ಕಳೆದ ನಾಲ್ಕೈದು ದಿನದಿಂದ ಮೂಡಿಗೆರೆ ತಾಲೂಕಿನ ಮಾಕೋನಹಳ್ಳಿ, ಕಾರ್ ಬೈಲ್ ಭಾಗದಲ್ಲಿ 20ಕ್ಕೂ ಅಧಿಕ ಕಾಡಾನೆಗಳು ಬೀಡು ಬಿಟ್ಟಿದ್ದು, ಅನೇಕ ವರ್ಷದಿಂದ ಕಾಪಾಡಿಕೊಂಡು ಬಂದಿದ್ದ ಕಾಫಿ ತೋಟವನ್ನು ಮಂಗಳವಾರ ರಾತ್ರಿ ಕಾಡಾನೆಗಳು ಸರ್ವನಾಶಪಡಿಸಿವೆ.
ಕಾರ್ ಬೈಲ್ ನ ಬೆಳೆಗಾರರಾದ ಅಜಿತ್, ಮದನ್, ಕೆ.ಎಂ.ಶಶಿಧರ್, ಪ್ರಹ್ಲಾಧ್, ಸುಪ್ರಿತ್ ಮುಂತಾದವರ ತೋಟಕ್ಕೆ ಕಾಡಾನೆಗಳು ಲಗ್ಗೆಯಿಟ್ಟು ಅಪಾರ ಪ್ರಮಾಣದ ಕಾಫಿ, ಕಾಳುಮೆಣಸು, ಅಡಕೆ, ಬಾಳೆ ಗಿಡಗಳನ್ನು ನಾಶಪಡಿಸಿವೆ. ಅರಣ್ಯ ಇಲಾಖೆ ಸಿಬ್ಬಂದಿ ಪ್ರತಿನಿತ್ಯ ಸಂಜೆ ಸ್ಥಳಕ್ಕೆ ಆಗಮಿಸಿ ಪಟಾಕಿ ಸಿಡಿಸಿ ಹೋಗುತ್ತಿದ್ದಾರೆ ಹೊರತು ಕಾಡಾನೆಗಳನ್ನು ಸ್ಥಳಬಿಟ್ಟು ತೆರಳುತ್ತಿಲ್ಲ.
ನಾವು ಸಣ್ಣ ಬೆಳೆಗಾರರು. ಇದರಿಂದಲೇ ಬದುಕು ಸಾಗಿಸುತ್ತಿದ್ದೇವೆ. ಈಗಾಗಲೇ ಮಳೆಯಿಲ್ಲದೇ ಸಂಕಷ್ಟ ಎದುರಿಸುವ ಸಂದರ್ಭದಲ್ಲಿ ಫಸಲಿಗೆ ಬಂದಿದ್ದ ಕಾಳು ಮೆಣಸು ಗಿಡ ಸಹಿತ ಅನೇಕ ವರ್ಷದಿಂದ ಕಾಪಾಡಿಕೊಂಡು ಬಂದಿದ್ದ ಕಾಫಿ ಗಿಡಗಳನ್ನು ನಾಶಪಡಿಸಿದೆ. ಬೆಳೆ ನಷ್ಟದಿಂದಾಗಿ ನಾವು ಆತ್ಮಹತ್ಯೆ ದಾರಿ ಹಿಡಿಯುವ ಪರಿಸ್ಥಿತಿ ಒಂದೊದಗಿದೆ ಎಂದು ಬೆಳೆಗಾರರು ತಮ್ಮ ಅಳಲು ತೋಡಿಕೊಂಡಿದ್ದಾರೆ. ಕಾಡಾನೆ ಹಾವಳಿಯಿಂದ ತಿರುಗಾಡಲು ಭಯಬೀತರಾಗಿದ್ದು, ತೋಟದ ಕೆಲಸಕ್ಕೆ ಕಾರ್ಮಿಕರು ಬರುತ್ತಿಲ್ಲ. ಇಲ್ಲಿರುವ ಕಾಡಾನೆಗಳನ್ನು ಸ್ಥಳಾಂತರಿಸಿ, ಬೆಳೆನಷ್ಟ ಪರಿಹಾರ ಒದಗಿಸಬೇಕೆಂದು ಒತ್ತಾಯಿಸಿದ್ದಾರೆ.