊಂಡು ತನಗೆ ಬೇಕಾದವರಿಗೆ ನಿವೇಶನ ಹಂಚಿಕೆ ನೀಡಿಲ್ಲ ಎಂದು ದಾಖಲೆ ತೋರಿಸಿ ಸ್ಪಷ್ಟಪಡಿಸಿದರು.
ವಿಕಲಚೇತನ ಮಹಮ್ಮದ್ ಶರೀಫ್ ಎಂಬುವರ ಪತ್ನಿ ತನ್ನ ವಿರುದ್ಧ ಚುನಾವಣೆಯಲ್ಲಿ ಸೋಲು ಕಂಡ ಕಾರಣಕ್ಕೆ ಹಾಗೂ ಮತೋರ್ವ ವ್ಯಕ್ತಿ ಮುಸ್ತಾಕ್ ಎಂಬುವರು ನನ್ನ ಬಳಿ ಬಂದು ಅಧ್ಯಕ್ಷರ ಕೋಟದಲ್ಲಿ ನಿವೇಶನ ನೀಡಬೇಕೆಂದು ಕೇಳಿದ್ದರು. ತಾನು ಹೊಸ ಪಟ್ಟಿ ಫಲಾನುಭವಿಗಳನ್ನು ಬಿಟ್ಟು ಹಳೆ ಪಟ್ಟಿಯಲ್ಲಿದ್ದ ಫಲಾನುಭವಿಗಳಿಗೆ ಪಾರದರ್ಶಕವಾಗಿ ನಿವೇಶನ ಹಂಚಿಕೆ ಮಾಡಿದ್ದರಿಂದ ವಯಕ್ತಿಕ ದ್ವೇಷ ಕಾರುತ್ತಿದ್ದಾರೆ. ಅಲ್ಲದೇ ತನ್ನ ವಿರುದ್ಧ ಇಲ್ಲಸಲ್ಲದ ಅಪಪ್ರಚಾರ ಮಾಡುತ್ತಿದ್ದಾರೆ. ಶರೀಫ್ ಅಂದು ಪ್ರತಿಭಟಿಸಿದ್ದ ಅನೇಕ ಮಂದಿ ಆಸ್ತಿ ಹೊಂದಿದವರಿದ್ದಾರೆ. ಇಂತವರಿಗೆ ನಿವೇಶನ ಹೇಗೆ ನೀಡಲು ಸಾಧ್ಯ ಎಂದು ಪ್ರಶ್ನಿಸಿದ ಅವರು, ಈ ಬಗ್ಗೆ ತಾನು ಪಾರದರ್ಶಕವಾಗಿ ಹಂಚಿಕೆ ಮಾಡಿಲ್ಲ ಎಂಬುದಾದರೆ ಅವರು ಭಹಿರಂಗ ಚರ್ಚೆಗೆ ಬರಲಿ. ಆಗ ದಾಖಲೆ ಸಮೇತ ಉತ್ತರ ನೀಡುತ್ತೇನೆಂದು ಸವಾಲು ಹಾಕಿದರು.
ನಿಯಮದ ಪ್ರಕಾರ ವಿಕಲಚೇತನರ ಕೋಟದಲ್ಲಿ ಓರ್ವರಿಗೆ ಮಾತ್ರ ನಿವೇಶನ ನೀಡಬೇಕಿತ್ತು. ಆದರೆ ಮಾನವೀಯತೆ ದೃಷ್ಟಿಯಿಂದ 3 ನಿವೇಶನ ವಿಲಕಚೇತನರಿಗೆ ನೀಡಲಾಗಿದೆ. ಈಗಾಗಲೇ ಮೆಣಸಮಕ್ಕಿಯಲ್ಲಿ 72 ಮಂದಿಗೆ ನಿವೇಶನ ಹಂಚಿಕೆ ಮಾಡಲಾಗಿದ್ದು, ಕಿತ್ತಲೆಗಂಡಿಯಲ್ಲಿ 120 ನಿವೇಶನ ಹಂಚಿಕೆಗೆ ಜಾಗ ಕಾಯ್ದಿರಿಸಲಾಗಿದೆ. ಅಲ್ಲಿಯೂ ಕೂಡ ಸರಕಾರದ ನಿಯಮ ಪ್ರಕಾರವೇ ಬಾಕಿ ಉಳಿದಿರುವ ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಮಾಡಲಾಗುವುದು ಎಂದು ಹೇಳಿದರು.
ಗ್ರಾ.ಪಂ. ಸದಸ್ಯರಾದ ಕೆ.ಎಂ.ಸಿದ್ದೇಶ್, ಕೆ.ವಿ.ಮಂಜುನಾಥ್, ಡಿ.ಕೆ.ವಿಕ್ರಮ್, ಸಂಪತ್ ಪಟದೂರು, ಸಾಧನ ಮಣಿಶ್, ಕುಸುಮ ಸಂಜೀವ, ರೇಣುಕಾ ಮಹೇಶ್ ಉಪಸ್ಥಿತರಿದ್ದರು.