ವಾಹನ ಚಲಾಯಿಸುವ ವೇಳೆಯಲ್ಲಿ ಹೆಚ್ಚು ಮೊಬೈಲ್ ಬಳಸದಂತೆ ರಸ್ತೆ ಬದಿಯ ಸೂಚನಾ ಫಲಕಗಳನ್ನು ಗಮನಿಸಿ ಚಾಲನೆ ಮಾಡುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಬೇಕು ಎಂದು ಚಿಕ್ಕಮಗಳೂರು ಮೋಟಾರ್ ವಾಹನ ನಿರೀಕ್ಷಕ ಹೆಚ್.ಎಸ್.ಜಗದೀಶ್ ಹೇಳಿದರು.
ಸಾರಿಗೆ ಇಲಾಖೆ, ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ, ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ, ಜೆಸಿಐ, ಬ್ರಹ್ಮಕುಮಾರೀಸ್, ಕನ್ನಡಸೇನೆ, ಲಯನ್ಸ್ ಕ್ಲಬ್, ವಿವೇಕ ಜಾಗೃತಿ ಬಳಗ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಚಿಕ್ಕಮಗಳೂರು ನಗರದ ತಾಲ್ಲೂಕು ಕಚೇರಿ ಆವರಣದಲ್ಲಿ ಗುರುವಾರ ಸಂಜೆ 35ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಸಮಾರೋಪ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ವಾಹನ ಚಾಲನೆ ವೇಳೆಯಲ್ಲಿ ಸವಾರರು ಅಗತ್ಯ ಸಂದರ್ಭಗಳಲ್ಲಿ ಕಡ್ಡಾಯವಾಗಿ ಕೈಸನ್ನೆಗಳನ್ನು ತೋರಿಸು ವುದು ಅಗತ್ಯ. ಪಾದಚಾರಿಗಳು ರಸ್ತೆ ದಾಟಲು ಕಡ್ಡಾಯವಾಗಿ ಜೀಬ್ರಾ ಕ್ರಾಸಿಂಗ್ ಬಳಸಬೇಕು. ನಿಗಧಿತಪಡಿಸಿರುವ ವೇಗದ ಸಮಿತಿಯನ್ನು ಮೀರಕೂಡದು ಎಂದು ಸಲಹೆ ಮಾಡಿದರು.
ದಿನನಿತ್ಯ ಚಟುವಟಿಕೆಗಳಲ್ಲಿ ತೆರಳುವ ಮುನ್ನ ವಾಹನಕ್ಕೆ ಸಂಬಂಧಿಸಿದ ದಾಖಲೆಗಳನ್ನು ವಾಹನದಲ್ಲಿ ಇರಿ ಸುವುದು, ದ್ವಿಚಕ್ರ ವಾಹನ ಚಾಲಕರು ಕಡ್ಡಾಯವಾಗಿ ಹೆಲ್ಮೆಟ್ ಧರಿಸುವುದು ಉತ್ತಮ ಎಂದ ಅವರು ಆ ನಿಟ್ಟಿನಲ್ಲಿ ಸಾರಿಗೆ ಇಲಾಖೆ ಕಾನೂನನ್ನು ಉಲ್ಲಂಘನೆಯಾಗದಂತೆ ಕಟ್ಟುನಿಟ್ಟಿನ ಕ್ರಮ ವಹಿಸಬೇಕು ಎಂದು ತಿಳಿಸಿದರು.
ರಸ್ತೆಗಳ ಆಸುಪಾಸಿನಲ್ಲಿ ಪಾದಚಾರಿಗಳು ಕ್ರಾಸಿಂಗ್ ಸಮಯದಲ್ಲಿ ಹೆಚ್ಚು ಗಮನಹರಿಸಬೇಕು. ನಿಧಾನಗತಿ ಯಲ್ಲಿ ಸಾಗುವ ಪ್ರವೃತ್ತಿಯನ್ನು ಬೆಳೆಸಿಕೊಂಡರೆ ಮಾತ್ರ ಯಾವುದೇ ಅಪಘಾತಗಳು ಸಂಭವಿಸುವುದಿಲ್ಲ. ಹೀಗಾಗಿ ಅತಿವೇಗವು ಮಾನವನ ಜೀವಕ್ಕೆ ಕುತ್ತು ತರುವುದು ಖಂಡಿತ ಎಂದು ಹೇಳಿದರು.
ಪ್ರಾದೇಶಿಕ ಸಾರಿಗೆ ಇಲಾಖೆ ತಾಂತ್ರಿಕ ಸಹಾಯಕ ಸಂತೋಷ್ ಮಾತನಾಡಿ ಕಳೆದ ಜನವರಿ 15 ರಿಂದ ಪ್ರಾರಂಭಗೊಂಡ 35ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಜಿಲ್ಲೆಯ ವಿವಿಧ ತಾಲ್ಲೂಕು ಹಾಗೂ ಗ್ರಾಮ ಪಂಚಾ ಯಿತಿ ವ್ಯಾಪ್ತಿಯಲ್ಲಿ ನಡೆಸಿ ಸಾರ್ವಜನಿಕರು, ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಕಾರ್ಯದಲ್ಲಿ ಒಂದು ತಿಂಗಳ ಕಾಲ ಪೂರೈಸಿ ಇದೀಗ ಸಮಾರೋಪಗೊಂಡಿದೆ ಎಂದು ತಿಳಿಸಿದರು.
ಇಂದಿನ ಯುವಪೀಳಿಗೆಯಲ್ಲಿ ಮೋಟಾರ್ ಬೈಕ್ ಬಳಸುವ ಸಂಖ್ಯೆ ಹೆಚ್ಚಳಗೊಳ್ಳುತ್ತಿದೆ. ರಾಜಾರೋ ಷವಾಗಿ ಸಣ್ಣಪುಟ್ಟ ಗಲ್ಲಿಗಳಲ್ಲೂ ಅತಿವೇಗದಿಂದ ಸಂಚರಿಸುತ್ತಿರುವುದು ಗಮನಿಸಿದ್ದೇವೆ. ಇಂಥ ಸ್ಥಿತಿಯಲ್ಲಿ ಕಡಿವಾಣ ಹಾಕುವ ದೃಷ್ಟಿಯಿಂದ ರಸ್ತೆ ಸುರಕ್ಷತಾ ಸಪ್ತಾಹ ಹಮ್ಮಿಕೊಂಡು ಅರಿವು ಮೂಡಿಸುವ ಪ್ರಯತ್ನಕ್ಕೆ ಕೈಹಾಕಲಾಗಿದೆ ಎಂದು ತಿಳಿಸಿದರು.
ಜೆಸಿಐ ಅಧ್ಯಕ್ಷೆ ಪುಷ್ಪ ವಿಜಯ್ ಮಾತನಾಡಿ ಪಾದಚಾರಿಗಳು ಹಾಗೂ ಸವಾರರಿಗೆ ಅವರದೇಯಾದ ಕುಟುಂಬಗಳಿರುತ್ತವೆ. ಹಾಗಾಗಿ ಸವಾರರು ಅತಿಹೆಚ್ಚು ಜಾಗೃತೆಯಿಂದ ಚಲಾಯಿಸುವುದನ್ನು ರೂಢಿಸಿಕೊಳ್ಳಬೇಕು. ಮದ್ಯ ವ್ಯಸನ ಅಥವಾ ಇನ್ಯಾವುದೇ ಕಾರಣಗಳಿಂದ ಅಪಘಾತ ನಡೆದರೆ ಕುಟುಂಬ ಬೀದಿಬೀಳು ಸ್ಥಿತಿಯಿರುವ ಹಿನ್ನೆ ಲೆ ಯಲ್ಲಿ ಅರಿತು ಚಾಲನೆ ಮಾಡಬೇಕು ಎಂದರು.
ಇದೇ ವೇಳೆ ರಸ್ತೆ ಸುರಕ್ಷತಾ ಸಪ್ತಾಹ ಜಾಥಾವು ತಾಲ್ಲೂಕು ಕಚೇರಿ ಆವರಣದಿಂದ ಆರಂಭಗೊಂಡು ಆಜಾದ್ಪಾರ್ಕ್ ವೃತ್ತದವರೆಗೆ ಸಂಚರಿಸಿ ಸಮಾರೋಪಗೊಂಡಿತು.
ಈ ಸಂದರ್ಭದಲ್ಲಿ ಬ್ರಹ್ಮಕುಮಾರೀಸ್ ಜಿಲ್ಲಾ ಸಂಚಾಲಕ ಭಾಗ್ಯಕ್ಕ, ವಿವೇಕ ಜಾಗೃತ ಬಳಗದ ರಾಜೀವ್, ಕನ್ನಡಸೇನೆ ಆಟೋ ಘಟಕದ ಅಧ್ಯಕ್ಷ ಜಯಪ್ರಕಾಶ್, ಭೂಮಿಕಾ ಟಿವಿ ಸಂಪಾದಕ ಅನಿಲ್ ಆನಂದ್, ಅನುವೃತ ಸಮಿತಿಯ ಬಸ್ಸಾರಿ, ಲಯನ್ಸ್ ಕ್ಲಬ್ ಅಧ್ಯಕ್ಷ ರಮೇಶ್, ವಂದೇ ಮಾತರಂ ಟ್ರಸ್ಟ್ ಅಧ್ಯಕ್ಷ ಪ್ರೀತೇಶ್, ಡಾ|| ಅನಿಲ್ ಕುಮಾರ್, ಆರ್ಟಿಓ ಪ್ರಭಾರ ಅಧೀಕ್ಷಕಿ ರಮ್ಯ, ಸಿಬ್ಬಂದಿಗಳಾದ ಲೋಹಿತ್, ತೇಜಸ್, ವಿಜಯ್ಕುಮಾರ್, ವಾಹನ ಚಾಲಕರು, ಮಾಲೀಕರು ಸೇರಿದಂತೆ ಮತ್ತಿತರರು ಹಾಜರಿದ್ದರು.