ಅಮೆರಿಕದಲ್ಲಿ ಕೋಲ್ಕೊತಾ ಮೂಲದ ಖ್ಯಾತ ಭರತನಾಟ್ಯ ಹಾಗೂ ಕೂಚಿಪುಡಿ ನೃತ್ಯಪಟು ಅಮರ್ನಾಥ್ ಘೋಷ್ ಅವರು ಹತ್ಯೆಗೀಡಾಗಿದ್ದಾರೆ.
ಮಿಸೌರಿಯಲ್ಲಿ ಅಮರ್ನಾಥ್ ಘೋಷ್ ಅವರು ಸಂಜೆ ವಾಯುವಿಹಾರಕ್ಕೆ ಹೋಗಿದ್ದಾಗ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಸೇಂಟ್ ಲೂಯಿಸ್ನಲ್ಲಿರುವ ವಾಷಿಂಗ್ಟನ್ ವಿಶ್ವವಿದ್ಯಾಲಯದಲ್ಲಿ ಅಮರ್ನಾಥ್ ಘೋಷ್ ಅವರು ಮಾಸ್ಟರ್ ಆಫ್ ಫೈನ್ ಆರ್ಟ್ಸ್ ಅಧ್ಯಯನ ಮಾಡುತ್ತಿದ್ದರು. ಇವರು ಸಂಜೆ ವಾಕಿಂಗ್ ಹೋಗಿದ್ದಾಗ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಅಮರ್ನಾಥ್ ಘೋಷ್ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕೋಲ್ಕೊತಾ ಮೂಲದವರಾದ ಇವರು ಭರತನಾಟ್ಯ ಹಾಗೂ ಕೂಚಿಪುಡಿ ನೃತ್ಯದಲ್ಲಿ ಅಪಾರ ಖ್ಯಾತಿ ಗಳಿಸಿದ್ದಾರೆ.
ಅಮರ್ನಾಥ್ ಘೋಷ್ ನಿಧನದ ಕುರಿತು ಅವರ ಸ್ನೇಹಿತೆ, ನಟಿ ದೇವೋಲೀನಾ ಭಟ್ಟಾಚಾರ್ಜಿ ಅವರು ಮಾಹಿತಿ ನೀಡಿದ್ದಾರೆ. “ನನ್ನ ಸ್ನೇಹಿತ ಅಮರ್ನಾಥ್ ಘೋಷ್ ಅಮೆರಿಕದಲ್ಲಿ ಹತ್ಯೆಗೀಡಾಗಿದ್ದಾನೆ. ಆತನಿಗೆ ಒಂದೇ ಮಗು ಇದೆ. ಮೂರು ವರ್ಷಗಳ ಹಿಂದೆ ತಾಯಿ ತೀರಿಕೊಂಡಿದ್ದಾರೆ. ಅಮರ್ನಾಥ್ ಘೋಷ್ ಬಾಲ್ಯದಲ್ಲಿರುವಾಗಲೇ ತಂದೆ ಅಗಲಿದ್ದಾರೆ. ಅಮೆರಿಕದಲ್ಲಿ ಆತನ ಪಾರ್ಥಿವ ಶರೀರವನ್ನು ಭಾರತಕ್ಕೆ ತರಲು ಗೆಳೆಯರ ಹೊರತಾಗಿ ಕುಟುಂಬದಲ್ಲಿ ಯಾರೂ ಇಲ್ಲ. ಭಾರತದ ರಾಯಭಾರ ಕಚೇರಿ, ಪ್ರಧಾನಿ ಹಾಗೂ ಕೇಂದ್ರ ಸಚಿವರು ಆತನ ಶವವನ್ನು ಭಾರತಕ್ಕೆ ತರಲು ವ್ಯವಸ್ಥೆ ಮಾಡಬೇಕು ಎಂಬುದಾಗಿ ಕೋರುತ್ತೇನೆ” ಎಂದು ಭಟ್ಟಾಚಾರ್ಜಿ ಪೋಸ್ಟ್ ಮಾಡಿದ್ದಾರೆ.
ಅಮೆರಿಕದಲ್ಲಿ ಭಾರತದ ವಿದ್ಯಾರ್ಥಿಗಳ ಮೇಲೆ ದಾಳಿ, ಹತ್ಯೆಗಳು ಇತ್ತೀಚೆಗೆ ಹೆಚ್ಚಾಗುತ್ತಿದೆ. ಈ ಬಗ್ಗೆ ಕಳೆದ ವಾರ ಸ್ವತಃ ಅಮೇರಿಕಾ ಅಧ್ಯಕ್ಷರ ಕಛೇರಿಯಿಂದಲೇ ಪ್ರತಿಕ್ರಿಯೆ ನೀಡಲಾಗಿತ್ತು. ಸರಣಿ ಹತ್ಯೆಗಳಿಂದಾಗಿ ಅಲ್ಲಿನ ಭಾರತೀಯರು ಮತ್ತು ಅಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳ ಪೋಷಕರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.