ಭೂ ಸಮಸ್ಯೆಗಳ ಪರಿಹಾರ ಹಾಗೂ ಅಕ್ರಮ ಭೂ ಖಾತೆ ರದ್ಧತಿಗೆ ಆಗ್ರಹಿಸಿ ಗುರುವಾರ ಭೂ ಸಂಘರ್ಷ ಸಮಿತಿ ವತಿಯಿಂದ ಮೂಡಿಗೆರೆ ಪಟ್ಟಣದ ತಾಲೂಕು ಕಚೇರಿ ಎದುರು ಅಹೋರಾತ್ರಿ ಮಹಾಧರಣಿ ಪ್ರಾರಂಭಿಸಲಾಯಿತು.
ಸಿಪಿಐಎಂಎಲ್ ರಾಜ್ಯ ಕಾರ್ಯದರ್ಶಿ ಬಿ.ರುದ್ರಯ್ಯ ಮಾತನಾಡಿ, ಇಲ್ಲಿನ ಮೀಸಲು ಕ್ಷೇತ್ರದಲ್ಲಿ ದಲಿತರು ಹೆಚ್ಚಾಗಿದ್ದು, ದುಡಿಮೆಯಲ್ಲಿ ಬಡತನ, ನಿವೇಶನ, ಸ್ಮಶಾನದಂತಹ ಸಮಸ್ಯೆಗಳ ಸುಳಿಯಲ್ಲಿ ದಲಿತರೇ ಸಿಕ್ಕಿಕೊಂಡಿದ್ದಾರೆ. ತಾಲೂಕಿನಲ್ಲಿ ಗೋಮಾಳ, ಊರುಉಡುಬೆ, ಗ್ರಾಮಠಾಣ, ಕೆರೆಅಂಗಳ, ಹುಲ್ಲುಬನ್ನಿ, ಕಾಫಿ ಖರಾಬ್, ಕುರಿಮುಂದೆ, ನಡುತೋಪಿನಂತಹ ಸಾವಿರಾರು ಎಕರೆ ಸರಕಾರಿ ಭೂಮಿಯನ್ನು ಭೂ ಮಾಲೀಕರು ಒತ್ತುವರಿ ಮಾಡಿಕೊಂಡಿದ್ದರಿಂದ ನಮ್ಮ ಜನ ಭೂ ಹೀನರಾಗಿದ್ದಾರೆ. ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಬಡವರು ಬಡವರಾಗಿಯೇ ಉಳಿಯುವಂತಾಗಿದೆ. ಹಾಗಾಗಿ ಮಲೆನಾಡಿನ ಭೂಮಿಗೆ ಭೂಮಿತಿ ಕಾಯ್ದೆ ಜಾರಿ ಮಾಡಬೇಕು. ದಲಿತರ ಭೂಮಿ ದಾಖಲೆ ನಾಶಪಡಿಸಿರುವ ಬಗ್ಗೆ ತನಿಖೆಯಾಗಬೇಕು. ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಹಾಗೂ ಅರಣ್ಯ ಇಲಾಖೆ ಡಿಸಿಎಫ್ ಬರಬೇಕೆಂದು ಆಗ್ರಹಿಸಿದರು.
ಬಿಎಸ್ಪಿ ತಾಲೂಕು ಅಧ್ಯಕ್ಷ ಲೋಕವಳ್ಳಿ ರಮೇಶ್ ಮಾತನಾಡಿ, ಫಾರಂ ನಂ 53ಯಲ್ಲಿ ದಲಿತರು ಸಲ್ಲಿಸಿದ ಅರ್ಜಿಯನ್ನು ಅಧಿಕಾರಿಗಳು ವಿಲೇ ಮಾಡದೇ ಕೇವಲ ಉಳ್ಳವರಿಗೆ ಮಾತ್ರ ಮಾಡಿಕೊಡುತ್ತಿದ್ದಾರೆ. ತಾಲೂಕಿನಲ್ಲಿ ಒತ್ತುವರಿಯಾಗಿದ್ದ ಭೂಮಿಯನ್ನು ತೆರವುಗೊಳಿಸಿದರೆ ಭೂಮಿ ಸಮಸ್ಯೆಯಿಂದ ಸಂಪೂರ್ಣ ಮುಕ್ತಿ ಸಿಗುತ್ತದೆ. ಸ್ಮಶಾನ ಹಾಗೂ ಸರಕಾರಿ ಭೂಮಿ ಒತ್ತುವರಿ ಮಾಡಿಕೊಂಡಿರುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಅಕ್ರಮ ಭೂ ಮಂಜೂರಾತಿ ರದ್ದುಪಡಿಸಬೇಕು. ಸರಕಾರಿ ಭೂಮಿ ಒತ್ತುವರಿ ಗುತ್ತಿಗೆ ನೀತಿ ಕೈಬಿಡಬೇಕು. ತಾಲೂಕು ಕಚೇರಿಯಲ್ಲಿರುವ ಅನೇಕ ಭ್ರಷ್ಟ ಅಧಿಕಾರಿಗಳ ಆಸ್ತಿ ತನಿಖೆಯಾಗಬೇಕೆಂದು ಒತ್ತಾಯಿಸಿದ ಅವರು, ಈ ಹೋರಾಟದ ಮೂಲಕ ನಮ್ಮ ಹಕ್ಕನ್ನು ಪಡೆದೇ ತೀರುತ್ತೇವೆಂದು ಭರವಸೆ ವ್ಯಕ್ತಪಡಿಸಿದರು.
ಧರಣಿಗೂ ಮುನ್ನ ಮೂಡಿಗೆರೆ ಪಟ್ಟಣದಲ್ಲಿ ನೂರಾರು ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ಸಾಗಿದರು
ಸಮಿತಿಯ ವಿವಿಧ ಹೋಬಳಿ ಅಧ್ಯಕ್ಷರಾದ ಜಗದೀಶ್ ಕಾರ್ಬೈಲ್, ನಾಗೇಶ್ ಗೋಣಿಬೀಡು, ಲಕ್ಷ್ಮಣ್ ಬಣಕಲ್, ಗಿರೀಶ್ ಆಲ್ದೂರು, ಸಂದೀಪ್ ಬಾಳೂರು, ಸಿ.ಪಿ.ಐ. ತಾಲ್ಲೂಕು ಕಾರ್ಯದರ್ಶಿ ರಮೇಶ್ ಕೆಳಗೂರು, ವಕೀಲರಾದ ಕೆ.ಸಿ.ಚಂದ್ರಶೇಖರ್, ದೇವರಾಜ್, ಚಂದ್ರು ಹಳೆಕೆರೆ, ಪ್ರತಾಪ್, ರಘು, ವಿವಿಧ ಸಂಘಟನೆ ಮುಖಂಡರಾದ ಶಿವಪ್ರಸಾದ್, ಸಮರ್ಥ್, ಕೃಷ್ಣಪ್ಪ ಕಮ್ಮರಗೂಡು, ಹೊನ್ನೇಶ್ ಬೆಟ್ಟಗೆರೆ, ಅಭಿಜಿತ್ ಹೆಡದಾಳ್, ರುದ್ರೇಶ್ ಕಡಿದಾಳ್ ಮತ್ತಿತರರಿದ್ದರು.