ಮಲೆನಾಡು ಭಾಗಕ್ಕೆ ತೋಟಗಳಲ್ಲಿ ಮಿಶ್ರ ಬೆಳೆಯಾಗಿ ಕೋಕೋ ಬೆಳೆ ಸೂಕ್ತ ಎಂದು ಮೂಡಿಗೆರೆ ತೋಟಗಾರಿಕಾ ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕಿ ಡಾ. ಎಚ್.ಆರ್.ಭೂಮಿಕಾ ಹೇಳಿದರು.
ಅವರು ಶುಕ್ರವಾರ ತೋಟಗಾರಿಕಾ ಮಹಾವಿದ್ಯಾಲಯದ ಸಭಾಂಗಣದಲ್ಲಿ ಏರ್ಪಡಿಸಿದ್ದ ಕೋಕೋ ಬೆಳೆಯಲ್ಲಿ ಸುಧಾರಿತ ಕೃಷಿ ಪದ್ಧತಿಗಳ ಬಗ್ಗೆ ರೈತರಿಗೆ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬದಲಾಗುತ್ತಿರುವ ಹವಾಗುಣದಲ್ಲಿ ಒಂದೆ ಬೆಳೆಯನ್ನು ನೆಚ್ಚಿ ರೈತರು ಕೃಷಿ ನಡೆಸುವುದರಿಂದ ಆರ್ಥಿಕ ಆದಾಯಕ್ಕೆ ತೊಡಕುಂಟಾಗುತ್ತದೆ. ಹಾಗಾಗಿ ಮಿಶ್ರಬೆಳೆ ಪದ್ದತಿ ಅನುಸರಿಸುವುದರಿಂದ ಆರ್ಥಿಕವಾಗಿ ಸಬಲರಾಗಲು ಸಹಕಾರಿಯಾಗುತ್ತದೆ ಎಂದು ಹೇಳಿದರು.
ತೋಟಗಾರಿಕಾ ಮಹಾವಿದ್ಯಾಲಯದ ಡೀನ್ ಡಾ. ನಾರಾಯಣ್ಎಸ್. ಮಾವರ್ಕರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೋಕೋ ಅಭಿವೃದ್ಧಿ ನಿರ್ದೇಶನಾಲಯ, ಕೊಚ್ಚಿನ್, ಕೇರಳ ಬೆಳೆ ಉತ್ಪಾದನೆಗೆ ಪ್ರೋತ್ಸಾಹ ನೀಡುತ್ತಿದ್ದು, ಸಹಾಯಧನಕ್ಕಾಗಿ ರೈತರು ಮಹಾವಿದ್ಯಾಲಯದ ಮೂಲಕ ಪ್ರಸ್ತಾವನೆ ಸಲ್ಲಿಸಬಹುದುದೆಂದು ಮಾಹಿತಿ ನೀಡಿದರು.
ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ಸಹ ಸಂಶೋಧನಾ ನಿರ್ದೇಶಕ ಡಾ.ಶಿವಪ್ರಸಾಧ್, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕಿ ಶ್ವೇತಾ, ಪ್ರಾಧ್ಯಾಪಕರಾದ ಸೈಯದ್ಇಮ್ರಾನ್, ಡಾ. ಶ್ರೀನಿವಾಸ್ ಮತ್ತಿತರರಿದ್ದರು.