ಆಸ್ತಿ ವಿಚಾರಕ್ಕೆ ಅಣ್ಣನಿಂದಲೇ ತಮ್ಮನ ಬರ್ಬರ ಹತ್ಯೆಯಾಗಿದೆ. ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಅರೆಹಳ್ಳಿಯಲ್ಲಿ ಕಾಫಿ ತೋಟವೊಂದರಲ್ಲಿ ಈ ಘಟನೆ ನಡೆದಿದೆ. ಅರೆಹಳ್ಳಿ ಗ್ರಾಮದ ಕೇಶವ ನಗರದ ನಿವಾಸಿ ಸಂಗಯ್ಯ (58) ಅಣ್ಣನಿಂದಲೇ ಹತ್ಯೆಯಾದ ದುರ್ದೈವಿ.
ಅರೆಹಳ್ಳಿಯ ಗೂರ್ಗಿಹಳ್ಳಿ ಕಾಫಿ ತೋಟದಲ್ಲಿ ಈರಯ್ಯ ಎಂಬಾತ ತನ್ನ ತಮ್ಮನನ್ನೇ ಕೊಚ್ಚಿ ಕೊಲೆ ಮಾಡಿದ್ದಾನೆ. ಅಣ್ಣ-ತಮ್ಮಂದಿರ ನಡುವೆ ಜಮೀನಿಗೆ ಸಂಬಂಧಿಸಿದ ವಿವಾದ ಇತ್ತು ಎನ್ನಲಾಗಿದೆ. ಈ ವಿಚಾರವಾಗಿ ಇಂದು ಮಾತಿಗೆ ಮಾತು ಬೆಳೆದು ಸಿಟ್ಟಾದ ಈರಯ್ಯ ಮಚ್ಚಿನಿಂದ ಹಲ್ಲೆ ನಡೆಸಿ ಸಂಗಯ್ಯರನ್ನು ಹತ್ಯೆ ಮಾಡಿದ್ದಾನೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಕೊಲೆ ಆರೋಪಿ ಈರಯ್ಯನನ್ನು ವಶಕ್ಕೆ ಪಡೆದು ವಿಚಾರಣೆಯನ್ನು ನಡೆಸುತ್ತಿದ್ದಾರೆ.
ಅರೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.