ಕರಡಿ ಹೆಸರಿನ ಒಂಟಿ ಸಲಗವೊಂದು ತೋಟಕ್ಕೆ ನುಗ್ಗಿ ಕಾರ್ಮಿಕರನ್ನು ಅಟ್ಟಾಡಿಸಿದ ಘಟನೆ ಸಕಲೇಶಪುರ ತಾಲ್ಲೂಕಿನಲ್ಲಿ ನಡೆದಿದೆ. ತೋಟದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರನ್ನು ಬೆನ್ನಟ್ಟಿ ದಾಳಿ ಮಾಡಿತ್ತು. ಅದೃಷ್ಟವಶಾತ್ ಕೂದಲೆಳೆ ಅಂತರದಲ್ಲಿ ಕಾಡಾನೆಯಿಂದ ಕಾರ್ಮಿಕರಿಬ್ಬರು ಬಚಾವ್ ಆಗಿ ಬದುಕುಳಿದಿದ್ದಾರೆ.
ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಕೆಸಗುಲಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಭಾನುವಾರ ಮಧ್ಯಾಹ್ನ 3:30ರ ಸುಮಾರಿಗೆ ಕಾಡಾನೆಯು ಕೆಸಗುಲಿ ಗ್ರಾಮದ ಪಿಂಟೋ ಎಂಬುವವರ ಅಡಿಕೆ ತೋಟಕ್ಕೆ ಎಂಟ್ರಿ ಕೊಟ್ಟಿತ್ತು. ಕಾರ್ಮಿಕರನ್ನು ಕಂಡೊಡನೆ ಅಟ್ಟಾಡಿಸಿಕೊಂಡು ಬಂದಿದೆ. ಪಿಂಟು ಎಸ್ಟೇಟ್ನ ಅಡಿಕೆ ತೋಟದಲ್ಲಿ ಇಬ್ಬರು ಕೂಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ತಮ್ಮ ಕೆಲಸದಲ್ಲಿ ನಿರತರಾಗಿದ್ದ ಕಾರ್ಮಿಕರಿಗೆ ತೋಟಕ್ಕೆ ಆನೆ ಬಂದಿದ್ದು ಗೊತ್ತೇ ಆಗಿರಲಿಲ್ಲ.
ನಾಯಿಯೊಂದು ಕಾಡಾನೆ ಕಂಡು ಬೊಗಳಿದ್ದು, ಆಗ ತಲೆ ಎತ್ತಿ ನೋಡಿದಾಗ ಕಾಡಾನೆಯು ಬರುತ್ತಿರುವುದು ಕಾರ್ಮಿಕರಿಗೆ ಕಂಡಿದೆ. ದಾಳಿ ಮಾಡಲು ಬರುತ್ತಿದ್ದಂತೆ ತಪ್ಪಿಸಿಕೊಂಡು ಕಾರ್ಮಿಕ ಓಡಿದ್ದಾನೆ. ಆದರೂ ಬಿಡದೇ ಆತನ ಬೆನ್ನಟ್ಟಿದ ಕಾಡಾನೆ ಅಟ್ಟಾಡಿಸಿದೆ. ಕಾರ್ಮಿಕ ಅಡ್ಡಾದಿಡ್ಡಿಯಾಗಿ ಓಡಿದ್ದರಿಂದ ಕೂದೆಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಮತ್ತೊಬ್ಬ ಕಾರ್ಮಿಕನು ಓಡಿ ಹೋಗಿ ಪ್ರಾಣ ಉಳಿಸಿಕೊಂಡಿದ್ದಾರೆ.
ಇದೇ ವೇಳೆ ಮನೆಯೊಳಗೆ ಹೋಗಿ ಪ್ರಾಣ ಉಳಿಸಿಕೊಳ್ಳಲು ಯತ್ನಿಸಿದ್ದು, ಬೀಗ ಹಾಕಿದ್ದರಿಂದ ಮನೆ ಮುಂದೆ ನಿಲ್ಲಿಸಿದ್ದ ಕಾರಿನ ಕೆಳಗೆ ಹೋಗಿ ಮಲಗಿದ್ದಾರೆ. ಕಾಡಾನೆ ಅಟ್ಯಾಕ್ ಮಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.